ಕೇಂದ್ರ ಸಚಿವರ ಚಿಕಿತ್ಸೆಗೂ ‘ಇಲ್ಲಾಗಲ್ಲ...’ ಎಂದರಿತು ಗೋವಾಕ್ಕೆ ರವಾನೆ
ಕಾರವಾರ, ಜನವರಿ 13: ಕೇಂದ್ರ ಸಚಿವ ಶ್ರೀಪಾದ್ ನಾಯ್ಕ ಕಾರು ಸೋಮವಾರ ರಾತ್ರಿ ಅಪಘಾತ ಸಂಭವಿಸಿ ಅವರ ಪತ್ನಿ ಹಾಗೂ ಆಪ್ತ ಕಾರ್ಯದರ್ಶಿ ಮೃತಪಟ್ಟಿದ್ದರು. ಇನ್ನು ಸಚಿವರನ್ನು ಚಿಕಿತ್ಸೆಗೆ ಅಂಕೋಲಾದಿಂದ ಗೋವಾದ ಬಾಂಬೋಲಿಯಮ್ ಆಸ್ಪತ್ರೆಗೆ ಸಾಗಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸುಸಜ್ಜಿತ ಆಸ್ಪತ್ರೆಯ ಕೂಗು ಮುನ್ನೆಲೆಗೆ ಬಂದಿದೆ.
ಕೇಂದ್ರ ಸಚಿವರಿಗೆ ಚಿಕಿತ್ಸೆ ನೀಡಲಾಗಿಲ್ಲ ಎಂದ ಮೇಲಾದರೂ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯ ಕೂಗು ಇದೀಗ ಜನಪ್ರತಿನಿಧಿಗಳಿಗೆ ಕೇಳೀತೇ? ಎಂದು ಮತ್ತೆ ಚರ್ಚೆಗಳು ಆರಂಭವಾಗಿವೆ. ಉತ್ತರ ಕನ್ನಡ ರಾಜ್ಯದಲ್ಲಿಯೇ ಭೌಗೋಳಿಕವಾಗಿ ವಿಶಾಲವಾಗಿರುವ ಜಿಲ್ಲೆಯಾಗಿದೆ. 12 ತಾಲೂಕುಗಳಿರುವ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲ.
ಶ್ರೀಪಾದ್ ನಾಯಕ ಕಾರು ಪಲ್ಟಿ: ದೇವರ ದರ್ಶನಕ್ಕೆ ಹೋದಾಗ ಆಗಿದ್ದೇನು?
ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡವರನ್ನು ಕರಾವಳಿ ಭಾಗದ ಜನರು ಗೋವಾದ ಬಾಂಬೋಲಿಯಮ್ ಅಥವಾ ಉಡುಪಿಯ ಮಣಿಪಾಲ, ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಿದರೆ, ಘಟ್ಟದ ಮೇಲಿನ ತಾಲೂಕಿನ ಜನರನ್ನು ಹುಬ್ಬಳ್ಳಿಗೆ ಸಾಗಿಸುವ ಅನಿವಾರ್ಯತೆ ಇಂದಿಗೂ ಇದೆ.
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಪಲ್ಟಿ: ಪತ್ನಿ ಸಾವು
ಇದೇ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನರು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂದಿಗೂ ಸರ್ಕಾರ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿಲ್ಲ. ಈಗಿರುವ ಆಸ್ಪತ್ರೆಯನ್ನೇ ಮೇಲ್ದರ್ಜೆಗೆ ಏರಿಸಿ, ಸೌಕರ್ಯಗಳನ್ನು ಒದಗಿಸಿ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೆ ಜಿಲ್ಲೆಯಲ್ಲಿ ನಡೆಯುವ ಅಪಘಾತದಲ್ಲಿ ಗಾಯಗೊಂಡವರಿಗೆ ಬೇರೆ ಜಿಲ್ಲೆ, ರಾಜ್ಯಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಪರಿಸ್ಥಿತಿ ಇರುವುದಿಲ್ಲ.
ಕಾರವಾರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ: ದಶಕದ ಕನಸು ನನಸು?
ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ
ಸೋಮವಾರ ಸಹ ಯಲ್ಲಾಪುರದಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ ಶ್ರೀಪಾದ್ ನಾಯ್ಕ ಹಾಗೂ ಅವರ ಪತ್ನಿ ಸೇರಿ ಆರು ಮಂದಿ ಇನೋವಾ ಕಾರಿನಲ್ಲಿ ಸಾಗುತ್ತಿರುವಾಗ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.
ಇನ್ನು ಅಪಘಾತದಲ್ಲಿ ಗಾಯಗೊಂಡ ಸಚಿವರ ಪತ್ನಿ ವಿಜಯ ನಾಯ್ಕರನ್ನು ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಎನ್ನುವವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ತಂದು ನಂತರ ಖಾಸಗಿ ನರ್ಸಿಂಗ್ ಹೋಮ್ಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇನ್ನು ಗಾಯಗೊಂಡಿದ್ದ ಸಚಿವರನ್ನು ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಯಮ್ಗೆ ಸಾಗಿಸಲಾಯಿತು.
ಸುಸಜ್ಜಿತ ಆಸ್ಪತ್ರೆಯಿಲ್ಲ
ಕೇಂದ್ರ ಸಚಿವರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ. ಇದೇ ಅಪಘಾತ ಬೇರೆ ಜಿಲ್ಲೆಯಲ್ಲಿ ಆಗಿದ್ದರೆ ಆ ಜಿಲ್ಲೆಯಲ್ಲಿರುವ ಸುಸಜ್ಜಿತ ಆಸ್ಪತ್ರೆಗಳಲ್ಲಿ ಸಚಿವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಯಾವುದೇ ಆಸ್ಪತ್ರೆ ಇಲ್ಲದಿರುವುದು ಬೇರೆ ರಾಜ್ಯದ ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಈಗಲಾದರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲೆಯಲ್ಲಿ ಶೀಘ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿ ಎನ್ನುವುದು ಜನರ ಆಗ್ರಹವಾಗಿದೆ.
ಕ್ರಿಮ್ಸ್ ಮೇಲ್ದರ್ಜೆಗೆ ಏರಿಸಲು ಸಿಎಂ ಸೂಚನೆ
ಈ ನಡುವೆ ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲು ಶಾಸಕಿ ರೂಪಾಲಿ ನಾಯ್ಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ನೀಡಿದ್ದ ಮನವಿಯಲ್ಲಿ ಸಿಎಂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಶಾಸಕರು ನೀಡಿರುವ ಪತ್ರದಲ್ಲಿ ಸೂಚನೆ ನೀಡಿದ್ದು, ಕೇಂದ್ರ ಸಚಿವರ ಕಾರು ಅಪಘಾತ ಪ್ರಕರಣವನ್ನೇ ಗಂಭೀರವಾಗಿ ತೆಗೆದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸಿಎಂ ಸೂಚನೆಯನ್ನ ಜಾರಿಗೆ ತಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಆದೇಶ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವೂ ಆಗಿದೆ.
ಭರವಸೆ ನೀಡಿದ್ದರು
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ. ಕುಮಾರಸ್ವಾಮಿ ಸಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಕ್ಕೆ ಭರವಸೆ ನೀಡಿದ್ದರು. ಇನ್ನು ಉದ್ಯಮಿ ಬಿ. ಆರ್. ಶೆಟ್ಟಿ ಖಾಸಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಇದು ಈಡೇರಿರಲಿಲ್ಲ. ಇನ್ನು ಸಿಎಂ ನೀಡಿರುವ ಸೂಚನೆ ಕೇವಲ ಸೂಚನೆಯಾಗದೇ ಶೀಘ್ರದಲ್ಲಿ ಆದೇಶವಾಗಿ ಹೊರಬಂದು ಸುಸಜ್ಜಿತ ಆಸ್ಪತ್ರೆಯಾಗಿ ಜಿಲ್ಲೆಯ ಜನರ ಸದುಪಯೋಗಕ್ಕೆ ಬರುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.