ಕಾರವಾರ ರಾಜಕೀಯ; ಪಕ್ಷೇತರನಾಗಿ ಮಾಜಿ ಸಚಿವರು ಕಣಕ್ಕೆ?
ಕಾರವಾರ, ಸೆಪ್ಟೆಂಬರ್ 26; ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮುಂದಿನ ನಡೆ ಯಾವ ಕಡೆ?. 2023ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದಾಗಲೇ ಆನಂದ್ ಅಸ್ನೋಟಿಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಜೆಡಿಎಸ್ನಿಂದ ದೂರವಾಗಿರುವ ಅವರು ಕಾಂಗ್ರೆಸ್ ಸೇರಲಿಲ್ಲ, ಬಿಜೆಪಿ ಸೇರಿದರೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ.
ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್
ಕ್ಷೇತ್ರದ ಹಾಲಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ್. ಕಾಂಗ್ರೆಸ್ನಿಂದ ಸತೀಶ್ ಸೈಲ್ ಟಿಕೆಟ್ ಪಡೆಯಲಿದ್ದಾರೆ ಎಂಬುದು ಲೆಕ್ಕಾಚಾರ. ಆದ್ದರಿಂದ ಕಾರವಾರ-ಅಂಕೋಲಾದಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗುತ್ತಿದೆ. ಆನಂದ್ ಅಸ್ನೋಟಿಕರ್ ಯಾವುದೇ ಪಕ್ಷ ಸೇರದೆ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ವಿಶೇಷ ವರದಿ: ಕುತೂಹಲ ಮೂಡಿಸಿದ ಮಧು ಬಂಗಾರಪ್ಪ, ಆನಂದ್ ಅಸ್ನೋಟಿಕರ್ ಭೇಟಿ!
ಆನಂದ್ ಅಸ್ನೋಟಿಕರ್ 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. 46,275 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಸತೀಶ್ ಸೈಲ್ 45,071 ಮತ ಪಡೆದಿದ್ದರು. ರೂಪಾಲಿ ನಾಯ್ಕ್ 60,339 ಮತಗಳನ್ನು ಪಡೆದು ಗೆಲುವು ಕಂಡಿದ್ದರು.
ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ದೂರ ದೂರ!
ಆನಂದ್ ಅಸ್ನೋಟಿಕರ್
ಕಾರವಾರ-ಅಂಕೋಲಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಆನಂದ್ ಅಸ್ನೋಟಿಕರ್ ಒಂದು ಬಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು 44,847 ಮತಗಳನ್ನು ಪಡೆದು ಪಕ್ಷೇತರನಾಗಿ ಕಣಕ್ಕಿಳಿದಿದ್ದ ಸತೀಶ್ ಸೈಲ್ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲಿ ಅಸ್ನೋಟಿಕರ್ ಜೆಡಿಎಸ್ನಿಂದ ಕಣಕ್ಕಿಳಿದರು, ಸತೀಶ್ ಸೈಲ್ ಕಾಂಗ್ರೆಸ್ನಿಂದ ಕಣಕ್ಕಿಳಿದು ಇಬ್ಬರೂ ಸೋಲು ಕಂಡರು. ಕ್ಷೇತ್ರ ಬಿಜೆಪಿ ಪಾಲಾಯಿತು.
ಕಳೆದ ಬಾರಿ ತ್ರಿಕೋನ ಸ್ಪರ್ಧೆ
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕಾರವಾರ-ಅಂಕೋಲಾ ಪ್ರತಿಷ್ಠೆಯ ಕ್ಷೇತ್ರವಾಗಿದೆ. 2018ರಲ್ಲಿಯೇ ತ್ರಿಕೋನ ಸ್ಪರ್ಧೆ ನಡೆದಿತ್ತು. ಮೊದಲ ಪ್ರಯತ್ನದಲ್ಲಿಯೇ ರೂಪಾಲಿ ನಾಯ್ಕ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಮುಂಬರುವ ಚುನಾವಣೆಯಲ್ಲಿಯೂ ಇದೇ ಮಾದರಿ ಜಿದ್ದಾಜಿದ್ದಿ ನಿರೀಕ್ಷೆ ಮಾಡಲಾಗಿದೆ. ಆದರೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪಕ್ಷೇತರರಾಗಿ ಉಳಿಯುವ ನಿರೀಕ್ಷೆ ಇದೆ. 2019ರ ಲೋಕಸಭೆ ಚುನಾವಣೆ ಬಳಿಕ ಅವರು ಜೆಡಿಎಸ್ನಿಂದ ದೂರವಾಗಿದ್ದು, ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಅನುಮಾನ. ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅವರು, ಚುನಾವಣೆ ಹತ್ತಿರವಾದಾಗ ತಮ್ಮ ತೀರ್ಮಾನ ಘೋಷಣೆ ಮಾಡುವ ನಿರೀಕ್ಷೆ ಇದೆ.
ಪಕ್ಷ ಸಂಘಟನೆಯಲ್ಲಿ ಸಕ್ರಿಯ
ಹಾಲಿ ಶಾಸಕಿಯಾಗಿರುವ ರೂಪಾಲಿ ನಾಯ್ಕ್ ಮತ್ತೆ ಟಿಕೆಟ್ ಪಡೆಯುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಸತೀಶ್ ಸೈಲ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಕಾಂಗ್ರೆಸ್ ಟಿಕೆಟ್ ಪಡೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಕೆಲವು ತಿಂಗಳ ಹಿಂದೆ ಆನಂದ್ ಅಸ್ನೋಟಿಕರ್ ತಾವು ಜೆಡಿಎಸ್ನಿಂದ ಕಣಕ್ಕಿಳಿಯಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಹೇಳಿಲ್ಲ. ಇದು ಕ್ಷೇತ್ರದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಆನಂದ್ ಅಸ್ನೋಟಿಕರ್ ಮನವೊಲಿಕೆ ಮಾಡಲು ಮುಂದಾಗಬಹುದು ಎಂಬ ಸುದ್ದಿಗಳು ಹಬ್ಬಿವೆ.
ಅಕ್ಟೋಬರ್ನಲ್ಲಿ ಕ್ಷೇತ್ರದಲ್ಲಿ ಸಂಚಾರ
ಆನಂದ್ ಅಸ್ನೋಟಿಕರ್ ಅಕ್ಟೋಬರ್ನಲ್ಲಿ ದಸರಾ ಬಳಿಕ ಕ್ಷೇತ್ರದಲ್ಲಿ ಸಂಚಾರ ಆರಂಭಿಸಲಿದ್ದಾರೆ. ಅಭಿಮಾನಿಗಳು ಹಿತೈಷಿಗಳನ್ನು ಭೇಟಿಯಾಗಿ ಮುಂದಿನ ನಡೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಹಿಂದೆ ಮಾಡಿದ ತಪ್ಪುಗಳನ್ನು ಮಾಡದೇ ಅಭಿಮಾನಿಗಳ ಅಭಿಪ್ರಾಯದಂತೆ ಮುಂದಿನ ನಡೆ ಬಗ್ಗೆ ವರ್ಷದ ಅಂತ್ಯಕ್ಕೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.