ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಲೆಕೇರಿ ಪ್ರಕರಣ: ಉತ್ತರ ಕನ್ನಡದ ಕಾಂಗ್ರೆಸ್ ಶಾಸಕರಿಬ್ಬರಿಗೆ ಕಂಟಕ

By ಡಿ.ಪಿ.ನಾಯ್ಕ
|
Google Oneindia Kannada News

ಕಾರವಾರ, ಜನವರಿ 25: ಬೇಲೆಕೇರಿ ಅದಿರು ಅಕ್ರಮ ರಫ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಾಜ್ಯ ಸರ್ಕಾರ ನಿಯೋಜಿಸಿರುವುದು ಇದೀಗ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಶಾಸಕರಿಗೆ ಮತ್ತೆ ಆತಂಕ ತಂದಿಟ್ಟಿದೆ. ಕಾರವಾರದ ಶಾಸಕ ಸತೀಶ್ ಸೈಲ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಗೆ ಎಸ್ಐಟಿ ತನಿಖೆ ಮುಳುವಾಗುವ ಸಾಧ್ಯತೆ ಇದೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಬಿಜೆಪಿ ಮುಖಂಡರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ರಾಜ್ಯ ಸರ್ಕಾರ ಈ ಎಸ್ಐಟಿ ತಂತ್ರ ರೂಪಿಸಿದೆ. ಆದರೆ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತದ್ವಿರುದ್ಧವಾಗಲಿದ್ದು, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೇ ತೊಂದರೆಯೊಡ್ಡಲಿದೆ.

ಬಂಧಿತರಾಗಿದ್ದ ಸತೀಶ್ ಸೈಲ್

ಬಂಧಿತರಾಗಿದ್ದ ಸತೀಶ್ ಸೈಲ್

ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012 ರ ಸೆ. 16 ರಂದು ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ, 2013ರ ಸೆ. 20 ರಂದು ಸೈಲ್ ಅವರನ್ನು ಬಂಧಿಸಿತ್ತು. ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಯು ಐಎಲ್ಸಿ ಇಂಡಸ್ಟ್ರೀಸ್ ಪ್ರೈ. ಲಿ., ಡ್ರೀಮ್ ಲಾಜಿಸ್ಟಿಕ್ ಹಾಗೂ ಎಸ್.ಬಿ ಲಾಜಿಸ್ಟಿಕ್ ಎಂಬ ಕಂಪನಿಗಳ ಜತೆಗೂಡಿ ಬೇಲೆಕೇರಿ ಬಂದರಿನ ಮೂಲಕ 80 ಲಕ್ಷ ಟನ್ ಅದಿರನ್ನು ಅಕ್ರಮವಾಗಿ 2009ರ ಜನವರಿ 1 ರಿಂದ 2010 ರ ಮೇ ತಿಂಗಳವರೆಗೆ ರಫ್ತು ಮಾಡಿದೆ ಎಂದು ಸಿಬಿಐ 2013ರ ಡಿಸೆಂಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.

ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು. ಅದರ ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.

ಬೇಲೇಕೇರಿ ಕೇಸ್: ಅನಿಲ್ ಲಾಡ್ ಅಂಡ್ ಫ್ಯಾಮಿಲಿಗೆ ಜಾಮೀನುಬೇಲೇಕೇರಿ ಕೇಸ್: ಅನಿಲ್ ಲಾಡ್ ಅಂಡ್ ಫ್ಯಾಮಿಲಿಗೆ ಜಾಮೀನು

ಟಿಕೆಟ್ ನೀಡಿರಲಿಲ್ಲ

ಟಿಕೆಟ್ ನೀಡಿರಲಿಲ್ಲ

ಬೇಲೇಕೇರಿ ಗಣಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಕ್ಕಾಗಿಯೇ 2013 ರ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಸತೀಶ್ ಸೈಲ್ ಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸೈಲ್, ಅಂತೂ 80,727 ಮತಗಳಿಂದ ಗೆಲುವು ಸಾಧಿಸಿದ್ದರು.

ಅದರ ನಂತರ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕಾಂಗ್ರೆಸ್ ನ ಸದಸ್ಯತ್ವ ಪಡೆದುಕೊಂಡಿದ್ದರು. ಜತೆಗೆ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೂಡ ಅಣಿಯಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಇತ್ತೀಚಿಗೆ ಕಾರವಾರಕ್ಕೆ ಆಗಮಿಸಿದ್ದ ವೇಳೆ ಸತೀಶ್ ಸೈಲ್ ಅವರನ್ನು ಬೆಂಬಲಿಸುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದರು.

ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡ ಸೈಲ್

ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡ ಸೈಲ್

ಹೌದು. ಸತೀಶ್ ಸೈಲ್ ಗಣಿ ಭೂತದ ಭಯದಿಂದ ಕಾಂಗ್ರೆಸ್ ನ ಚಟುವಟಿಕೆಗಳಿಂದ ಕೂಡ ದೂರ ಉಳಿದಿದ್ದಾರೆ. ಬಿಜೆಪಿ ವಿರುದ್ಧದ ಯಾವುದೇ ಪ್ರತಿಭಟನೆ, ಸುದ್ದಿಗೋಷ್ಠಿಗಳಲ್ಲಿ ಸೈಲ್ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸ್ಥಳೀಯವಾಗಿ ಇದ್ದರೂ ಕೂಡ ಸಬೂಬು ಹೇಳಿ ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ.

"ಜತೆಗೆ ಬಿಜೆಪಿ ಟಿಕೆಟ್ ಗೂ ಕೂಡ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದರು‌. ಟಿಕೆಟ್ ಕೊಟ್ಟರೆ ಸೈಲ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ" ಎಂಬುದು ಕೂಡ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿನ ಗಾಳಿ ಸುದ್ದಿ. ಆದರೆ ಇದಕ್ಕೆ ಈವರೆಗೂ ಸತೀಶ್ ಸೈಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಬಾರಿ ಟಿಕೆಟ್ ನೀಡುತ್ತಾ ಕಾಂಗ್ರೆಸ್

ಈ ಬಾರಿ ಟಿಕೆಟ್ ನೀಡುತ್ತಾ ಕಾಂಗ್ರೆಸ್

ಅಕ್ರಮ ಗಣಿ ಪ್ರಕರಣದ ತನಿಖೆ ಮತ್ತೆ ಶುರುವಾಗಿರುವುದರಿಂದ ಸತೀಶ್ ಸೈಲ್ ಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.

ಸದ್ಯ ಚುನಾವಣೆಯ ಕಾವು ಶುರುವಾಗಿರುವುದರಿಂದ ಹಾಗೂ ಜೆಡಿಎಸ್ ಗೆ ಆನಂದ್ ಅಸ್ನೋಟಿಕರ್ ಬಲ ತುಂಬಿರುವುದರಿಂದ, ರಾಷ್ಟ್ರ ಮಟ್ಟದ ಕಬಡ್ಡಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಿ ಜನರನ್ನ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಸೈಲ್ ಫುಲ್ ಬ್ಯುಸಿಯಾಗಿದ್ದಾರೆ.

ಈಗೇನಂತಾರೆ ಸತೀಶ್ ಸೈಲ್

ಈಗೇನಂತಾರೆ ಸತೀಶ್ ಸೈಲ್

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸರ್ಕಾರ ಎಸ್ಐಟಿಗೆ ಕೊಟ್ಟಿರುವ ವಿಚಾರವಾಗಿ ಶಾಸಕ ಸತೀಶ್ ಸೈಲ್ ತನಿಖೆಯನ್ನ ಎದುರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. "ಸರ್ಕಾರ ಸಚಿವ ಸಂಪುಟದ ಸೂಚನೆ ಮೇರೆಗೆ ಪ್ರಕರಣವನ್ನ ಎಸ್ಐಟಿಗೆ ಕೊಟ್ಟಿರುವುದನ್ನು ಕೇಳಿದ್ದೇನೆ. ಆದರೆ ಇಲ್ಲಿಯವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಯಾರೇ ಮಾಹಿತಿ ಕೇಳಿದರು ಕೂಡ ನಾವು ಉತ್ತರ ಕೊಡಲು ಸಿದ್ಧ. ನನ್ನ ಕಂಪೆನಿ ಪೋರ್ಟ್ ಆಪರೇಟರ್ ಆಗಿ ಕೆಲಸ ಮಾಡಿದೆ ಹೊರತು ಅಕ್ರಮ ಎಸಗಿಲ್ಲ. 350 ಕಿಲೋ ಮೀಟರ್ ದೂರದಿಂದ ಬರುವ ಅದಿರನ್ನ ನಾವು ಚೆಕ್ ಮಾಡುವ ಮಾಸ್ಟರ್ ಆಗಿರಲಿಲ್ಲ. ಈಗಾಗಲೇ ಸಿಬಿಐ ತನಿಖೆ ವೇಳೆ ಎಲ್ಲಾ ಮಾಹಿತಿ ನೀಡಿದ್ದೇನೆ. ಸಿಬಿಐ ತನಿಖೆ ಸಹ ಮುಗಿದಿದೆ. ಎಸ್ಐಟಿ ನಡೆಸುವ ತನಿಖೆಗೆ ನಾನು ಸಿದ್ಧನಿದ್ದೇನೆ," ಎಂದಿದ್ದಾರೆ.

ಶಿವರಾಮ ಹೆಬ್ಬಾರ್ ಗೇನು ಸಂಬಂಧ?

ಶಿವರಾಮ ಹೆಬ್ಬಾರ್ ಗೇನು ಸಂಬಂಧ?

ಸಿಬಿಐ ಇದೇ ಗಣಿ ಅಕ್ರಮದ ಆರೋಪದಡಿ ಯಲ್ಲಾಪುರ ಮೂಲದ ಡ್ರೀಮ್ ಲಾಜಿಸ್ಟಿಕ್ಸ್ ಎಂಬ ಕಂಪನಿಯ ಮಾಲೀಕ ವಿವೇಕ ಹೆಬ್ಬಾರ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕಿತ್ತು. 2013ರ ಡಿಸೆಂಬರ್ ನಲ್ಲಿ ಸಿಬಿಐ ವಿವೇಕ್ ಅವರನ್ನು ಬಂಧಿಸಿ ತನಿಖೆಗೊಳಪಡಿಸಿತ್ತು.

ಡ್ರೀಮ್ ಲಾಜಿಸ್ಟಿಕ್ ಕಂಪನಿ 50.7 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಿದೆ ಎಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಬಂಧಿಸಲ್ಪಿಟ್ಟಿದ್ದ ಈ ವಿವೇಕ ಹೆಬ್ಬಾರ್ ಬೇರಾರು ಅಲ್ಲ. ಕಾಂಗ್ರೆಸ್ ಪಕ್ಷದ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ. 10 ತಿಂಗಳ ಬಳಿಕ 2014ರ ಅಕ್ಟೋಬರ್ ನಲ್ಲಿ ವಿವೇಕ್ ಹೆಬ್ಬಾರ್ ಗೆ ಶಾಸಕ ಹೆಬ್ಬಾರ್ ಜಾಮೀನು ನೀಡಿ ಹೊರ ತಂದಿದ್ದರು.(ಚಿತ್ರ: ವಿವೇಕ್ ಹೆಬ್ಬಾರ್)

ಕಂಪನಿ ನಿರ್ದೇಶಕರಾಗಿದ್ದ ಶಿವರಾಮ್ ಹೆಬ್ಬಾರ್

ಕಂಪನಿ ನಿರ್ದೇಶಕರಾಗಿದ್ದ ಶಿವರಾಮ್ ಹೆಬ್ಬಾರ್

ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಗಣಿ ಹಗರಣದಲ್ಲಿ ಬಂಧಿತನಾಗಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಜತೆಗೆ ಶಾಸಕ ಶಿವರಾಮ ಹೆಬ್ಬಾರ್ 2010ಕ್ಕೂ ಪೂರ್ವದಲ್ಲಿ ಡ್ರೀಮ್ ಲಾಜಿಸ್ಟಿಕ್ಸ್ ಕಂಪನಿಯ ನಿರ್ದೇಶಕರಾಗಿದ್ದರಿಂದ ಶಿವರಾಮ್ ಹೆಬ್ಬಾರ್ ಗೂ ಕೂಡ ಈ ಪ್ರಕರಣದ ಬಿಸಿ ತಟ್ಟಲಿದೆ‌.

ಹೀಗಾಗಿ ಎಸ್ಐಟಿ ತನಿಖೆ ಈ ಇಬ್ಬರು ಕಾಂಗ್ರೆಸ್ ರಾಜಕಾರಣಿಗಳಿಗೆ ಮುಳುವಾಗಲಿದೆ. ಆದರೆ ಇದರ ಪರಿಣಾಮ ಏನಾಗಲಿದೆ? ಎಸ್ಐಟಿ ತನಿಖೆ ಎಷ್ಟರ ಮಟ್ಟಿಗೆ ಸತ್ಯಾಂಶ ಹೊರ ತರಲಿದೆ? ಮುಂಬರುವ ಚುನಾವಣೆಗೆ ಈ ಪ್ರಕರಣ ಯಾವ ರೀತಿ ಟ್ವಿಸ್ಟ್ ನೀಡಲಿದೆ? ಎಂಬುದನ್ನು ಕಾದು ನೋಡಬೇಕಿದೆ.(ಚಿತ್ರ: ಶಿವರಾಮ್ ಹೆಬ್ಬಾರ್)

English summary
The Karnataka state government has created a Special Investigation Team (SIT) to probe the illegal export case of Belekeri ore and has now worried two MLAs in Uttara Kannada district. The SIT probe is likely to effect to the Karwar MLA Satish Sail and Yallapur MLA Shivaram Hebbar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X