ಗ್ಲಾಸ್ ಒಡೆದಿದ್ದೇ ನೆಪ: ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕಾಂಗ್ರೆಸ್ ಸದಸ್ಯರಿಂದ ಧರಣಿ
ಕಾರವಾರ, ಜನವರಿ 22: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಆಯ್ಕೆ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗೊಂದಲ ಸೃಷ್ಟಿಯಾಗಿ ಆಡಳಿತ ಪಕ್ಷದ ಸದಸ್ಯರು ಹೊರ ನಡೆದರೆ ವಿರೋಧ ಪಕ್ಷದ ಸದಸ್ಯರು ತಡ ರಾತ್ರಿವರೆಗೂ ಮಾಜಿ ಶಾಸಕ ಸತೀಶ ಸೈಲ್ ಜೊತೆಗೂಡಿ ಸಭೆಯಲ್ಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸಾಮಾನ್ಯ ಸಭೆಯಲ್ಲಿ ಅಜೆಂಡಾದಂತೆ 25 ಅಂಶಗಳ ವಿಷಯಗಳ ಮೇಲೆ ಚರ್ಚೆ ನಡೆಯುತ್ತಿತ್ತು. 13ನೇ ವಿಷಯವಾದ ಮುಂದಿನ ಒಂದು ವರ್ಷದ ಅವಧಿಗೆ ಸ್ಥಾಯಿ ಸಮಿತಿ ರಚನೆ ಮಾಡುವ ಸಂದರ್ಭದಲ್ಲಿ ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿದ ಪಕ್ಷೇತರ ಸದಸ್ಯ ಜಗದೀಶ ನಾಯಕ, ಕಾಂಗ್ರೆಸ್ ಬೆಂಬಲಕ್ಕೆ ನಿಂತ ಕಾರಣದಿಂದ ಕಾಂಗ್ರೆಸ್ಸಿನ 11 ಸದಸ್ಯರು ಎದ್ದು ನಿಂತರು. ಬಿಜೆಪಿಯಲ್ಲಿ 12 ಸದಸ್ಯರು ಉಪಸ್ಥಿತರಿದ್ದರೂ ಕೂಡ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮತ ಚಲಾಯಿಸುವ ಹಕ್ಕಿಲ್ಲದ್ದರಿಂದ ಅದು 10ಕ್ಕೇ ನಿಂತಿತು.
ಸಭೆಯಲ್ಲೇ ಇತ್ಯರ್ಥವಾಗಬೇಕೆಂದು ಪಟ್ಟು
ಸಹಜವಾಗಿ ಕಾಂಗ್ರೆಸ್ ಸದಸ್ಯರು ಸ್ಥಾಯಿ ಸಮಿತಿಗೆ ಸದಸ್ಯರಾಗಲು ಹಕ್ಕೊತ್ತಾಯ ಮಂಡಿಸಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ತಮ್ಮದೇ ಬಹುಮತವಾಗುತ್ತದೆ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ತಮ್ಮ ಬೆಂಬಲವಿದೆ ಎಂದು ವಾದಿಸಿದರು. ಮತ್ತು ಶಾಸಕಿಯವರ ಉಪಸ್ಥಿತಿಯಲ್ಲಿ ಇನ್ನೊಂದು ದಿನ ಸ್ಥಾಯಿ ಸಮಿತಿ ರಚನೆ ಮಾಡುವ ಬಗ್ಗೆ ನಿರ್ಧರಿಸಿದರು. ಇದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು ಈ ಸಭೆಯಲ್ಲೇ ಇತ್ಯರ್ಥವಾಗಬೇಕೆಂದು ಪಟ್ಟು ಹಿಡಿದರು.
ಲಾಕ್ಡೌನ್ ಬಳಿಕ ಉತ್ತರ ಕನ್ನಡದಲ್ಲಿ 10ಕ್ಕೂ ಹೆಚ್ಚು ಪ್ರವಾಸಿಗರ ಸಾವು!
ಸಭೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಾನೂನು ಬಾಹಿರ
ಒಂದು ಹಂತದಲ್ಲಿ ವಾದ ವಿವಾದ ತಾರಕಕ್ಕೇರುತ್ತಿದ್ದಂತೆ ಸದಸ್ಯರೊಬ್ಬರ ಕೈ ತಾಗಿ ಗ್ಲಾಸುಗಳು ಬಿದ್ದು ಒಡೆದು ಹೋದವು. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು. ಕಾಂಗ್ರೆಸ್ ಸದಸ್ಯರು ಸಭಾಂಗಣದಲ್ಲಿಯೇ ಉಪಸ್ಥಿತರಿದ್ದು, ಸಭೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಾನೂನು ಬಾಹಿರ ಎಂದು ಪಟ್ಟು ಹಿಡಿದು ಇದನ್ನು ಇತ್ಯರ್ಥಪಡಿಸಲೇಬೇಕೆಂದು ರಾತ್ರಿಯವರೆಗೆ ಪುರಸಭೆ ಆವರಣದಲ್ಲಿಯೇ ಧರಣಿ ನಡೆಸಿದರು. ಸಭೆಯು ಅರ್ಧಕ್ಕೆ ಮೊಟುಕುಗೊಳಿಸಿದ್ದರ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ವಿಚಾರಿಸಿದರೆ, ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಸಭೆಯನ್ನು ಅಧ್ಯಕ್ಷರೇ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದಿದ್ದಾರೆ. ಆದರೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸಭೆಯಲ್ಲೇ ಇದ್ದು, ಮುಖ್ಯಾಧಿಕಾರಿಗಳೇ ಸಭೆ ಮುಂದೂಡಿದ್ದಾರೆಂದು ಎದ್ದು ಹೋಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಸೈಲ್ ಅಖಾಡಕ್ಕೆ ಎಂಟ್ರಿ; ಅಹೋರಾತ್ರಿ ಧರಣಿ
ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗೊಂದಲ ಸೃಷ್ಠಿಯಾಗಿ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಕಾಂಗ್ರೆಸ್ ನಾಯಕರು ಪುರಸಭೆಯತ್ತ ಧಾವಿಸಿ ಬಂದರು. ಮಾಜಿ ಶಾಸಕ ಸತೀಶ ಸೈಲ್ ಎಂಟ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಿಗೆ ಆನೆಬಲ ಬಂದಂತಾಗಿ ಧರಣಿ ಪ್ರತಿಭಟನೆಗೆ ತಿರುಗಿತು. ಪುರಸಭೆಯ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸೈಲ್, ಮುಖ್ಯಾಧಿಕಾರಿಗಳ ಅಸಮರ್ಪಕ ಉತ್ತರಗಳಿಗೆ ಕೆಂಡ ಕಾರಿದರು. ಇವರ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಜಿ.ಪಂ. ಸದಸ್ಯ ವಿನೋದ ನಾಯಕ, ಶೀಲಾ ದೀಕ್ಷಿತ, ಪ್ರಮುಖರಾದ ಉದಯ ವಾಮನ ನಾಯಕ ಇನ್ನಿತರರು ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದಾರೆ. ಸೈಲ್ ನೇತೃತ್ವದಲ್ಲಿ ಪುರಸಭೆ ಕಚೇರಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿತ್ತು. ಸಭೆ ಅಂತಿಮ ಹಂತದ ಠರಾವು ಪ್ರತಿ ಬರುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸೈಲ್ ತಿಳಿಸಿದ್ದಾರೆ.
Recommended Video
ಮುಖ್ಯಾಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ
ಸಭೆಯಲ್ಲಿ ಮೊದಲೇ ಸದಸ್ಯರ ಬಲಾಬಲದ ಯಾದಿಯನ್ನು ಬರೆದಿಡಲಾಗಿದೆ. ಲೆಕ್ಕ ಪತ್ರವೊಂದರ ಮಾಹಿತಿ ಕೇಳಿದಾಗ ಒಂದು ಫೈಲ್ ತರಲು ಒಂದೂವರೆ ಗಂಟೆಗಳ ಕಾಲ ತೆಗೆದುಕೊಳ್ಳಲಾಗಿದೆ. ಗಲಾಟೆಯಾದ ಬಗ್ಗೆ ಸಿಸಿಟಿವಿ ದೃಶ್ಯಾವಳಿ ತೋರಿಸಲು ಕೇಳಿದರೆ ಅದರ ಪಾಸ್ವರ್ಡ್ ಬೇರೆಯವರಲ್ಲಿದೆ. ಅವರು ರಜಾ ಮಾಡಿದ್ದಾರೆ. ಕರೆ ಸ್ವೀಕರಿಸುತ್ತಿಲ್ಲ ಎಂದೆಲ್ಲ ಮುಖ್ಯಾಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಮಂಜುನಾಥ ನಾಯ್ಕ ತಿಳಿಸಿದ್ದಾರೆ.