ಚುನಾವಣಾ ನಿಯಮ ಉಲ್ಲಂಘಿಸಿದರೆ ಶಾಸಕಿ ರೂಪಾಲಿ? ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ಸಿಗರು ಸಿಡಿಮಿಡಿ
ಕಾರವಾರ, ಅಕ್ಟೋಬರ್ 28: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ನಡೆಯುತ್ತಿರುವ ಅಂಕೋಲದ ತಹಶೀಲ್ದಾರ್ ಕಚೇರಿಯ ಮತಗಟ್ಟೆಯ 200 ಮೀಟರ್ ಅಂತರದೊಳಗೆ ಶಾಸಕಿ ರೂಪಾಲಿ ನಾಯ್ಕ ಅವರು ಪ್ರವೇಶಿಸಿದ್ದಕ್ಕೆ ಕಾಂಗ್ರೆಸ್ಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ ಕಚೇರಿಗೆ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ ಹಾಗೂ 10ಕ್ಕೂ ಅಧಿಕ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು, ಮತದಾರರ ಕ್ಷೇಮ ವಿಚಾರಿಸಿದ್ದಾರೆ. ಮತದಾರರು ಮತ ಚಲಾಯಿಸುವ ಸಲುವಾಗಿ ಬಿಸಿಲಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಕಂಡ ಶಾಸಕಿ ರೂಪಾಲಿ, ಮತದಾರರಿಗೆ ಬಿಸಿಲು ತಾಗದಂತೆ ವಾತಾವರಣ ಕಲ್ಪಿಸಲು ತಹಶೀಲ್ದಾರ ಉದಯ್ ಕುಂಭಾರ ಅವರಿಗೆ ಸೂಚಿಸಿದರು.
ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?
ಬಳಿಕ ತಹಶೀಲ್ದಾರ್ ಕಚೇರಿ ಆವರಣದಿಂದ ಹೊರ ಬಂದ ಶಾಸಕಿ ಹಾಗೂ ಸಂಗಡಿಗರು ಹೊರ ಭಾಗದಲ್ಲಿ ಗುಂಪು ಕಟ್ಟಿ ನಿಂತಿದ್ದರು. ಇದನ್ನು ಕಂಡ ತಾಲೂಕು ಪಂಚಾಯತಿ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಅಧಿಕಾರಿಗಳು ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಇಬ್ಬಗೆ ನೀತಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶಾಸಕಿ ಹಾಗೂ ಬೆಂಬಲಿಗರು ತಹಶೀಲ್ದಾರ ಕಚೇರಿಯ ಪಕ್ಕದ ಐಬಿಯ ಬಳಿ ತೆರಳಿ ಜಮಾವಣೆಗೊಂಡರು. ವಾಗ್ದಾಳಿ ಮುಂದುವರಿಸಿದ ಸುಜಾತಾ ಗಾಂವ್ಕರ್, ನಾವು (ಕಾಂಗ್ರೆಸ್) ಕಚೇರಿಯ 200 ಮೀಟರ್ ಅಂತರದಲ್ಲಿ ನಿಂತಿದ್ದರೂ ಅಧಿಕಾರಿಗಳು ನಮ್ಮನ್ನು ಇಲ್ಲಿ ನಿಲ್ಲಬೇಡಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ನಾವು ಕೂಡ ಚುನಾವಣಾ ನೀತಿ ನಿಯಮಗಳನ್ನು ಪಾಲಿಸಿ, ಅಧಿಕಾರಿಗಳ ಮಾತಿಗೆ ಸ್ಪಂದಿಸಿ ಮತಗಟ್ಟೆಯಿಂದ ಅಂತರ ಕಾಯ್ದುಕೊಂಡಿದ್ದೇವೆ. ಆದರೆ, ಬಿಜೆಪಿಯವರಿಗೆ 200 ಮೀಟರ್ ಅಂತರದೊಳಗೆ ಪ್ರವೇಶಿಸಬಹುದು. ಇದ್ಯಾವ ನ್ಯಾಯ? ನಮಗೊಂದು, ಅವರಿಗೊಂದು ನ್ಯಾಯವೇ? ಅಧಿಕಾರಿಗಳು ಈ ರೀತಿ ಭೇದ- ಭಾವ ಮಾಡಬಾರದು. ಅವರು ಜನಪ್ರತಿನಿಧಿ ಎಂದು ಅಧಿಕಾರಿಗಳು ಬಿಟ್ಟಿದ್ದರೆ, ನಾನು ಕೂಡ ಜನಪ್ರತಿನಿಧಿ ಎಂದು ಅಸಮಾಧಾನ ತೋರ್ಪಡಿಸಿದರು.
Recommended Video
ಪ್ರತಿ ಮತದಾರರಿಗೂ ಕೋವಿಡ್ ಪರೀಕ್ಷೆ (ಪಲ್ಸ್ ಆಕ್ಸಿಮೀಟರ್, ಟೆಂಪರೇಚರ್ ಪರೀಕ್ಷೆ) ನಡೆಸಿ ತಹಶೀಲ್ದಾರ ಕಚೇರಿಯ ಮತಗಟ್ಟೆಯೊಳಗೆ ಬಿಡಲಾಗುತ್ತಿದೆ. ಈಗ ಬಂದ ಬಿಜೆಪಿಯವರಲ್ಲಿ ಯಾರಿಗಾದರೂ ಅಧಿಕಾರಿಗಳು ಪರೀಕ್ಷೆ ನಡೆಸಿದ್ದಾರೆಯೇ? ಅವರಲ್ಲೇ ಯಾರಿಗಾದರೂ ಕೊರೊನಾ ಇದ್ದರೆ ಏನು ಗತಿ? ಎಂದೂ ಪ್ರಶ್ನಿಸಿದ್ದಾರೆ.