ಅನಂತಕುಮಾರ ಹೆಗಡೆಗೆ ಸ್ವಪಕ್ಷದಲ್ಲೇ ವಿರೋಧವಿದೆ: ಆನಂದ್ ಅಸ್ನೋಟಿಕರ್
ಕಾರವಾರ, ಮಾರ್ಚ್ 17: ಗುಪ್ತಚರ ಮಾಹಿತಿಯ ಪ್ರಕಾರ, ಅನಂತಕುಮಾರ ಹೆಗಡೆಯವರು ಈವರೆಗೂ ತಮಗೆ ಮತ ಹಾಕಿ ಎಂದು ಎಲ್ಲೂ ಕೇಳಿಲ್ಲ. ಮೋದಿಯವರನ್ನ ನೋಡಿ ಮತ ಹಾಕಿ, ಅವರಿಗಾಗಿ ಮತ ಹಾಕಿ ಎಂದಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ಅನಂತಕುಮಾರ ಅಭಿವೃದ್ಧಿ ಮಾಡಲು ಬಂದಿಲ್ಲ. ಅವರು ಬಂದಿರೋದು ಕೇವಲ ರಾಜಕಾರಣ ಮಾಡೋದಿಕ್ಕೆ. ಹೀಗಾಗಿ ಅವರು ರಾಜಕೀಯವಾಗಿ ಮಾತನಾಡುತ್ತಾರೆ. ಹಿಂದೂ ಧರ್ಮವನ್ನೂ ಇಬ್ಭಾಗ ಮಾಡಲಿಕ್ಕೆ ಬಂದಿದ್ದಾರೆ. ಮತಕ್ಕಾಗಿ ಧರ್ಮ ಅಷ್ಟೇ ಅಲ್ಲ, ಜಾತಿಯನ್ನೂ ಒಡೆಯುತ್ತಿದ್ದಾರೆ ಎಂದು ದೂರಿದರು.
ಕಿತ್ತೂರು, ಖಾನಾಪುರ ಅಂದರೆ ಅನಂತಕುಮಾರ ಆಸ್ತಿ ಎಂಬ ಮನೋಭಾವ ನಮ್ಮ ಜನರಲ್ಲಿದೆ. ನನಗೆ ಜೆಡಿಎಸ್ ನಿಂದ ಟಿಕೆಟ್ ಸಿಕ್ಕರೆ, ಅಲ್ಲೇ ಒಂದು ಲಕ್ಷಕ್ಕಿಂತ ಹೆಚ್ಚು ಲೀಡ್ ನಲ್ಲಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಮಾತಿನ ಮಲ್ಲ'ನಿಗೆ ಮಾತಲ್ಲೇ ಟಕ್ಕರ್ ಕೊಡ್ತಾರಾ ಆನಂದ್ ಅಸ್ನೋಟಿಕರ್?
ಅನಂತಕುಮಾರ ಹೆಗಡೆಗೆ ಸ್ವಪಕ್ಷದಲ್ಲೇ ವಿರೋಧವಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಈ ಬಾರಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಮತ ಹಾಕುವಾಗ ಯೋಚನೆ ಮಾಡ್ಬೇಕು
ಅನಂತಕುಮಾರದ್ದು ನಾಲಿಗೆ ಚುನಾವಣೆ. ತಂದೆನೇ ಅವರ ಮೇಲೆ ವಿಶ್ವಾಸ ಇಡಲ್ಲ ಅಂದಮೇಲೆ, ಜನರು ಅವರಿಗೆ ಮತ ಹಾಕುವಾಗ ಯೋಚನೆ ಮಾಡ್ಬೇಕು. ಅವರು ನಮ್ಮ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ. ಅತೃಪ್ತ ಬಿಜೆಪಿಗರೇ ಈ ಬಾರಿ ನಮ್ಮ ಶಕ್ತಿ ಎಂದು ಆನಂದ್ ಅಸ್ನೋಟಿಕರ್ ತಿಳಿಸಿದರು.
ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಜ್ಜು
ದೇಶವನ್ನು ಇಬ್ಭಾಗ ಮಾಡುತ್ತಾರೆ
ಪರೇಶ್ ಮೇಸ್ತನ ತಂದೆಯನ್ನು ಕೇಳಿ. ಯಾವ ದೇವಸ್ಥಾನದಲ್ಲಿಯಾದರೂ ಪ್ರಮಾಣ ಮಾಡಿಸಿ ಕೇಳಿ. ಅವರ ಮಗನ ಸಾವನ್ನು ರಾಜಕೀಯವಾಗಿ ಅನಂತಕುಮಾರ ಬಳಸಿಕೊಂಡಿದ್ದಾರೆ ಎಂದ ಆನಂದ್ ಅಸ್ನೋಟಿಕರ್, ನರೇಂದ್ರ ಮೋದಿ ಒಬ್ಬರ ಬಗ್ಗೆಯೂ ಈವರೆಗೆ ಕೆಳ ಮಟ್ಟದಲ್ಲಿ ಮಾತನಾಡಿಲ್ಲ. ನನ್ನ ದೇಶದ ಜನ ಅಂತ ಪ್ರತಿ ಭಾಷಣ ಆರಂಭಿಸುತ್ತಾರೆ. ಆದರೆ, ಅನಂತಕುಮಾರ ದೇಶವನ್ನು ಇಬ್ಭಾಗ ಮಾಡುತ್ತಾರೆ ಎಂದು ಆರೋಪಿಸಿದರು.
'ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ'
ಮೋದಿ ಹೆಸರಲ್ಲಿ ಮತ ಕೇಳಿ ಗೆಲುವು
ಅನಂತಕುಮಾರ ಹೆಗಡೆ, ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಇನ್ನೊಂದು ಸಾರಿ ವಾಜಪೇಯಿ ಅವರಿಂದ ಆಯ್ಕೆ ಆದರು. ಮೂರನೇ ಬಾರಿ ಮೋದಿ ಹೆಸರಲ್ಲಿ ಮತ ಕೇಳಿ ಗೆಲುವು ಕಂಡರು ವಿನಾ ತಮ್ಮ ಸಾಧನೆಗಳಿಂದ ಅಲ್ಲ ಎಂದು ಆನಂದ್ ಅಸ್ನೋಟಿಕರ್ ವಾಗ್ದಾಳಿ ಮಾಡಿದರು.
ಯುವಕರ ಕೈಗೆ ಕತ್ತಿ ಕೊಡುತ್ತಿದ್ದಾರೆ
ಮಾತೆತ್ತಿದರೆ ಹಿಂದುತ್ವ ಎಂದು ಬೊಬ್ಬಿರಿಯುವ ಅನಂತಕುಮಾರ್, ಹಿಂದೂ ಮಕ್ಕಳಿಗಾಗಿ ಏನು ಮಾಡಿದ್ದಾರೆ. ಅವರೀಗ ಕೌಶಲ್ಯ ಅಭಿವೃದ್ಧಿ ಸಚಿವರಾಗಿದ್ದಾರೆ. ಆದರೆ, ಕೌಶಲ್ಯ ಅಂದ್ರೆ ಏನು ಎಂದು ಗೊತ್ತಿದೆಯಾ? ಧರ್ಮ, ಜಾತಿಯ ಆಧಾರದ ಮೇಲೆ ನಮ್ಮ ಯುವಕರ ಕೈಗೆ ಕತ್ತಿ ಕೊಡುತ್ತಿದ್ದಾರೆ. ಹಿಂದುಳಿದ ವರ್ಗದ ಯುವಕರನ್ನು ಕೆಟ್ಟ ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಜಿಲ್ಲೆಯ ಮತದಾರರು ರಾಷ್ಟ್ರದಲ್ಲಿ ನೋಡ್ಬೇಡಿ. ಸ್ಥಳೀಯವಾಗಿ ನೋಡಿ ಮತ ಹಾಕಿ ಎಂದು ಆನಂದ್ ಅಸ್ನೋಟಿಕರ್ ಮನವಿ ಮಾಡಿದರು.