ಮಲ್ಪೆಯಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ
ಕಾರವಾರ, ಮೇ ೦3: ಮಹಾರಾಷ್ಟ್ರದ ಸಮುದ್ರತೀರದಲ್ಲಿ ಮುಳುಗಿರಬಹುದಾದ ಉಡುಪಿಯ ಮಲ್ಪೆ ಬಂದರಿನ ಮೀನುಗಾರಿಕಾ ಬೋಟು 'ಸುವರ್ಣ ತ್ರಿಭುಜ'ವನ್ನು ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಐಎನ್ಎಸ್ ನಿರೀಕ್ಷಕಕ್ಕೆ ಬೋಟಿನ ಅವಶೇಷಗಳು ಪತ್ತೆಯಾಗಿವೆ.
ಈ ಬಗ್ಗೆ ಭಾರತೀಯ ನೌಕಾಸೇನೆಯ ವಕ್ತಾರರು ಟ್ವೀಟ್ ಮಾಡಿದ್ದು, ಇದು ಮೀನುಗಾರರಲ್ಲಿ ಇನ್ನಷ್ಟು ಆತಂಕವುಂಟು ಮಾಡಿದೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ, ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐದು ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟು, ಡಿ.15ರಂದು ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪ ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು.
ಪೊಲೀಸ್, ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆಯಿಂದ ಸಾಕಷ್ಟು ಶೋಧನೆ ನಡೆದು, ಕೊನೆಗೆ ಸುವರ್ಣ ತ್ರಿಭುಜ ಬೋಟು ಯಾವುದೋ ಅವಘಡಕ್ಕೆ ಈಡಾಗಿ ಸಮುದ್ರದಲ್ಲಿ ಮುಳುಗಿರಬೇಕು ಎಂಬ ಅಭಿಪ್ರಾಯಕ್ಕೆ ನೌಕಾಸೇನೆ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಹಾರಾಷ್ಟ್ರದ ಮಾಲ್ವಾನ್ ಬಂದರಿನ ದಡಕ್ಕೆ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಬುಟ್ಟಿಗಳು ದೊರೆತಿದ್ದವು.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆ
ಐಎನ್ಎಸ್ ನಿರೀಕ್ಷಕ್ ಎಂಬ ಯುದ್ಧನೌಕೆಯ ಸಹಾಯದಿಂದ ಸೋನಾರ್ ತಂತ್ರಜ್ಞಾನ ಬಳಸಿ ಸಿಂಧುದುರ್ಗಾ ತೀರದಲ್ಲಿ ಡಿಸೆಂಬರ್ ತಿಂಗಳಿನಿಂದ ಸಾಗರತಳದಲ್ಲಿ ಶೋಧನೆ ನಡೆಸಲಾಗುತ್ತಿತ್ತು.
ಬೋಟಿನ ಕೆಲ ಭಗ್ನಾವಶೇಷಗಳು ಪತ್ತೆ
ಸುಮಾರು ತಿಂಗಳ ಹಿಂದೆ ಐಎನ್ಎಸ್ ನಿರೀಕ್ಷಕ್ ಯುದ್ಧನೌಕೆಯ ಸೋನಾರ್ ತಂತ್ರಜ್ಞಾನಕ್ಕೆ ಸಮುದ್ರದಾಳದಲ್ಲಿ ಬೋಟಿನ ಕೆಲ ಭಗ್ನಾವಶೇಷಗಳು ಪತ್ತೆಯಾಗಿದ್ದವು. ಸಾಗರದಾಳದಲ್ಲಿ ಸುಮಾರು 60-70 ಮೀಟರ್ ಆಳದಲ್ಲಿ ಬೋಟ್ ನ ವಿವಿಧ ಬಗೆಯ ಚಿಕ್ಕ- ದೊಡ್ಡ ಅವಶೇಷಗಳನ್ನು ಪತ್ತೆ ಮಾಡಿತ್ತು. ಅದರಲ್ಲಿ ಬೋಟಿನ ಭಗ್ನ ಅವಶೇಷಗಳೂ ಪತ್ತೆ ಆಗಿದ್ದವು. ಅದು ಸರಿಸುಮಾರು 75-78 ಅಡಿ ಉದ್ದವಿರುವುದರಿಂದ ಮೀನುಗಾರಿಕಾ ಬೋಟು ಇರಬಹುದು ಎಂಬ ನಿರ್ಧಾರಕ್ಕೆ ತಜ್ಞರು ಈ ಹಿಂದೆಯೇ ಬಂದಿದ್ದರು.
ದೃಢೀಕರಿಸಿದ ನೌಕಾಸೇನೆಯ ಮುಳುಗು ತಜ್ಞರು
ಇನ್ನು, ಈ ಬಗ್ಗೆ ಟ್ವೀಟ್ ಮಾಡಿರುವ ನೌಕಾಸೇನೆಯ ವಕ್ತಾರರು, ಸಮುದ್ರದಾಳದಲ್ಲಿ ಐಎನ್ಎಸ್ ನಿರೀಕ್ಷಕ್ ಗೆ ದೊರೆತಿರುವ ಅವಶೇಷಗಳನ್ನು ನೌಕಾಸೇನೆಯ ಮುಳುಗು ತಜ್ಞರು ದೃಢೀಕರಿಸಿದ್ದಾರೆ. ಮಹಾರಾಷ್ಟ್ರದ ಮಾಲ್ವಾನ್ ಸಮುದ್ರದಿಂದ 33 ಕಿ.ಮೀ. ದೂರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಈ ತಜ್ಞರು ಮುಳುಗಿ ದೃಢೀಕರಿಸಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಮೀನುಗಾರರಾದ ಚಂದ್ರಶೇಖರ್ ಮತ್ತು ದಾಮೋದರ್ ಅವರ ಮನೆಯವರನ್ನು ನೌಕಾಪಡೆ ಅಧಿಕಾರಿಗಳು ಇತ್ತೀಚೆಗೆ ತಮ್ಮ ಬೋಟ್ನಲ್ಲಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಇದರಲ್ಲಿ ಅವರೊಂದಿಗೆ ಉಡುಪಿಯ ಶಾಸಕ ಕೆ.ರಘುಪತಿ ಭಟ್, ಮೀನುಗಾರ ಮುಖಂಡರು ಹಾಗೂ ಇತರ ಮೀನುಗಾರರು ತೆರಳಿದ್ದರು ಎನ್ನಲಾಗಿದೆ.
ಮೀನುಗಾರರ ಪತ್ತೆಗೆ ದೈವದ ಮೊರೆಹೋದ ಮಲ್ಪೆ ಮೀನುಗಾರರು
ಮೀನುಗಾರರ ಕುಟುಂಬದವರಿಂದ ಮನವಿ
ಮತದಾನ ಮುಗಿದ ಕೂಡಲೇ ಕಾಣೆಯಾದ ಮಲ್ಪೆಯ ಮೀನುಗಾರರ ಕುಟುಂಬದವರ ಉಪಸ್ಥಿತಿಯಲ್ಲಿ ಶೋಧನಾ ಕಾರ್ಯ ನಡೆಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಈ ಹಿಂದೆ ಭರವಸೆ ನೀಡಿದ್ದರು.ಇತ್ತೀಚೆಗೆ ಮಲ್ಪೆ ಮೀನುಗಾರರ ಮನೆಗೆ ಅವರು ಭೇಟಿ ನೀಡಿದ್ದಾಗ, ನಮ್ಮನ್ನೂ ಹುಡುಕಾಟ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಮನೆಯವರು ಪಟ್ಟು ಹಿಡಿದಿದ್ದರು. ಮೀನುಗಾರರು ನಾಪತ್ತೆಯಾದ ಸ್ಥಳವನ್ನು ನಾವು ಕಾಣಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಭಾರತೀಯ ನೌಕಾಪಡೆ ಅಧಿಕಾರಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.
ಸತ್ಯಾಂಶ ವಿವರಿಸಿದ ಭಾರತೀಯ ನೌಕಪಡೆ
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ಸಂಬಂಧಿಸಿ ಸತ್ಯಾಂಶವನ್ನು ಭಾರತೀಯ ನೌಕಪಡೆ ಘಟನಾ ಸ್ಥಳದಲ್ಲಿ ಕುಟುಂಬಸ್ಥರಿಗೆ ವಿವರಿಸಿದೆ ಎನ್ನಲಾಗಿದೆ. ನಾಪತ್ತೆ ಆದಾಗಿನಿಂದ ಇಲ್ಲಿವರೆಗೆ ನಡೆದ ಕಾರ್ಯಾಚರಣೆ, ನಾಪತ್ತೆಗೆ ಪ್ರಮುಖ ಕಾರಣಗಳನ್ನು ಕುಟುಂಬದವರಿಗೆ ಹೇಳುವ ಮೂಲಕ ಪ್ರಕರಣದಲ್ಲಿನ ನಿಗೂಢತೆಯನ್ನು ಸಾರ್ವಜನಿಕಗೊಳಿಸಲು ಪ್ರಯತ್ನ ನಡೆದಿರುವ ಬಗ್ಗೆಯೂ ಕೆಲವು ಮೂಲಗಳಿಂದ ತಿಳಿದು ಬಂದಿದೆ.