ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ ಪ್ರಕರಣ; ಗೌಳಿ ಸಮುದಾಯದಿಂದ ಬೃಹತ್ ಪ್ರತಿಭಟನೆ
ಕಾರವಾರ, ಫೆಬ್ರವರಿ 16: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಮದನೂರು ಗ್ರಾ.ಪಂ ಸದಸ್ಯರ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ದನಗರ ಗೌಳಿ ಸಮುದಾಯದ ಯುವ ಒಕ್ಕೂಟ ಹಾಗೂ ಮಾನವೀಯ ಮನಸ್ಸುಗಳ ಒಕ್ಕೂಟದ ನೇತೃತ್ವದಲ್ಲಿ ಗೌಳಿ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ರೈತಭವನದ ಬಳಿಯಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿಜಯ ಮಿರಾಶಿ ಹಾಗೂ ಅವರ ತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಬಂಧಿಸಿ, ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
"ನಾನು ಡಿಸಿಎಂ ಆಗಲು ಶಿವರಾಮ್ ಹೆಬ್ಬಾರ್ ಬಳಗದ ಸಹಕಾರವೇ ಕಾರಣ''
30 ವರ್ಷಗಳಿಂದ ದೌರ್ಜನ್ಯ
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಈ ವೇಳೆ ಮಾತನಾಡಿ, ಘಟನೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಕುರಿತು ಪೊಲೀಸ್ ಇಲಾಖೆ, ಗೃಹ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಹಲ್ಲೆಗೊಳಗಾದ ಗ್ರಾ.ಪಂ ಸದಸ್ಯ ವಿಠ್ಠು ಶೆಳಕೆ ಮಾತನಾಡಿ, ವಿಜಯ ಮಿರಾಶಿ ಹಾಗೂ ಅವರ ಬೆಂಬಲಿಗರು ನಮ್ಮ ಸಮುದಾಯದ ಮೇಲೆ ಕಳೆದ 30 ವರ್ಷಗಳಿಂದ ದೌರ್ಜನ್ಯ ನಡೆಸುತ್ತ ಬಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಜಯ ಮಿರಾಶಿ ಹಾಗೂ ಬೆಂಬಲಿಗರನ್ನು ತಕ್ಷಣ ಬಂಧಿಸಬೇಕು, ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ವಾ.ಕ.ರ.ಸಾ ನಿಗಮ ಅಧ್ಯಕ್ಷ ವಿ.ಎಸ್.ಪಾಟೀಲ್
ವನವಾಸಿ ಕಲ್ಯಾಣದ ಕ್ಷೇತ್ರ ಹಿತರಕ್ಷಾ ಪ್ರಮುಖ ಕೃಷ್ಣಮೂರ್ತಿ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ, ವನವಾಸಿ ಕಲ್ಯಾಣದ ಕೌಸಲ್ಯಾ, ಗೌಳಿ ಸಮುದಾಯದ ಪ್ರಮುಖರಾದ ದೋಂಡು ಪಾಟೀಲ, ಸಿದ್ದು ಥೋರತ್, ಲಕ್ಷ್ಮಣ ಲಾಂಬೋರೆ, ಗಾಂಧಿ ಸೋಮಾಪುರಕರ್, ಬಿಜೆಪಿ ತಾಲೂಕು ಉಪಾಧ್ಯಕ್ಷ ವೆಂಕಟ್ರಮಣ ಬೆಳ್ಳಿ ಇತರರು ಭಾಗವಹಿಸಿದ್ದರು.
ಮಿರಾಶಿಗೆ ಸಚಿವ ಹೆಬ್ಬಾರ್ ರಕ್ಷಣೆ!
ಕಳೆದ ಮೂವತ್ತು ವರ್ಷದಿಂದ ವಿಜಯ್ ಮಿರಾಶಿ ಗೌಳಿ ಸಮುದಾಯದ ಮೇಲೆ ಗುಂಡಾಗಿರಿ ಮಾಡುತ್ತಾ ಬಂದಿದ್ದಾರೆ. ಆತನನ್ನು ಬಂಧನ ಮಾಡಲೇಬೇಕು. ಸಚಿವ ಶಿವರಾಮ್ ಹೆಬ್ಬಾರ್ ಗೌಳಿ ಸಮುದಾಯದ ಬಗ್ಗೆಯೂ ಯೋಚನೆ ಮಾಡಬೇಕು. ಗೌಳಿ ಸಮುದಾಯದ ಎಲ್ಲರೂ ಸಚಿವರನ್ನು ಬೆಂಬಲಿಸಿದ್ದರು, ಸಚಿವರು ಮಾತ್ರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗೌಳಿ ಸಮುದಾಯದ ಜಿಲ್ಲಾ ಕಮಿಟಿ ಸದಸ್ಯ ಬೊಮ್ಮು ಬೀರು ಹೆಡಗೆ ಆಕ್ರೋಶ ಹೊರಹಾಕಿದ್ದಾರೆ.
Recommended Video
ಬಂಧನ ಮಾಡದಿದ್ದರೆ ಪ್ರತಿಭಟನೆ
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮು ಬೀರು ಹೆಡಗೆ, ವಿಜಯ್ ಮಿರಾಶಿ ಸಚಿವ ಶಿವರಾಮ್ ಹೆಬ್ಬಾರ್ ಪರವಿದ್ದು, ವಿಜಯ್ ಮಿರಾಶಿಗೆ ರಕ್ಷಣೆ ಕೊಟ್ಟವರೇ ಶಿವರಾಮ್ ಹೆಬ್ಬಾರ್ ಆಗಿದ್ದಾರೆ. ನಾವು ಸಹ ಘಟನೆಯಾದ ನಂತರ ರಕ್ಷಣೆ ಕೊಡಿ ಎಂದು ಹೆಬ್ಬಾರ್ ಬಳಿ ಹೋದಾಗ ನಮಗೆ ರಕ್ಷಣೆ ಕೊಡದೇ ಸುಮ್ಮನಾಗಿದ್ದರು. ಇದೀಗ ವಿಜಯ್ ಮಿರಾಶಿ ಬಂಧನ ಮಾಡದಂತೆ ಹೆಬ್ಬಾರ್ ಅಡ್ಡಲಾಗಿದ್ದು, ಮುಂದಿನ ದಿನದಲ್ಲಿ ವಿಜಯ್ ಮಿರಾಶಿ ಬಂಧನ ಮಾಡದಿದ್ದರೆ ಇಡೀ ತಾಲೂಕಿನಲ್ಲಿ ಗೌಳಿ ಸಮುದಾಯದ ಎಲ್ಲಾ ಜನರು ಬಂದು ಪ್ರತಿಭಟನೆ ಮಾಡುತ್ತೇವೆ ಎನ್ನುವ ಆಕ್ರೋಶ ಹೊರ ಹಾಕಿದ್ದಾರೆ.