ಸುಪ್ರೀಂ ಆದೇಶ: ರಾಮಚಂದ್ರಾಪುರ ಮಠದ ಆಡಳಿತದಿಂದ ಕೈತಪ್ಪಿದ ಗೋಕರ್ಣ ಮಹಾಬಲೇಶ್ವರ ದೇಗುಲ
ಕಾರವಾರ, ಏಪ್ರಿಲ್ 19: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ಚರ ದೇವಸ್ಥಾನವನ್ನು ರಾಮಚಂದ್ರಪುರ ಮಠದ ಆಡಳಿತದಿಂದ ಹಿಂಪಡೆದು, ನಿವೃತ್ತ ನ್ಯಾಯಾಧೀಶ ಬಿ.ಎನ್ ಶ್ರೀಕೃಷ್ಣ ನೇತೃತ್ವದ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಮರು ಆದೇಶ ನೀಡಿದೆ.
ಮುಜರಾಯಿ ಇಲಾಖೆಯ ಆಡಳಿತದಲ್ಲಿದ್ದ ಈ ದೇಗುಲವನ್ನು 2004ರಲ್ಲಿ ಆಗಿನ ಟ್ರಸ್ಟಿ ವಿ.ಡಿ ದೀಕ್ಷಿತ್ ನಿಧನದ ಬಳಿಕ 2008ರ ಆ.14ರವರೆಗೆ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿಕೊಂಡು ಬರುತ್ತಿದ್ದರು. ಆದರೆ 2008ರ ಮೇ ತಿಂಗಳಿನಲ್ಲಿ ಹೊಸನಗರದ ರಾಮಚಂದ್ರಾಪುರ ಮಠದವರು, ಈ ದೇವಸ್ಥಾನ ಪುರಾತನ ಕಾಲದಲ್ಲಿ ತಮ್ಮದಾಗಿತ್ತು ಎಂದಿದ್ದರು.
ಈಗ ಪುನಃ ಆಡಳಿತದ ನಿರ್ವಹಣೆಯನ್ನು ತಮಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರಿಂದ, 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಆಗಲೂ ಮುಖ್ಯಮಂತ್ರಿ ಆಗಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಸ್ತಾಂತರ ಮಾಡಿತ್ತು.
ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು
ಇದನ್ನು ವಿರೋಧಿಸಿ ಬಾಲಚಂದ್ರ ದೀಕ್ಷಿತ್ ಹಾಗೂ ಇತರರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳ ವಿಚಾರಣೆಯ ಬಳಿಕ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಮತ್ತೆ ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನ
ಈ ತೀರ್ಪಿನ ವಿರುದ್ಧ ರಾಮಚಂದ್ರಾಪುರ ಮಠವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೀಗಿರುವಾಗ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಕಾರಣ, ಸರಕಾರ ದೇವಸ್ಥಾನವನ್ನು ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು.
ಸಿಜೆಐ ಬೊಬ್ಡೆ ನೇತೃತ್ವದ ಪೀಠ ತೀರ್ಪು
ಆದರೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸಿಜೆಐ ಬೊಬ್ಡೆ ನೇತೃತ್ವದ ಪೀಠ, ಈಗ ಈ ಪ್ರಕರಣ ಸಂಬಂಧ ಮಧ್ಯಂತರ ವ್ಯವಸ್ಥೆ ಮಾಡುವ ಸಲುವಾಗಿ ನಿವೃತ್ತ ನ್ಯಾ. ಬಿ.ಎನ್ ಶ್ರೀಕೃಷ್ಣ ನೇತೃತ್ವದ ಸಮಿತಿಯನ್ನು ಮರು ರಚಿಸಿ, ಗೋಕರ್ಣ ಮಹಾಬಲೇಶ್ವರ ದೇವಾಲಯ ಆಡಳಿತದ ಉಸ್ತುವಾರಿಯನ್ನು ಸಮಿತಿಗೆ ವಹಿಸಿ, ಸಿಜೆಐ ಎಸ್.ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೋಮವಾರ ಆದೇಶ ಹೊರಡಿಸಿದೆ.
Recommended Video
ಆನುವಂಶೀಯ ಅರ್ಚಕರಿಂದ ಸಂಭ್ರಮಾಚರಣೆ
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಗೋಕರ್ಣದ ಅನುವಂಶೀಯ ಅರ್ಚಕರು, ದೇಗುಲದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಿನ ಸರ್ಕಾರದ ನಡೆಯನ್ನು ತಪ್ಪು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಮಚಂದ್ರಾಪುರ ಮಠವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಇದಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂದು ಕೋರಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಇದು ಕೇವಲ ಗೋಕರ್ಣಕ್ಕಷ್ಟೇ ಅಲ್ಲ, ಇದು ನಾಡಿನ ಎಲ್ಲರಿಗೂ ಸಂದ ಜಯ ಎಂದು ಅನುವಂಶೀಯ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.