ಮರು ಎಣಿಕೆಗೆ ಮನವಿ ಮಾಡುತ್ತೇವೆ ಎಂದ ಆನಂದ ಅಸ್ನೋಟಿಕರ್
ಕಾರವಾರ, ಮೇ 17 : ಕಾರವಾರ- ಅಂಕೋಲಾ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ ಉಂಟಾಗಿದ್ದು, ಮರು ಎಣಿಕೆಗಾಗಿ ಚುನಾವಣಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿದ್ದ ಅವರು, ಬಿಜೆಪಿಯ ರೂಪಾಲಿ ನಾಯ್ಕ ಅವರ ಎದುರು 14,064 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋತ ಬಳಿಕ ಅಂಕೋಲಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸೋಲಿಗೆ ಕಾರಣ ಹುಡುಕುತ್ತಿರುವ ಬಾವಾ
ಕ್ಷೇತ್ರದ ಫಲಿತಾಂಶದಿಂದ ಜೆಡಿಎಸ್ ಕಾರ್ಯಕರ್ತರಿಗೆ ಬಹಳ ಅಸಮಾಧಾನವಾಗಿದೆ. ಆದರೆ, ಇದರಿಂದ ಯಾರೂ ಬೇಸರ ಪಟ್ಟುಕೊಳ್ಳುವುದು ಬೇಡ. ಇದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಮತ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಶಂಕೆ ಇದೆ. ಕಾರ್ಯಕರ್ತರ ಸಲಹೆಯಂತೆ ಮರು ಮತ ಎಣಿಕೆಗೆ ಆಯೋಗವನ್ನು ಕೋರಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರು ಕ್ಷೇತ್ರದ ಪ್ರತಿಯೊಬ್ಬರ ಮನೆ ಮನೆಗಳಿಗೆ ತೆರಳಿ ಕಾರ್ಯ ಯೋಜನೆಗಳನ್ನು ತಿಳಿಸಿ ಜನರಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದರು. ಗೆಲುವಿನ ನೀರಿಕ್ಷೆ ಬಹಳ ಇತ್ತು. ಚುನಾವಣೆ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.
ಕೆಲವೇ ತಿಂಗಳ ಸಂಘಟನೆಯಲ್ಲಿ ಅತಿ ಹೆಚ್ಚು ಮತವನ್ನು ಜೆಡಿಎಸ್ ಪಕ್ಷ ಪಡೆದಿದ್ದು, ಮುಂದಿನ ದಿನದಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಶಕ್ತಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮನಸ್ಸಿದೆ. ಅದಕ್ಕಾಗಿ ತಯಾರಿ ಈಗಿನಿಂದಲೇ ಪ್ರಾರಂಭಿಸಲಾಗುವುದು. ಕಾರವಾರ- ಅಂಕೋಲಾ ಜೆಡಿಎಸ್ ಘಟಕವನ್ನು ಪುನರ್ ರಚನೆ ಮಾಡಲಾಗುವುದು. ಯುವಕರಿಗೆ ಆದ್ಯತೆ ನೀಡಲಾಗುವುದು.
ಪಕ್ಷದಲ್ಲಿದ್ದುಕೊಂಡೇ ಚುನಾವಣೆ ವೇಳೆ ಪಕ್ಷ ವಿರೋಧಿ ಕೆಲಸವನ್ನು ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಕ್ಷೇತ್ರವನ್ನು ಬಿಟ್ಟು ಈ ಬಾರಿ ಎಲ್ಲಿಯೂ ಹೋಗುವುದಿಲ್ಲ. ಇಲ್ಲಿಯೇ ಇದ್ದು ಪಕ್ಷವನ್ನು ಕಟ್ಟುತ್ತೇನೆ ಎಂದಿದ್ದಾರೆ.