ಮಂಗನ ಕಾಯಿಲೆ ಹಿನ್ನೆಲೆ ಬನವಾಸಿ ಕದಂಬೋತ್ಸವ ಮುಂದೂಡಿಕೆ
ಕಾರವಾರ, ಫೆಬ್ರವರಿ, 04: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಮಂಗನ ಜ್ವರದ ಭೀತಿ:ನಿರೀಕ್ಷೆಯಂತೆ ನಡೆಯಲಿದೆಯಾ ಕದಂಬೋತ್ಸವ?
ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿತ್ತು. ಬನವಾಸಿ ಮತ್ತು ಸಮೀಪದಲ್ಲಿ ಮಂಗಗಳು ಶಂಕಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ರೋಗ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿರುವುದರಿಂದ ಈ ದಿನಾಂಕಗಳಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಈಗಾಗಲೇ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಶಂಕಿತ ಪ್ರದೇಶಗಳಲ್ಲಿ ಲಸಿಕೆಗಳನ್ನು ಹಾಕಲಾಗಿದೆ. ಕಾಡಿನ ಸಂಪರ್ಕದಲ್ಲಿರುವ ಗ್ರಾಮಗಳ ಜನರಿಗೆ ಔಷಧಗಳ ವಿತರಣೆ, ಡಿಎಂಪಿ ತೈಲ ಲೇಪನ ಹಾಗೂ ದನ-ಕುರಿ ಕೊಟ್ಟಿಗೆಗಳಿಗೆ ಹುಣ್ಣೆ ನಿಯಂತ್ರಣ ಔಷಧಗಳ ಸಿಂಪಡಣೆ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಜಿಲ್ಲೆಗೆ ಹೆಚ್ಚುವರಿ ಔಷಧಗಳನ್ನು ಸರಬರಾಜು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರದಿಂದ ಟಾಸ್ಕ್ಫೋರ್ಸ್
ಆದಾಗ್ಯೂ ಕದಂಬೋತ್ಸವ ನಡೆಯಬೇಕಿದ್ದ ಬನವಾಸಿಯಲ್ಲಿ ಇತ್ತೀಚೆಗೆ ಮಂಗವೊಂದು ಮೃತಪಟ್ಟು, ಅದರ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿ ಅದು ಋಣಾತ್ಮಕವಾಗಿರುವುದು ಸ್ಪಷ್ಟವಾಗಿದೆ. ಆದರೆ ಬನವಾಸಿಯಿಂದ 10 ಕಿಲೋ ಮೀಟರ್ ದೂರದಲ್ಲಿ ಮೃತಪಟ್ಟಿರುವ ಮಂಗದ ಮಾದರಿಯಲ್ಲಿ ಧನಾತ್ಮಕ ಫಲಿತಾಂಶ ವ್ಯಕ್ತವಾಗಿದೆ.
ಇದರಿಂದಾಗಿ ಜಿಲ್ಲಾಡಳಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣವಾಗದಂತೆ ತಡೆಗಟ್ಟುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಿರುವುದರಿಂದ ಈ ಸಂದರ್ಭದಲ್ಲಿ ಕದಂಬೋತ್ಸವ ಆಚರಿಸುವುದು ಕಷ್ಟಸಾಧ್ಯವಿರುವ ಕಾರಣ ಸದ್ಯಕ್ಕೆ ಕದಂಬೋತ್ಸವನ್ನು ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.