ಉತ್ತರ ಕನ್ನಡ: ಚಿಕಿತ್ಸೆ ಸಿಗದೇ ಎಂಡೋಸಲ್ಫಾನ್ ಪೀಡಿತರ ನರಳಾಟ
ಕಾರವಾರ, ಜೂನ್ 09; ಎಂಡೋಸಲ್ಫಾನ್ಗೆ ತುತ್ತಾಗಿ ಬಹು ಅಂಗಾಂಗ ವಿಫಲಗೊಂಡು, ಬುದ್ಧಿ ಸರಿಯಾಗಿ ಬಾರದ ಮಕ್ಕಳು ಅನೇಕ ವರ್ಷಗಳಿಂದ ಹಾಸಿಗೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸರ್ಕಾರದಿಂದ ಗುತ್ತಿಗೆ ಪಡೆದ ಸ್ಕೋಡ್ವೆಸ್ ಸಂಸ್ಥೆಯ ವೈದ್ಯರು, ಸಿಬ್ಬಂದಿ ಇಂಥವರ ಮನೆ ಬಾಗಿಲಿಗೆ ಅಂಬ್ಯುಲೆನ್ಸ್ ಮೂಲಕ ತೆರಳಿ ಅವರಿಗೆ ಔಷಧೋಪಚಾರ ಕೈಗೊಳ್ಳುತ್ತಿದ್ದರು.
ಇದು ಎಂಡೋಸಲ್ಫಾನ್ ಪೀಡಿತರಲ್ಲಿ ಹಾಗೂ ಅವರ ಪಾಲಕ, ಪೋಷಕರಲ್ಲಿ ಒಂದಷ್ಟು ಆಶಾಭಾವನೆ ಮೂಡಿಸಿತ್ತು. ಆದರೆ ಇದೀಗ ಸರ್ಕಾರದ ಮೊಂಡುತನದಿಂದಾಗಿ ಕಳೆದ ಎರಡು ತಿಂಗಳಿಂದ ಎಂಡೋಸಲ್ಫಾನ್ ಪೀಡಿತರು ಸ್ಕೋಡ್ವೆಸ್ನ ಸೇವೆ ಸಿಗದೇ ಪಡಬಾರದ ಕಷ್ಟ ಅನುಭವಿಸುವಂತಾಗಿದೆ.
ಎಂಡೋಸಲ್ಫಾನ್ ಗೆ ಮಗನನ್ನು ಕಳೆದುಕೊಂಡವರಿಗೆ ಈಗ ಬ್ಯಾಂಕ್ ನೋಟಿಸ್
ಕಳೆದ ಎರಡ್ಮೂರು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ರಾಜ್ಯದ ಕರಾವಳಿಯ ಉಡುಪಿ, ಮಂಗಳೂರು, ಉತ್ತರ ಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧಿ ಸಿಂಪಡಿಸಲಾಗಿತ್ತು.
ಮಂಗಳೂರಿನ ಎಂಡೋಸಲ್ಫಾನ್ ಪೀಡಿತನ ಅಪೂರ್ವ ಸಾಧನೆ
ಆದರೆ ಇದು ಗೇರು ಗಿಡಕ್ಕೆ ಬಾಧಿಸುವ ಹುಳಗಳನ್ನು ಕೊಂದು, ರೋಗ ವಾಸಿ ಮಾಡುವುದಕ್ಕಿಂತ ಮನುಷ್ಯರಿಗೇ ಕಾಯಿಲೆ ತಂದು, ಗಂಭೀರ ಪರಿಣಾಮಬೀರಿತು. ಅಲ್ಲದೇ, ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ಧಿಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿತು.
ಎಂಡೋಸಲ್ಫಾನ್ ಪೀಡಿತರಿಗೆ ಸಂತಸದ ಸುದ್ದಿ, ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ
ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಬೇಕು
ಇಂಥವರಿಗೆ ಅಗತ್ಯ ಚಿಕಿತ್ಸೆಯನ್ನು ಮನೆಬಾಗಿಲಲ್ಲೇ ಒದಗಿಸಬೇಕು ಎನ್ನುವ ಉದ್ದೇಶದಿಂದ 2018ರಲ್ಲಿ ಶಿರಸಿಯ ಸ್ಕೋಡ್ವೆಸ್ ಸಂಸ್ಥೆಯ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯ 6 ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಾಧಿತರಿಗಾಗಿ ಒಟ್ಟೂ 4 ಅಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೆ ಸಾಕಷ್ಟು ಅನುಕೂಲ ಉಂಟಾಗಿತ್ತು. ಆದರೆ ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದಿದ್ದು, ಅಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದೆ.
1972 ಮಂದಿ ಪೀಡಿತರು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ದಾಪುರ ಸೇರಿ ಒಟ್ಟು 1972 ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ. ಆಯಾ ತಾಲ್ಲೂಕಗಳಿಗೆ ನಿಗದಿಯಾಗಿದ್ದ ಅಂಬ್ಯುಲೆನ್ಸ್ ಸಿಬ್ಬಂದಿ ತಿಂಗಳಿಗೆ ಒಂದು ಬಾರಿಯಂತೆ ಪ್ರತಿಯೊಬ್ಬ ಎಂಡೋಸಲ್ಫಾನ್ ಭಾದಿತರ ಮನೆಗೂ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನ ಒದಗಿಸುತ್ತಿದ್ದರು. ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೂ ಸಾಕಷ್ಟು ಅನುಕೂಲವಾಗಿದ್ದು, ಹಲವರಲ್ಲಿ ಚೇತರಿಕೆ ಸಹ ಕಂಡುಬಂದಿತ್ತು. ಆದರೆ ಕಳೆದೆರಡು ತಿಂಗಳಿನಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲವಾಗಿದ್ದು, ಕೊರೊನಾ ಹರಡುತ್ತಿರುವ ಹಾಗೂ ಲಾಕ್ ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಕುಟುಂಬದವರಿಗೆ ಸವಾಲು
ಎಂಡೋಸಲ್ಫಾನ್ ಪೀಡಿತರಿಗೆ ಸರಿಯಾದ ಸಮಯಕ್ಕೆ ಔಷಧಗಳನ್ನು ಒದಗಿಸಬೇಕಾಗಿರುವುದು ಅತ್ಯಗತ್ಯವಾಗಿದ್ದು, ಇದು ಅವರ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಳ್ಳಲು ಅನುಕೂಲಕರವಾಗಿತ್ತು. ಆದರೆ ಇದೀಗ ಮನೆ ಬಾಗಿಲಲ್ಲೇ ಸಿಗುತ್ತಿದ್ದ ಆರೋಗ್ಯ ಸೇವೆ ಸ್ಥಗಿತಗೊಂಡಿದ್ದು, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ಇರುವ ಪೀಡಿತರನ್ನು ಆಸ್ಪತ್ರೆಗಳಿಗೆ ಹೊತ್ತುಕೊಂಡು ಬರುವುದು ಕುಟುಂಬಸ್ಥರಿಗೆ ಸವಾಲಾಗಿದೆ. ಅಲ್ಲದೇ ಎಂಡೋಸಲ್ಫಾನ್ ಭಾದಿತರಿಗೆ ನೀಡುವ ಔಷಧಗಳು ಎಲ್ಲೆಡೆ ಸಿಗುವುದು ಸಹ ಕಷ್ಟಕರವಾಗಿದ್ದು, ದುಬಾರಿ ಬೆಲೆಯ ಔಷಧಗಳನ್ನು ಕೊಂಡುತರುವುದು ಕುಟುಂಬಸ್ಥರಿಗೂ ಆರ್ಥಿಕ ಹೊರೆಯಾಗಿದೆ.
Recommended Video
ಜಿಲ್ಲಾಧಿಕಾರಿಗಳು ಹೇಳುವುದೇನು?
"ಎಂಡೋಸಲ್ಫಾನ್ ಪೀಡಿತರಿಗಾಗಿ ಇದ್ದ ಸಂಚಾರಿ ಆರೋಗ್ಯ ಸೇವೆಯ ಒಂದು ಅಂಬ್ಯುಲೆನ್ಸ್ಗೆ ಸುಮಾರು 3 ಲಕ್ಷ ರೂಪಾಯಿಗಳಂತೆ ತಿಂಗಳಿಗೆ 12 ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗುತ್ತಿತ್ತು. ಅದನ್ನ 1 ಲಕ್ಷಕ್ಕೆ ಇಳಿಸಬೇಕು ಎನ್ನುವುದು ಸರ್ಕಾರದ ನಿರ್ದೇಶನವಾಗಿದ್ದು, ನಮ್ಮ ಜಿಲ್ಲೆಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಹಳೆಯ ಸಂಚಾರಿ ಸೇವೆಯನ್ನೇ ಪುನರಾರಂಭಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪೀಡಿತರಿಗಾಗಿ ವ್ಯವಸ್ಥೆ ಮಾಡಲಾಗುವುದು" ಎನ್ನುತ್ತಾರೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.