ಯಲ್ಲಾಪುರ: ಲಂಚ ಕೇಳಿದ ಅಧಿಕಾರಿಗೆ ಬುದ್ಧಿ ಕಲಿಸಲು ಭಿಕ್ಷೆ ಬೇಡಿದ ವ್ಯಕ್ತಿ; ನಂತರ ಆಗಿದ್ದೇನು?
ಕಾರವಾರ, ಅಕ್ಟೋಬರ್ 27: ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಬಯಸಿದ ಅಧಿಕಾರಿಯ ಮನಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ ಹಣ ನೀಡಲು ಮುಂದಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ತಟಗಾರ ಗ್ರಾಮದ ಸರ್ವೆ ನಂ. 12ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಹೀಗಾಗಿ ಗಜಾನನ ಭಟ್ಟ ಪುತ್ರ ಅಚ್ಯುತಕುಮಾರ ಎಂಬಾತನು ಮಂಗಳವಾರ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿ ಬಯಸಿದ ಲಂಚದ ಹಣ ನೀಡಲು ಮುಂದಾದರು.
ದೀಪಾವಳಿ ಹಬ್ಬದ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಸೈಟ್ಗಳ ಅಬ್ಬರ; ವ್ಯಾಪಾರವಿಲ್ಲದೆ ಬಡ ಅಂಗಡಿಕಾರರು ಕಂಗಾಲು!
ಅಷ್ಟೇ ಅಲ್ಲದೇ, ಭಿಕ್ಷೆ ಬೇಡಿ ಸಿಕ್ಕ 136 ರೂಪಾಯಿ ಹಿಡಿದು ತಹಶೀಲ್ದಾರ ಕಚೇರಿಗೆ ಬಂದು, ನಿಮ್ಮ ಯೋಗ್ಯತೆಗೆ 2 ಸಾವಿರ ಒಟ್ಟಾಗಲಿಲ್ಲ. 136 ರೂಪಾಯಿ ಮಾತ್ರ ಆಗಿದೆ. ಇದನ್ನೇ ಸ್ವೀಕರಿಸಿ ಎಂದು ಲಂಚ ಕೇಳಿದ ಅಧಿಕಾರಿಗೆ ಹೇಳಿದ್ದಾರೆ. ಈ ವೇಳೆ ಅಧಿಕಾರಿ, ತಟಗಾರ ಊರಿನ ಯಾರ ಬಳಿಯೂ ನಾನು ಹಣ ಕೇಳುವುದಿಲ್ಲ ಎಂದು ಹೇಳಿ ಪರಾರಿಯಾಗಿದ್ದಾನೆನ್ನಲಾಗಿದೆ.
ಭಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅಚ್ಯುತ್ಕುಮಾರ ಈ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರರು ವಿಷಯ ತಿಳಿದು, ಈ ರೀತಿ ಮಾಡುವುದು ನಮಗೂ ಶೋಭೆಯಲ್ಲ, ನಿಮಗೂ ಶೋಭೆಯಲ್ಲ. ಕಾನೂನು ಹೋರಾಟ ಮಾಡಬೇಕು ಎಂದರು. ಲಂಚ ಕೇಳಿದ ಅಧಿಕಾರಿಯೊಬ್ಬರ ವಿರುದ್ಧ ನಾ ಮಾಡಿದ ಕಾನೂನು ಹೋರಾಟ ಮೂರು ವರ್ಷದಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಬಾಕಿ ಇದೆ. ಹೀಗಾಗಿ ಅಧಿಕಾರಿಗಳ ಮನ ಪರಿವರ್ತನೆಗೆ ಈ ರೀತಿ ಮಾಡಿದೆ ಎಂದು ಅಚ್ಯುತಕುಮಾರ ತಿಳಿಸಿದರು.
ಅಚ್ಯುತ್ಕುಮಾರ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎಲ್ಲಾ ಕಚೇರಿಗಳಲ್ಲಿ ಆ ಆದೇಶ ಇನ್ನೂ ಅನುಷ್ಠಾನ ಆಗಿಲ್ಲ. ಆದೇಶದ ಅನ್ವಯ ಯಲ್ಲಾಪುರದ ತಹಶೀಲ್ದಾರ ಕಚೇರಿಯ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಅಚ್ಯುತಕುಮಾರ ಇದೇ ವೇಳೆ ತಹಶೀಲ್ದಾರ ಶ್ರೀಕೃಷ್ಣ ಕಾಮೇಕರ್ರಿಗೆ ಮನವಿ ಮಾಡಿದರು.
ಯಲ್ಲಾಪುರ ತಹಶೀಲ್ದಾರ್ ಶ್ರೀಕೃಷ್ಣ ಕಾಮೇಕರ್ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮನವಿಗೆ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರವೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Recommended Video
ಭ್ರಷ್ಟಾಚಾರ ತಡೆಗೆ ಸರ್ಕಾರಿ ಕಚೇರಿಯ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಕಡ್ಡಾಯ ಆಗಬೇಕು. ಈ ಕುರಿತು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಪಾಲನೆಯಾಗಿಲ್ಲ. ಪ್ರಸ್ತುತ ಜನರಿಂದ ಸ್ವೀಕೃತವಾದ 136 ರೂ. ಅನ್ನು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೃಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ಕೂಡ ಇದೇ ವೇಳೆ ಅಚ್ಯುತ್ಕುಮಾರ ತಿಳಿಸಿದ್ದಾರೆ.