ಮಂಗನ ಜ್ವರದ ಭೀತಿ:ನಿರೀಕ್ಷೆಯಂತೆ ನಡೆಯಲಿದೆಯಾ ಕದಂಬೋತ್ಸವ?
ಕಾರವಾರ, ಫೆಬ್ರವರಿ 03: ಕರ್ನಾಟಕದ ಪ್ರಥಮ ರಾಜಧಾನಿ ಐತಿಹಾಸಿಕ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಈ ಬಾರಿಯ ರಾಜ್ಯಮಟ್ಟದ ಕದಂಬೋತ್ಸವಕ್ಕೆ ಮಂಗನ ಜ್ವರದ ಭೀತಿ ಆವರಿಸಿದೆ. ಈ ಕಾರಣದಿಂದ ಕಾರ್ಯಕ್ರಮವನ್ನು ಮುಂದೂಡುವ ಕುರಿತು ಚಿಂತನೆ ನಡೆದಿದೆ.
ಹೌದು, ಐತಿಹಾಸಿಕ ಬನವಾಸಿ ಕ್ಷೇತ್ರ ಕರ್ನಾಟಕದಲ್ಲೇ ಮಹತ್ವ ಪಡೆದಿರುವ ಸ್ಥಳ. ಬನವಾಸಿಯ ಪರಂಪರೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಠಿಯಿಂದ ರಾಜ್ಯ ಸರ್ಕಾರ ಪ್ರತಿವರ್ಷ ಕದಂಬೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾ ಬಂದಿದೆ.
ಉಡುಪಿಯಲ್ಲಿ ಸತ್ತ ಮಂಗಗಳ ಸಂಖ್ಯೆ 63 ಕ್ಕೆ ಏರಿಕೆ: ಆತಂಕದಲ್ಲಿ ಜನರು
ಪ್ರತಿ ವರ್ಷ ರಾಜ್ಯ ಸರ್ಕಾರ ಪಂಪ ಪ್ರಶಸ್ತಿಯನ್ನು ಕದಂಬೋತ್ಸವದಲ್ಲಿಯೇ ನೀಡುತ್ತಾ ಬಂದಿದ್ದು, ಈ ಹಿನ್ನಲೆಯಲ್ಲಿ ಕದಂಬೋತ್ಸವ ರಾಜ್ಯಮಟ್ಟದ ಕಾರ್ಯಕ್ರಮ ಆಗುವುದರ ಜೊತೆಗೆ ಸಾಕಷ್ಟು ಮಹತ್ವವನ್ನು ಸಹ ಪಡೆದಿದೆ.
ಈ ಬಾರಿ ಸಹ ಕದಂಬೋತ್ಸವ ಕಾರ್ಯಕ್ರಮ ಫೆಬ್ರವರಿ 8 ಮತ್ತು 9 ರಂದು ನಡೆಸಲು ನಿರ್ಧರಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಇದರ ನಡುವೆ ಮಂಗನ ಜ್ವರ ಕದಂಬೋತ್ಸವ ಕಾರ್ಯಕ್ರಮಕ್ಕೆ ಭೀತಿ ತಂದೊಡ್ಡಿದೆ.
ಮಲೆನಾಡಿಗರ ನಿದ್ದೆಕೆಡಿಸಿದ ಮಂಗನ ಕಾಯಿಲೆ: ಲಕ್ಷಣ-ಪರಿಹಾರ
ಕದಂಬೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದ ಸಮೀಪದಲ್ಲಿಯೇ ಇತ್ತೀಚೆಗೆ ಮಂಗವೊಂದು ಮೃತಪಟ್ಟಿತ್ತು. ಆಗ ಮಂಗನನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ. ಮಂಗ ಮೃತಪಟ್ಟ ಸ್ಥಳದಲ್ಲಿ ವೈರಾಣುವನ್ನು ಹೊತ್ತ ಉಣ್ಣೆಗಳಿದ್ದು, ಜನರಿಗೆ ಅದು ಕಚ್ಚಿದರೆ ಮಂಗನಕಾಯಿಲೆ ಬರುತ್ತದೆ.
ಕಾರ್ಯಕ್ರಮ ಮಾಡುವ ಸ್ಥಳದ ಸಮೀಪದಲ್ಲಿಯೇ ಮಂಗ ಮೃತಪಟ್ಟಿದ್ದು, ಮಂಗನ ಕಾಯಿಲೆ ಹರಡುತ್ತದೆ ಎನ್ನುವ ಭೀತಿ ಜನರಲ್ಲಿ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕಾರ್ಯಕ್ರಮವನ್ನು ಮಾಡಬೇಕು, ಆದರೆ ಜನರು ಈ ಬಗ್ಗೆ ಆತಂಕದಲ್ಲಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಸಾರ್ವಜನಿಕ ಕಾರ್ಯಕ್ರಮ ಬೇಡ
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಹೊನ್ನಾವರ ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಮೂರು ಜನರಲ್ಲಿ ಕಾಯಿಲೆ ಇರುವುದು ಧೃಢಪಟ್ಟಿದೆ. ಇದಲ್ಲದೇ ಸುಮಾರು 40ಕ್ಕೂ ಅಧಿಕ ಕಡೆ ಮಂಗ ಮೃತಪಟ್ಟಿರುವ ವರದಿಯಾಗಿದೆ. ಇನ್ನು ಮಂಗನ ಕಾಯಿಲೆಯಿಂದ ಮಂಗ ಮೃತಪಟ್ಟ ಸ್ಥಳದ ಸುತ್ತಮುತ್ತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂತೆ, ಸಾರ್ವಜನಿಕ ಕಾರ್ಯಕ್ರಮ ಮಾಡಬಾರದು ಎನ್ನಲಾಗಿದ್ದು, ಇದರ ನಡುವೆ ಕದಂಬೋತ್ಸವ ಅಗತ್ಯವಿದೆಯೇ ಅನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಆತಂಕ ವ್ಯಕ್ತಪಡಿಸಿದ ಸಚಿವರು
ಇದಲ್ಲದೇ ಕಾರ್ಯಕ್ರಮಕ್ಕಾಗಿ ಸಾವಿರಾರು ಜನರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಜನರಿಗೆ ಉಣಗು ಕಚ್ಚಿ ಕಾಯಿಲೆ ಹರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಕೂಡ ಆತಂಕ ವ್ಯಕ್ತಪಡಿಸಿದ್ದು, "ಕದಂಬೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಂಗ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಜನರಿಗೆ ಸಮಸ್ಯೆ ಆಗದಂತೆ ಕಾರ್ಯಕ್ರಮ ಮಾಡಬೇಕಾ, ಅಥವಾ ಕಾರ್ಯಕ್ರಮ ಮುಂದೂಡಬೇಕಾ?" ಎನ್ನುವುದು ಒಂದೆರಡು ದಿನದಲ್ಲಿ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರದಿಂದ ಟಾಸ್ಕ್ಫೋರ್ಸ್
ಚುಚ್ಚುಮದ್ದುಗಳ ಕೊರತೆ
ಇನ್ನು ಮಂಗನಕಾಯಿಲೆಗೆ ಕೊಡಬೇಕಾದ ಚುಚ್ಚುಮದ್ದುಗಳ ಕೊರತೆಯಾಗಿದ್ದು, ಆರೋಗ್ಯ ಇಲಾಖೆ 27,000 ಕ್ಕೂ ಹೆಚ್ಚಿನ ಚುಚ್ಚುಮದ್ದಿಗಾಗಿ ಕೋರಿಕೆ ಇಟ್ಟಿದೆ. ಈಗಾಗಲೇ 11 ಸಾವಿರ ವ್ಯಾಕ್ಸಿನೇಷನ್ ನೀಡಲಾಗಿದೆ.ಇದಲ್ಲದೇ ಮುಂಜಾಗ್ರತೆ ವಹಿಸಲು ಡಿ.ಎಂ.ಪಿ ಆಯಿಲ್ ಕೂಡ ಕೊರತೆಯಿದೆ. ಬನವಾಸಿಗೆ ಸುತ್ತಮುತ್ತ ಮಂಗಗಳು ದಿನೇ ದಿನೆ ಸಾವನ್ನಪ್ಪುತ್ತಿದ್ದು, ವೈರಾಣುಗಳು ಕೂಡ ಪತ್ತೆಯಾಗಿವೆ. ಕಾಯಿಲೆ ಜನರಿಗೂ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಮತ್ತಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಾ ಜಿಲ್ಲಾಡಳಿತ? ಅಥವಾ ಕೊರತೆಯಾದ ಔಷಧಿ ತರಿಸಿ ಸೂಕ್ತ ಕ್ರಮ ವಹಿಸಲು ಸಮರ್ಥವಾಗುತ್ತದೆಯೇ ?ಖಂಡಿತ ಇಲ್ಲ, ಹಾಗೆ ನೋಡಿದರೆ ಈಗಿರುವ ಪರಿಸ್ಥಿತಿ ಅವಲೋಕಿಸಿದರೇ ಚುಚ್ಚುಮದ್ದಿನ ಕೊರತೆ ಎದ್ದು ಕಾಣುತ್ತಿದೆ.
ರದ್ದುಪಡಿಸುವಂತೆ ಅರವಿಂದ ಕರ್ಕಿಕೋಡಿ ಒತ್ತಾಯ
ಈ ನಡುವೆ ಫೆ.9 ರಿಂದ ನಡೆಯಲಿರುವ ಪ್ರಸಕ್ತ ವರ್ಷದ ಕದಂಬೋತ್ಸವವನ್ನು ರದ್ದುಪಡಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರತಿ ವರ್ಷ ಕದಂಬೋತ್ಸವವನ್ನು ಮಾಡಲೇಬೇಕು ಎಂದು ಜಿಲಾ ಕ.ಸಾಪ. ಒತ್ತಾಯಿಸುತ್ತದೆ. ಆದರೆ ಈ ಸಲದ ಮಂಗನ ಕಾಯಿಲೆಯ ಆತಂಕ ಬನವಾಸಿಯಲ್ಲಿ ಹರಡಿಕೊಂಡಿರುವುದರಿಂದ ಈ ಪ್ರಸಕ್ತ ವರ್ಷದ ಕದಂಬೋತ್ಸವವನ್ನು ನಡೆಸುವುದು ಬೇಡ. ಕನ್ನಡ ಭಾಷೆ, ಕನ್ನಡದ ನೆಲದ ಬಗ್ಗೆ ಅಭಿಮಾನದಿಂದ ಕದಂಬೋತ್ಸವನ್ನು ನಡೆಸುವುದರ ಜೊತೆಗೆ ಕನ್ನಡಿಗರ ಆರೋಗ್ಯ ಮತ್ತು ಬದುಕು ಕೂಡ ಮುಖ್ಯ. ಅದಕ್ಕಾಗಿ ಸಾವಿರಾರು ಜನರು ಸೇರುವ ಈ ಕದಂಬೋತ್ಸವವನ್ನು ಈ ಸಲ ಕೈಬಿಡಬೇಕು ಎಂದು ವಿನಂತಿಸಿದ ಅರವಿಂದ ಕರ್ಕಿಕೋಡಿ ಅವರು ಕದಂಬೋತ್ಸವದ ಸಂದರ್ಭದಲ್ಲಿ ಬಂದ ಜನರಿಗೆ ಮಂಗನ ಕಾಯಿಲೆಯ ಸೋಂಕು ತಗುಲಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.