ಉ.ಕ. ಜಿಲ್ಲೆ: ಹಿಂದೂಗಳ ಸಿಟ್ಟಿಗೆ ಕಾರಣರಾಗಿದ್ದಾರಾ ಬಿಜೆಪಿ ನಾಯಕರು!
ಕಾರವಾರ, ಏಪ್ರಿಲ್ 6 : ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಚುನಾವಣೆ ಸಮೀಪದಲ್ಲೇ ನಡೆದ ಕೆಲ ಬೆಳವಣಿಗೆಗಳು ಬಿಜೆಪಿಗೆ ಮುಳ್ಳಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ. ಹೌದು, ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣದ ಬಿಸಿ ಆರುವ ಮುನ್ನವೇ ಅಲ್ಲಿನ ಕರ್ಕಿ ಬಳಿ ಅಕ್ರಮ ಗೋ ಸಾಗಣೆದಾರರ ಮೇಲೆ ನಡೆದ ಹಲ್ಲೆ ಬಿಜೆಪಿಗರಿಗೆ ಪ್ಲಸ್ ಪಾಯಿಂಟ್ ಆಗುವ ಬದಲು ಮೈನಸ್ ಆಗುವ ಲಕ್ಷಣ ಗೋಚರಿಸುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಗೆ ಸಂಬಂಧಪಟ್ಟಂತೆ ಬಿಜೆಪಿಯ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈ ಮಧ್ಯೆ ಕರ್ಕಿಯಲ್ಲಿ ನಡೆದ ಅಕ್ರಮ ಗೋ ಸಾಗಣೆದಾರರ ಮೇಲಿನ ಹಲ್ಲೆ ಪ್ರಕರಣದಲ್ಲಿ ಕುಮಟಾದ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಯಿತು.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಈ ಬಂಧನದ ಹಿಂದೆ ಬಿಜೆಪಿ ಮುಖಂಡರದೇ ಕೈವಾಡವಿದೆ ಎಂದು ಇದೀಗ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಂಧಿತರ ಪರ ಇರುವವರು ಆರೋಪಿಸಲು ಶುರು ಮಾಡಿದ್ದಾರೆ. 307 ಪ್ರಕರಣದಲ್ಲಿ ಬಂಧನದಲ್ಲಿರುವ ಸೂರಜ್ ನಾಯ್ಕ ಸೋನಿ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ವಿಧಾನಸಭಾ ಚುನಾವಣೆ : ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳು
'ನಾನೂ ಸೂರಜ್ ನಾಯ್ಕ ಸೋನಿ, ನಾವೆಲ್ಲರೂ ಸೂರಜ್ ನಾಯ್ಕ ಸೋನಿ' ಅಭಿಯಾನ ಪ್ರಾರಂಭಗೊಂಡಿದೆ. ಟಿಕೆಟ್ ಗಾಗಿ ಹಪಹಪಿಸುವ ನಾಯಕರಿಗೆ ಹಾಗೂ ಅವರ ಪರ ಬಕೆಟ್ ಹಿಡಿಯುವ ಕಾರ್ಯಕರ್ತರಿಗೆ ಸೂರಜ್ ನಾಯ್ಕ ಅವರ ನೆನಪು ಮಾಡೋಣ ಎಂಬ ಸಂದೇಶದೊಂದಿಗೆ ಅಭಿಯಾನ ಆರಂಭಗೊಂಡಿದೆ.
ಹಿಂದೂ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲದಂತಾಗಿದೆ
ಬಿಜೆಪಿಗರು ಚುನಾವಣೆಗಾಗಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಆಕಾಂಕ್ಷಿಗಳೆಲ್ಲರೂ ಅದೇ ಗುಂಗಿನಲ್ಲಿದ್ದಾರೆ. ಗೋ ರಕ್ಷಣೆಗಾಗಿ ಪಣ ತೊಟ್ಟ ಹಿಂದೂ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಪರ ಕಾರ್ಯಕರ್ತನಿಗೆ ಟಿಕೆಟ್ ನೀಡದಿದ್ದ ಮೇಲೆ ನೀವು ಹೇಗೆ ಫೈರ್ ಬ್ರಾಂಡ್ ಆಗಲು ಸಾಧ್ಯ ಎಂದು ಕೂಡ ಭಟ್ಕಳದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಪರ ಸಂಘಟನೆಗಳ ಮುಖಂಡ ಶಂಕರ್ ನಾಯ್ಕ ಅವರನ್ನು ಕೂಡ ಬಂಧನಲ್ಲಿಡಲಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ನಾಮಧಾರಿ ಸಂಘಗಳು ಸೇರಿದಂತೆ ಅನೇಕರು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ನಾಮಧಾರಿ ಯುವಕರನ್ನು ಜೈಲಿನಲ್ಲಿಡುವುದು ಬಿಜೆಪಿಗರಿಗೆ ಅಭ್ಯಾಸ
ಚುನಾವಣೆ ಬಂತೆಂದರೆ ಸಾಕು ಜಿಲ್ಲೆಯಲ್ಲಿ ನಾಮಧಾರಿ ಯುವಕರನ್ನು ಜೈಲಿನಲ್ಲಿಡುವುದು ಬಿಜೆಪಿಗರಿಗೆ ಅಭ್ಯಾಸವಾಗಿಬಿಟ್ಟಿದೆ. ಸಚಿವ ಅನಂತಕುಮಾರ್ ಹೆಗಡೆಯವರು ಫೈರ್ ಬ್ರಾಂಡ್ ಎಂದು ಕರೆಸಿಕೊಳ್ಳುತ್ತಾರೆ. ಆದರೆ ಅವರಿಗೆ ಪಕ್ಷದಲ್ಲಿ ಹಿಂದೂ ಪರ ಕಾರ್ಯಕರ್ತನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದ ಮೇಲೆ ಅವರು ಹೇಗೆ ಫೈರ್ ಬ್ರಾಂಡ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ. ಮೂಲತಃ ಹಿಂದೂ ಜಾಗರಣ ವೇದಿಕೆ ಮುಖಂಡ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನನುಭವಿಸಿದ ಗೋವಿಂದ ನಾಯ್ಕ ಅವರಿಗೇ ಭಟ್ಕಳದಲ್ಲಿ ಬಿಜೆಪಿ ಟಿಕೆಟ್ ನೀಡಬೇಕು. ಹಿಂದೂ ಪರ ಕಾರ್ಯಕರ್ತರಿಗಾಗಿ ಅವರು ಸ್ಪಂದಿಸುತ್ತಾರೆ. ಆದರೆ ಈಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಹಿಂದೂಪರ ಕಾರ್ಯಕರ್ತರಿಗೆ ಸ್ಪಂದಿಸುವವರು ಯಾರೂ ಇಲ್ಲ ಎಂಬುದು ಕೂಡ ಆರೋಪವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮುಸುಕಿನ ಗುದ್ದಾಟದಲ್ಲಿ ಮೂಲ ಬಿಜೆಪಿಗರು ಮರೆ
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ಸಂಪೂರ್ಣ ಚಿತ್ರಣ ನೋಡಿದರೆ ಮೂಲ ಬಿಜೆಪಿಗರು ಚುನಾವಣೆಯಿಂದ ದೂರ ಹೋಗಿರುವಂತೆ ಕಾಣತೊಡಗಿದೆ. ಭಟ್ಕಳದಲ್ಲಿ ಟಿಕೆಟ್ ಗಾಗಿ ಸುನೀಲ್ ನಾಯ್ಕ ಹಾಗೂ ಜೆ.ಡಿ.ನಾಯ್ಕರ ಬೆಂಬಲಿಗರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಲ್ಲಿ ಮೂಲ ಬಿಜೆಪಿಗರು ಮರೆಯಾಗಿದ್ದಾರೆ.
ಎರಡ್ಮೂರು ಬಣಗಳು ಹುಟ್ಟಿಕೊಂಡಿವೆ
ಕುಮಟಾದಲ್ಲಿ ಅಲ್ಲಲ್ಲಿ ಕಾಣಸಿಗುವ ಹಿರಿಯ ಬಿಜೆಪಿಗರು ಚುನಾವಣೆಯಲ್ಲಿ ಮುಂದೆ ಬರಲು ನಿರಾಸಕ್ತಿ ತೋರಿದ್ದಾರೆ. ಇನ್ನು ಕಾರವಾರದಲ್ಲಿ ಹೊಸಬರು ಎಂದೆನಿಸಿಕೊಳ್ಳುವ ರೂಪಾಲಿ ನಾಯ್ಕ ಅವರ 'ಖರ್ಚು- ವೆಚ್ಚಗಳ ಕಾರ್ಯಕ್ರಮಗಳು' ಮೂಲ ಬಿಜೆಪಿಗರ ಪಾಲಿಗೆ ಮುಳುವಾದಂತಿದೆ. ಈಗಾಗಲೇ ಜಿಲ್ಲೆಯೆಲ್ಲೆಡೆ ಬಿಜೆಪಿ ಕಾರ್ಯಕರ್ತರಲ್ಲಿಯೇ ಎರಡ್ಮೂರು ಬಣಗಳು ಹುಟ್ಟಿಕೊಂಡಿರುವುದು ಕೇಸರಿ ಪಕ್ಷದ ಪಾಲಿಗೆ ಮುಂದೆ ನೋಡಿದರಾಯ್ತು ಎನ್ನುವ ನಿರುತ್ಸಾಹ ಭಾವನೆ ಮೂಡಲು ಕಾರಣವಾಗಿದೆ.