ಕಾರವಾರದ ಹೋಟೆಲ್ ಗಳ ಮೇಲೆ ದಾಳಿ; ಆಹಾರ ತಯಾರಿಕೆಗೆ ಬಳಸುತ್ತಿದ್ದ ರಸಾಯನಿಕ ಪದಾರ್ಥ ವಶಕ್ಕೆ
ಕಾರವಾರ, ಜನವರಿ 27: ಹೋಟೆಲ್, ಫಾಸ್ಟ್ ಫುಡ್ ಸೆಂಟರ್ಗಳಲ್ಲಿ ಆಹಾರ ತಯಾರಿಕೆಯ ವೇಳೆ ಅಪಾಯಕಾರಿ ಅಜಿನೋಮೋಟೋ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ಕೊಡುತ್ತಿಲ್ಲ ಎನ್ನುವ ಆರೋಪದ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಬುಧವಾರ ನಗರದ 15ಕ್ಕೂ ಹೆಚ್ಚಿನ ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದಾರೆ.
ಕಾರವಾರ ನಗರದ ಪ್ರಸಿದ್ಧ ದೊಡ್ಡ ಹೋಟೆಲ್ ಹಾಗೂ ಫಾಸ್ಟ್ ಫುಡ್ ಸೆಂಟರ್ಗಳಲ್ಲಿ ಅಜಿನೋಮೋಟೋ ವಿಪರೀತ ಬಳಸಲಾಗುತ್ತಿದೆ. ಅಲ್ಲದೇ ಐಎಸ್ಐ/ ಎಫ್ಎಸ್ಎಸ್ಎಐ ಮಾರ್ಕ್ ಇಲ್ಲದ ಪದಾರ್ಥಗಳನ್ನು ಬಳಸುವುದು, ಶುಚಿತ್ವಕ್ಕೆ ಆದ್ಯತೆ ಕೊಡದೇ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
"ಬ್ಲಾಸ್ಟಿಂಗ್ ಅನುಮತಿ ಇಲ್ಲದೇ ಗಣಿಗಾರಿಕೆ ಮಾಡುವಂತಿಲ್ಲ''
ಅಧಿಕ ಪ್ರಮಾಣದಲ್ಲಿ ಅಜಿನೋಮೋಟೋ ಪತ್ತೆ
ಇತ್ತೀಚಿಗೆ ನಗರಸಭೆ ಅಧ್ಯಕ್ಷ ಡಾ.ನಿತೀನ್ ಪಿಕಳೆ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆಸಿ ಮೊದಲ ಹಂತದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದ ಬೀದಿ ಬದಿಯ ತಳ್ಳುಗಾಡಿಗಳಲ್ಲಿ ಆಹಾರ ಮಾರಾಟ ಮಾಡಲು ಅವಕಾಶ ಇಲ್ಲ ಎನ್ನುವ ಖಡಕ್ ಎಚ್ಚರಿಕೆಯನ್ನು ನೀಡಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಬುಧವಾರ ನಗರದ ಗ್ರೀನ್ಸ್ಟ್ರೀಟ್ ರಸ್ತೆ, ಕುಟಿನ್ಹೋ ರಸ್ತೆ, ಕೋಡಿಬಾಗ ರಸ್ತೆಯಲ್ಲಿರುವ ಹೋಟೆಲ್ಗಳ ಮೇಲೆ ದಾಳಿ ನಡೆಸಿದರು.
ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು, ಆಹಾರ ತಯಾರಿಸಲು ಬಳಸುವ ಪದಾರ್ಥಗಳನ್ನು, ಅಡುಗೆ ಮಾಡುವ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕೆಲ ಹೋಟೆಲ್ಗಳಲ್ಲಿ ಅಧಿಕ ಪ್ರಮಾಣದಲ್ಲಿ ಅಜಿನೋಮೋಟೋ ಪತ್ತೆಯಾಗಿದೆ. ಅಲ್ಲದೇ ಐಎಸ್ಐ ಮಾರ್ಕ್ ಇಲ್ಲದ ರಸಾಯನಿಕಯುಕ್ತ ಬಣ್ಣಗಳು ಪತ್ತೆಯಾಗಿದ್ದು, ಅಧಿಕಾರಿಗಳ ತಂಡ ಅವುಗಳನ್ನು ವಶಕ್ಕೆ ಪಡೆದು 2006ರ ಆಹಾರ ಸುರಕ್ಷಿತ ಕಾಯ್ದೆ ಪ್ರಕಾರ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಅಲ್ಲದೇ ಹೋಟೆಲ್ಗಳಲ್ಲಿ ಆಹಾರಗಳನ್ನು ತಯಾರಿಸುವ ಸ್ಥಳದಲ್ಲಿನ ಹಾಗೂ ಕಾರ್ಮಿಕರ ಶುಚಿತ್ವವನ್ನು ಸಹ ಅಧಿಕಾರಿಗಳ ತಂಡ ಗಮನಿಸಿದ್ದು, ಶುಚಿತ್ವ ಇಲ್ಲದ ಹೋಟೆಲ್ ಮಾಲೀಕರಿಗೂ ಎಚ್ಚರಿಕೆ ನೀಡಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳ ತಂಡದ ದಿಢೀರ್ ದಾಳಿಯಿಂದ ಕಾರವಾರ ನಗರದಲ್ಲಿನ ಹೋಟೆಲ್ ಮಾಲಿಕರಿಗೆ ನಡುಕ ಹುಟ್ಟಿಸಿದ್ದು, ಬೇಕಾಬಿಟ್ಟಿ ಅಜಿನೋಮೋಟೋ ಬಳಕೆ ಈ ಮೂಲಕವಾದರೂ ಬ್ರೇಕ್ ಬೀಳಲಿ ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಅಜಿನೋಮೋಟೋ ಒಂದು ಪ್ರಮಾಣದಲ್ಲಿ ಬಳಸಬೇಕು. ಆಹಾರಕ್ಕಿಂತ ಹೆಚ್ಚಾಗಿ ರುಚಿ ಬರಲಿ ಎಂದು ಅಜಿನೋಮೋಟೋ ಬಳಸಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳಲಿದೆ. ಯಾವ ಹೋಟೆಲ್ನಲ್ಲಿ ಅಧಿಕ ಅಜಿನೋಮೋಟೋ ಬಳಸುತ್ತಾರೋ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ರಾಜಶೇಖರ್ ಹೇಳಿದ್ದಾರೆ.
ಜಿಲ್ಲೆಯ ಎಲ್ಲಾ ಕಡೆ ನಿರಂತರವಾಗಿ ದಾಳಿ
ಆಹಾರಕ್ಕೆ ಬಣ್ಣ ಬಳಕೆಯೇ ಮಾಡಬಾರದು. ಆದರೆ ಕೆಲವರು ಲೋಕಲ್ ಬ್ರಾಂಡ್ನ ಬಣ್ಣ ಹಾಕುತ್ತಿದ್ದಾರೆ. ಕರಿದ ಆಹಾರ ಪದಾರ್ಥವನ್ನು ರದ್ದಿ ಪತ್ರಿಕೆಯಲ್ಲಿ ಇಡಬಾರದು. ಪತ್ರಿಕೆಯಲ್ಲಿನ ಇಂಕ್ ಮನಷ್ಯನ ದೇಹಕ್ಕೆ ಹೋಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಹೋಟೆಲ್ಗಳಲ್ಲಿ ಇಂದಿಗೂ ರದ್ದಿ ಪತ್ರಿಕೆಯ ಮೇಲೆಯೇ ಕರಿದ ಪದಾರ್ಥ ಹಾಕುತ್ತಿದ್ದು, ಇದನ್ನೆಲ್ಲಾ ಗಮನಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಕಡೆ ನಿರಂತರವಾಗಿ ದಾಳಿ ನಡೆಸಿ ಜನರ ಸುರಕ್ಷತೆ ದೃಷ್ಟಿಯಿಂದ ಯಾವ ಹೋಟೆಲ್ನಲ್ಲಿ ಶುಚಿತ್ವ ಇರುವುದಿಲ್ಲವೋ, ಅಧಿಕ ರಾಸಾಯನಿಕ ಪದಾರ್ಥ ಬಳಸುತ್ತಾರೋ ಅಂತಹ ಹೋಟೆಲ್ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೂಚನೆ ನೀಡಿದ್ದ ಸಂಸದ ಅನಂತಕುಮಾರ್
ಇತ್ತೀಚೆಗೆ ನಡೆದಿದ್ದ ದಿಶಾ ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ, ಅಜಿನೋಮೋಟೋ ಬಳಕೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನು ದಾಸ್ತಾನು ಮಾಡೋರು ಯಾರು? ಎಲ್ಲಿಂದ ತರಿಸಿಕೊಳ್ಳುತ್ತಿದ್ದಾರೆ? ಎನ್ನುವುದನ್ನು ಟ್ರ್ಯಾಕ್ ಮಾಡಿ. ಇದಕ್ಕೆಲ್ಲ ಮುಲಾಜೇ ಬೇಡ. ಯಾರೇ ಅಡ್ಡ ಬಂದರೂ ನನ್ನ ಹೆಸರು ಹೇಳಿ ಎಂದು ಸಂಸದ ಹೆಗಡೆ ತಿಳಿಸಿದ್ದರು. ಇದಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜು ಕೂಡ ಸಭೆಯಲ್ಲಿ ಸಹಮತ ನೀಡಿದ್ದರು. ಇದರ ಬೆನ್ನಲ್ಲೇ ಬುಧವಾರ ಅಧಿಕಾರಿಗಳ ದಾಳಿ ನಡೆದಿದೆ.
Recommended Video
ಅಜಿನೋಮೋಟೋ ಅಡ್ಡಪರಿಣಾಮವೇನು?
ಹೋಟೆಲ್ಗಳಲ್ಲಿ ಅಜಿನೋಮೋಟೋವನ್ನು ಹೆಚ್ಚಿಗೆ ರುಚಿ ಕೊಡಲು ಬಳಸುತ್ತಾರೆ. ಅದರಲ್ಲೂ ಅಧಿಕವಾಗಿ ಚೈನಿಸ್ ಆಹಾರದಲ್ಲಿ ಬಳಸುತ್ತಾರೆ. ಈ ಅಜಿನೋಮೋಟೋದಲ್ಲಿ ಅನಾರೋಗ್ಯಕರ ಅಂಶ ಹಲವಿದ್ದು, ಅಜಿನೋಮೋಟೋ ಅಧಿಕ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ, ಎದೆನೋವು, ಉಸಿರಾಟದ ಸಮಸ್ಯೆ, ಮೈಗ್ರೇನ್ ಸಮಸ್ಯೆ, ಶೀತ, ನೆಗಡಿ, ಗಂಟಲು ಉರಿ, ವಾಂತಿ ಭೇದಿ ಹೀಗೆ ಹಲವು ಅನಾರೋಗ್ಯಕ್ಕೆ ಕಾರಣವಾಗಲಿದೆ. ಇದೇ ಉದ್ದೇಶದಿಂದ ಅಜಿನೋಮೋಟೋ ಬಳಕೆ ಅಧಿಕವಾಗಿ ಮಾಡಬಾರದು ಎಂದಿದ್ದರೂ ಕೆಲ ಹೋಟೆಲ್ಗಳಲ್ಲಿ ರುಚಿ ಹೆಚ್ಚಾಗಿ ಬರಲು ಆಹಾರಕ್ಕಿಂತ ಅಧಿಕವಾಗಿ ಅಜಿನೋಮೋಟೋ ಬಳಕೆ ಮಾಡಲಾಗುತ್ತದೆ.