ಯಲ್ಲಾಪುರ; ಆಟೋಗಳ ಸಂಚಾರ ಸ್ಥಗಿತಕ್ಕೆ ಕಾರಣವೇನು?
ಕಾರವಾರ, ಅಕ್ಟೋಬರ್ 13; ಯಲ್ಲಾಪುರ ತಾಲೂಕಿನಲ್ಲಿ ಬುಧವಾರ ಆಟೋಗಳ ಓಡಾಟ ಸಂಪೂರ್ಣ ಸ್ತಬ್ಧಗೊಂಡಿದೆ. ಹಬ್ಬದ ಸಂದರ್ಭದಲ್ಲಿ ಓಡಾಟಕ್ಕೆ ಆಟೋ ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ. ಯುವಕರಿಬ್ಬರು ರಿಕ್ಷಾ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕ, ಮಾಲೀಕರು ಯಲ್ಲಾಪುರ ತಾಲೂಕಿನಾದ್ಯಂತ ಬಂದ್ ಆಚರಿಸುತ್ತಿದ್ದಾರೆ.
ನವರಾತ್ರಿ ನಿಮಿತ್ತ ಯಲ್ಲಾಪುರ ತಾಲೂಕಿನ ಬಸ್ ನಿಲ್ದಾಣದ ಬಳಿಯ ಆಟೋ ರಿಕ್ಷಾ ನಿಲ್ದಾಣದ ಹಿಂಬದಿಯಲ್ಲಿರುವ ಚೌಡಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಆಟೋ ರಿಕ್ಷಾಗಳನ್ನು ಕೂಡ ಪೂಜೆಗೆ ಇಡಲಾಗಿತ್ತು. ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜಯ ಮಿರಾಶಿಯವರ ಪುತ್ರ ಅನಿಕೇತ ಮಿರಾಶಿ ಹಾಗೂ ಇನ್ನೋರ್ವ ಯುವಕ ಬೈಕಿನಲ್ಲಿ ಬಂದು, ಪೂಜೆ ನಡೆಯುತ್ತಿದ್ದ ಸ್ಥಳದ ಬಳಿ ಬೈಕ್ ನಿಲ್ಲಿಸಿದ್ದಾರೆ.
ಉತ್ತರಕನ್ನಡ: ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಜಗಳದ ಭಾರೀ ಸದ್ದು!
ಈ ವೇಳೆ ಸುಮಾರು 48 ವರ್ಷ ವಯಸ್ಸಿನ ರಿಕ್ಷಾ ಚಾಲಕ ದೀಪಕ್ ಮೇಸ್ತಾ ಎನ್ನುವವರು, "ರಿಕ್ಷಾಗಳಿಗೆ ಪೂಜೆ ನಡೆಯುತ್ತಿದೆ. ಬೈಕ್ ಅನ್ನು ಪಕ್ಕದಲ್ಲಿ ನಿಲ್ಲಿಸಿ" ಎಂದು ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕರು, ರಿಕ್ಷಾ ಚಾಲಕರ ವಯಸ್ಸನ್ನೂ ನೋಡದೇ ಕೆನ್ನೆಗೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.
ಯಲ್ಲಾಪುರ; ಕೊಲೆ ಮಾಡಿ ನಾಪತ್ತೆ ಎಂದು ಬಿಂಬಿಸಿದವರಿಗೆ ಕೋಳ!
ಹಲ್ಲೆ ಮಾಡಿರುವುದು ಇದೇ ಮೊದಲಲ್ಲ
"ರಿಕ್ಷಾ ಚಾಲಕರ ಮೇಲೆ ಆರೋಪಿತ ವ್ಯಕ್ತಿಗಳು ಹಾಗೂ ಅವರ ಕಡೆಯವರು ಹಲ್ಲೆ ನಡೆಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಘಟನೆ ನಡೆದಾಗೆಲ್ಲ ಕೂತು ಚರ್ಚಿಸಿ ಪರಿಹರಿಸಿಕೊಳ್ಳುತ್ತಿದ್ದೆವು. ಆದರದು ಈಗ ಮಿತಿ ಮೀರುತ್ತಿರುವುದರಿಂದ ಅನಿವಾರ್ಯವಾಗಿ ಇಂದು ಆಟೋ ರಿಕ್ಷಾಗಳನ್ನು ರಸ್ತೆಗಿಳಿಸದೆ ಪ್ರತಿಭಟಿಸುತ್ತಿದ್ದೇವೆ" ಎಂದು ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಸಂತೋಷ್ ನಾಯ್ಕ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
"ಪದೇ ಪದೇ ಈ ರೀತಿಯ ಹಲ್ಲೆಗಳಾಗುತ್ತಿರುವುದರಿಂದ ಆಟೋ ರಿಕ್ಷಾ ಚಾಲಕರಿಗೆ ರಕ್ಷಣೆ ಇಲ್ಲದಂತಾಗಿದೆ. ಮುಂದೆ ಇಂಥ ಘಟನೆಗಳು ನಡೆಯಬಾರದು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಈ ಕಾರಣದಿಂದಾಗಿ ಇಂದು ಯಲ್ಲಾಪುರದಲ್ಲಿ ಮಾತ್ರ ಆಟೋ ರಿಕ್ಷಾಗಳ ಸಂಚಾರ ಬಂದ್ ಮಾಡಿದ್ದು, ಕ್ರಮವಾಗದಿದ್ದರೆ ಜಿಲ್ಲೆಯಾದ್ಯಂತ ಆಟೋ ರಿಕ್ಷಾಗಳ ಸಂಚಾರ ಬಂದ್ ಮಾಡಬೇಕಾಗಬಹುದು" ಎಂದು ಎಚ್ಚರಿಸಿದ್ದಾರೆ.
ಸಚಿವ ಹೆಬ್ಬಾರ್ ಮಧ್ಯಸ್ಥಿಕೆ ಕರೆ
ಘಟನೆಯ ಬಳಿಕ ದೂರು ದಾಖಲಿಸಲೆಂದು ಆಟೋ ಚಾಲಕರು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಘಟನೆಯ ವಿಚಾರ ತಿಳಿದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ರಾತ್ರೋರಾತ್ರಿ ರಿಕ್ಷಾ ಚಾಲಕರ ಮುಖಂಡರಿಗೆ ಕರೆ ಮಾಡಿ, ಬೆಳಿಗ್ಗೆ ಸಂಧಾನ ಸಭೆಗೆ ಆಹ್ವಾನಿಸಿದ್ದಾರೆ.
ಇದೇ ಕಾರಣದಿಂದಾಗಿ ಪೊಲೀಸರು ರಿಕ್ಷಾ ಚಾಲಕರಿಂದ ಎನ್ ಸಿ (ಗುರುತಿಸಲಾಗದ ಅಪರಾಧ) ಪ್ರಕರಣ ದಾಖಲಿಸಿಕೊಂಡು ಕಳುಹಿಸಿದ್ದಾರೆ. ಆದರೆ ಬೆಳಗ್ಗೆ ಸಂಧಾನ ಸಭೆ ನಡೆಸುತ್ತೇನೆಂದಿದ್ದ ಶಿವರಾಮ ಹೆಬ್ಬಾರ್ ಕಾರ್ಯನಿರತರಾಗಿದ್ದು, ಸಂಜೆ ಸಿಗುವುದಾಗಿ ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆ. ಹೀಗಾಗಿ ಚಾಲಕರು ರಿಕ್ಷಾಗಳನ್ನು ರಸ್ತೆಗಿಳಿಸಿದೇ ಪ್ರತಿಭಟಿಸಿದ್ದಾರೆ.
ಆಟೋ ಚಾಲಕರ ಬೇಡಿಕೆ ಏನು?
ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಸಂಜೆಯೊಳಗೆ ಎಫ್ಐಆರ್ ಆಗದಿದ್ದರೆ ಗುರುವಾರ, ಶುಕ್ರವಾರ ಹಬ್ಬದ ಕಾರಣ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಮನಗಂಡು ಅಕ್ಟೋಬರ್ 16ರಂದು ಜಿಲ್ಲೆಯಾದ್ಯಂತ ರಿಕ್ಷಾಗಳ ಓಡಾಟ ನಿಲ್ಲಿಸಲು ಯಲ್ಲಾಪುರ ಚಾಲಕರು ಯೋಚಿಸಿದ್ದಾರೆ.
Recommended Video
ಹೆಬ್ಬಾರ್ ಬಲಗೈ ಬಂಟ
ಆರೋಪಿತ ಯುವಕ ಅನಿಕೇತ ಮಿರಾಶಿಯ ತಂದೆ ವಿಜಯ ಮಿರಾಶಿ ಸಚಿವ ಶಿವರಾಮ ಹೆಬ್ಬಾರ್ ಬಲಗೈ ಬಂಟ. ಕೆಲ ತಿಂಗಳುಗಳ ಹಿಂದಷ್ಟೇ ಯಲ್ಲಾಪುರ ತಾಲೂಕಿನ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಕಲಘಟಗಿಯಲ್ಲಿ ವಿಜಯ ಮಿರಾಶಿ ಹಾಗೂ ಅವರ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿತ್ತು.
ಅಂದು ಕೂಡ ಗೌಳಿ ಸಮಾಜದವು ಯಲ್ಲಾಪುರದಾದ್ಯಂತ ಬೃಹತ್ ಪ್ರತಿಭಟನೆ ನಡೆಸಿ, ಮಿರಾಶಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಅಂದು ಕೂಡ ಸಚಿವ ಹೆಬ್ಬಾರ್ ಸಂಧಾನಕ್ಕೆ ಮಧ್ಯ ಪ್ರವೇಶಿಸಿದ್ದರು. ಆದರೆ ಪ್ರಸ್ತುತ ಈ ಪ್ರಕರಣ ಕೋರ್ಟ್ನಲ್ಲಿರುವ ಮಾಹಿತಿ ಇದೆ.