ಚುನಾವಣೆ ಫಲಿತಾಂಶ: ಕುಮಾರಸ್ವಾಮಿಗೆ ಅನಂತ್ ತಿರುಗೇಟು
ಕಾರವಾರ, ಮೇ 23: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕುಮಟಾಕ್ಕೆ ಬಂದಾಗ, ಮೇ 23ರ ನಂತರ ಅನಂತಕುಮಾರ ಹೆಗಡೆ ಎಲ್ಲಿರ್ತಾರಪ್ಪಾ ಅಂತ ಕೇಳಿದ್ದರು. ಈಗ ನಿಮ್ಮ ಮಗ ಮತ್ತು ಅಪ್ಪ ಎಲ್ಲಿದ್ದಾರೆ ಎಂದು ಹುಡ್ಕೊಂಡ್ ಬನ್ನಿ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಗೆದ್ದ ಅಭ್ಯರ್ಥಿ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
ಕುಮಟಾ ಮತ ಎಣಿಕೆ ಕೇಂದ್ರ ಸಮೀಪ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಾವು ಜನರ ಮಧ್ಯೆಯೇ ಇದ್ದೇವೆ. ನಿಮ್ಮ ಮಗ ನಿಖಿಲ್ ಹಾಗೂ ಮಾಜಿ ಪ್ರಧಾನಿಯವರು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಬರಬೇಕು ಎಂದು ಹೇಳಿದ್ದಾರೆ.
ಭಾರೀ ಅಂತರದ ಗೆಲುವು, ದಾಖಲೆ ಬರೆದ ಅನಂತ್ ಕುಮಾರ್ ಹೆಗಡೆ
ಮೇಲಿದ್ದವರು ಪಾತಾಳಕ್ಕೆ ಇಳಿಯುತ್ತಾರೆ, ಪಾತಾಳದಲ್ಲಿರುವವರು ಮತ್ತೆಲ್ಲೋ ಇರುತ್ತಾರೆ. ಇದು ಪ್ರಜಾಪ್ರಭುತ್ವದ ವೈಶಿಷ್ಟ್ಯತೆ. ಜನ ಪ್ರೀತಿ ಮತ್ತು ವಿಶ್ವಾಸದಿಂದ ನಮ್ಮ ಜತೆ ಇದ್ದರೆ ಅಸಾಧ್ಯವೂ ಸುಲಭ ಸಾಧ್ಯ. 22 ವರ್ಷಗಳಿಂದ ಉತ್ತರ ಕನ್ನಡದ ಈ ಮಣ್ಣು ಒಂದು ವಿಚಾರವನ್ನು ನಂಬಿಕೊಂಡು ಬಂದಿದೆ. ಇಷ್ಟು ಕಡಿಮೆ ಖರ್ಚಿನಲ್ಲಿ ಚುನಾವಣೆ ದೇಶದಲ್ಲಿ ಮತ್ತೆಲ್ಲೂ ನಡೆದಿಲ್ಲ. ಪಕ್ಷ ಕೊಟ್ಟಿದ್ದನ್ನು ಎಲ್ಲಾ ಕಡೆ ಕೊಡೋ ಪ್ರಯತ್ನ ಮಾಡಿದ್ದೇನೆ. ಬಾಕಿ ಎಲ್ಲವನ್ನೂ ಶಾಸಕರೇ ತಲೆ ಮೇಲೆ ತೆಗೆದುಕೊಂಡು ಮಾಡಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಇದು ಮಾದರಿ ಚುನಾವಣೆ ಎಂದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ನಾಳೆ ದೆಹಲಿಗೆ ಹೊರಡಲಿದ್ದೇನೆ. ಮೇ 26ಕ್ಕೆ ಪ್ರಮಾಣ ವಚನ ಸ್ವೀಕಾರ ಇದೆ ಎಂದು ತಿಳಿಸಿದ್ದಾರೆ. ಜೂನ್ 3ರ ಒಳಗೆ ಎಲ್ಲ ಮುಗಿದು ಹೊಸ ಸರ್ಕಾರ ರಚನೆಯಾಗಬೇಕಿದೆ. ಅಷ್ಟರಲ್ಲಿ ಎಲ್ಲ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ. ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.