ಹಳೆಯ ಪ್ರಕರಣದಲ್ಲಿ ಭಟ್ಕಳ ಮೂಲದ ಎನ್ಆರ್ಐ ಬಂಧನ
ಕಾರವಾರ, ಮಾರ್ಚ್ 11: 2011 ಮತ್ತು 2013ರ ನಡುವೆ ದಾಖಲಾದ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮೇರಿಕಾದ ನಾಗರಿಕತ್ವ ಹೊಂದಿರುವ ಭಟ್ಕಳದ ವ್ಯಕ್ತಿಯೊರ್ವನನ್ನು ಭಟ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.
ಭಟ್ಕಳ ಬಂದರು ರೋಡ್ 1ನೇ ಕ್ರಾಸ್ ನಿವಾಸಿಯಾಗಿರುವ ಇರ್ಷಾದ್ ಕಾಜಿಯಾ ಅಲಿಯಾಸ್ ಅಲಿಶಾ (51) ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
2011 ಮತ್ತು 2013 ರ ನಡುವೆ ದಾಖಲಾದ ಕೆಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇರ್ಷಾದ್ ಖಾಜಿಯವರ ಚಲನವಲನ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆ ಅವರ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಇತ್ತೀಚೆಗೆ ಭಾರತಕ್ಕೆ ಬಂದಿರುವ ಖಚಿತ ಮಾಹಿತಿಯ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ.
ಭಟ್ಕಳ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಎಚ್.ಬಿ ಕುಡಗುಂಟಿ ಮತ್ತು ಪೊಲೀಸ್ ಗುಪ್ತಚರ ವಿಭಾಗದ ನರೈನ್ ನಾಯಕ್, ಮಖ್ದೂಮ್ ಸಬ್ ಇನ್ಸ್ ಪೆಕ್ಟರ್ ಪೇಟ್ ಖಾನ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇರ್ಷಾದ್ ಖಾಜಿಯಾ ಅಲಿಯಾಸ್ ಅಲಿಷಾ ಅಮೆರಿಕಾದಲ್ಲಿ ವಾಸವಾಗಿದ್ದು, ಅಲ್ಲಿಯೇ ವ್ಯಾಪಾರ ಮಾಡಿಕೊಂಡಿದ್ದನು. ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ಕೆಲ ಕೌಟುಂಬಿಕ ಸಮಸ್ಯೆಗಳಿಂದಾಗಿ ವಿವಾದಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು, ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದ್ದವು.
ಅಲ್ಲದೇ ಇತ್ತೀಚೆಗೆ ಭಟ್ಕಳದ ಜಮಾತುಲ್ ಮುಸ್ಲಿಮೀನ್ ಸಂಸ್ಥೆಯ ಷರಿಯಾ ನ್ಯಾಯಾಲದ ಕುರಿತಂತೆ ಆಕ್ಷೇಪಾರ್ಹ ಪತ್ರವೊಂದನ್ನು ಬರೆದು ಇಲ್ಲಿನ ಪ್ರಮುಖ ವ್ಯಕ್ತಿಗಳಿಗೆ ರವಾನಿಸಿದ್ದೂ ಕೂಡ ವಿವಾದವಾಗಿತ್ತು. ಅವರ ಆಕ್ಷೇಪಾರ್ಹ ಹೇಳಿಕೆಗಳು ಮತ್ತು ಸೋಷಿಯಲ್ ಮೀಡಿಯಾ ಸಂದೇಶಗಳ ಹೊರತಾಗಿಯೂ, ಭಟ್ಕಳದಲ್ಲಿ ಬಳಹಷ್ಟು ಅಭಿಮಾನಿಗಳ ಬಳಗವನ್ನು ಅವರು ಹೊಂದಿದ್ದಾರೆ.