ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ದೂರ ದೂರ!
ಕಾರವಾರ, ಫೆಬ್ರವರಿ 26: ಕಳೆದ ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸದ್ಯ ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಸಹ ಆಗಿರುವ ಆನಂದ್ ಅಸ್ನೋಟಿಕರ್, ಪಕ್ಷದ ಚಟುವಟಿಕೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಗುರುತಿಸಿಕೊಳ್ಳದೇ ಇರುವುದು ಇದೀಗ ಅಸ್ನೋಟಿಕರ್ ಪಕ್ಷ ಬಿಡುವುದು ಬಹುತೇಕ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದರೂ ಉತ್ಸಾಹ ತೋರದಿರುವುದು ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅನಂತಕುಮಾರ್ ವಿವಾದಾತ್ಮಕ ಹೇಳಿಕೆಯೇ ಸರಿ ಎಂದ ಜಿಲ್ಲಾ ಬಿಜೆಪಿ ಕಾರ್ಯಕರ್ತರು
ಕಾರವಾರ- ಅಂಕೋಲಾ ಕ್ಷೇತ್ರದಿಂದ ಶಾಸಕರಾಗಿ ಕಿರಿಯ ವಯಸ್ಸಿನಲ್ಲಿಯೇ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್, ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದ ಕದ ತಟ್ಟಿ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದರು. ಕ್ಷೇತ್ರದಲ್ಲಿ ಪಕ್ಷದ ನೆಲೆ ಇಲ್ಲದಿದ್ದರೂ ವೈಯಕ್ತಿಕ ವರ್ಚಸ್ಸಿನಿಂದ ಉತ್ತಮ ಮತ ಪಡೆದರು. ಆದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ರೂಪಾಲಿ ನಾಯ್ಕ ವಿರುದ್ಧ ಸೋಲು ಕಂಡಿದ್ದರು.
ಪಕ್ಷ ಸಂಘಟನೆಯಿಂದ ಆನಂದ್ ಅಸ್ನೋಟಿಕರ್ ದೂರ
ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡರೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆನಂದ್ ಅಸ್ನೋಟಿಕರ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಲೋಕಸಭಾ ಚುನಾವಣೆಯ ಸೋಲಿನ ನಂತರ ಆನಂದ್ ಅಸ್ನೋಟಿಕರ್ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಿಂದ ಸಂಪೂರ್ಣ ದೂರ ಸರಿದಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆ ನಿಲ್ಲುವುದು ಕಷ್ಟ ಎನ್ನುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಅಸ್ನೋಟಿಕರ್ ಮುಂದಾಗುತ್ತಿಲ್ಲ.
ರಾಜಕೀಯ ಜೀವನದ ಗೊಂದಲದಲ್ಲಿ ಅಸ್ನೋಟಿಕರ್
ಸದ್ಯ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು ಕ್ಷೇತ್ರದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದರೆ, ಇನ್ನೊಂದೆಡೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಹ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅವಧಿಗೆ ಮುನ್ನವೇ ಎದುರಾಗಿದೆ ಮತ್ಸ್ಯಕ್ಷಾಮ; ಕಂಗಾಲಾಗಿರುವ ಕಡಲ ಮಕ್ಕಳು
ಆದರೆ, ಮುಂದಿನ ರಾಜಕೀಯ ಜೀವನದ ಗೊಂದಲಕ್ಕೆ ಸಿಲುಕಿರುವ ಆನಂದ್ ಅಸ್ನೋಟಿಕರ್ ಮಾತ್ರ ಜೆಡಿಎಸ್ ಪಕ್ಷದ ಸಂಘಟನೆ ಮಾಡುವಲ್ಲಿ ಮಾತ್ರ ಆಸಕ್ತಿ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಎಲ್ಲೇ ಕಾರ್ಯಕ್ರಮದಲ್ಲಿ ತೊಡಗಿಕೊಂಡರು ಪಕ್ಷದಿಂದ ಮಾತ್ರ ಗುರುತಿಸಿಕೊಳ್ಳಲು ಆನಂದ್ ಮುಂದಾಗುತ್ತಿಲ್ಲ.
ಸದ್ಯ ತಟಸ್ಥ ಸ್ಥಿತಿ ಎಂದ ಆನಂದ್
ಈ ಬಗ್ಗೆ ಮಾತನಾಡಿರುವ ಆನಂದ್ ಅಸ್ನೋಟಿಕರ್, ""ಕ್ಷೇತ್ರದಲ್ಲಿ ತನ್ನ ಅಭಿಮಾನಿಗಳು ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಒತ್ತಾಯ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠಗೊಳಿಸಬೇಕಾದರೆ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ, ಹಾಸನದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟ ರೀತಿಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕೊಡಬೇಕಾಗಿದೆ. ಇಲ್ಲವಾದರೆ ತಳಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುವುದಂತೂ ಕಷ್ಟ. ಅದಕ್ಕಾಗಿ ಸದ್ಯ ತಟಸ್ಥ ಉಳಿದಿದ್ದೇನೆ'' ಎಂದು ತಿಳಿಸಿದರು.
ಅಸ್ನೋಟಿಕರ್ ಅಭಿಮಾನಿಗಳು ಗೊಂದಲದಲ್ಲಿ
ಪಕ್ಷದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತನಗೆ ಹೆಚ್ಚಿನ ಅವಕಾಶ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆ ಸೋತರು ಲೋಕಸಭಾ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದರು. ತಾನೂ ಏನೇ ರಾಜಕೀಯ ನಿರ್ಧಾರ ತೆಗೆದುಕೊಂಡರು ಕುಮಾರಸ್ವಾಮಿಯವರ ಒಪ್ಪಿಗೆ ಪಡೆದೇ ಮುಂದಾಗುತ್ತೇನೆ ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಸಹ ಆನಂದ್ ದೂರ ಸರಿಯುತ್ತಿರುವುದು ಅವರ ಅಭಿಮಾನಿಗಳು ಸಹ ಗೊಂದಲಕ್ಕೆ ಸಿಲುಕುವಂತೆ ಮಾಡಿದೆ.