ಟಿಪ್ಪರ್-ಬೊಲೆರೋ-ಲಾರಿ ನಡುವೆ ಅಪಘಾತ: ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇಬ್ಬರು ಸಾವು, ಆರು ಜನರ ಸ್ಥಿತಿ ಗಂಭೀರ
ಕಾರವಾರ, ಮಾರ್ಚ್ 23: ಬೊಲೆರೋ ಕಾರು ಹಾಗೂ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿಯ ರಾಜೇಶ್ವರಿ ಪರಡ್ಡಿ (35) ಹಾಗೂ ಚಿಕ್ಕಮ್ಮ ಪಾಟೀಲ (28) ಮೃತ ಮಹಿಳೆಯರಾಗಿದ್ದು, ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶ್ರುತಿ, ಮಕ್ಕಳಾದ ಆಕಾಶ್ ಹಾಗೂ ಅಪೇಕ್ಷಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಹೊಸ ಬೊಲೆರೊ ಕಾರು ಖರೀದಿಸಿದ್ದ ಕಾರಣ ಬಾಗಲಕೋಟೆ ಮೂಲದ ಒಂದೇ ಕುಟುಂಬದ ಎಂಟು ಮಂದಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ತಿರುವಿನಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದವರ ಬೊಲೆರೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮುಂದೆ ದೂಕಿದೆ. ಈ ವೇಳೆ ಎದುರು ಬರುತ್ತಿದ್ದ ಟಿಪ್ಪರ್ ಗೆ ಬೊಲೆರೊ ಡಿಕ್ಕಿಯಾಗಿದೆ. ಟಿಪ್ಪರ್ ಹಾಗೂ ಲಾರಿಯ ನಡುವೆ ಸಿಕ್ಕಿ ಬೊಲೆರೊ ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಇನ್ನುಳಿದ ಏಳು ಮಂದಿಯನ್ನು ಬೊಲೆರೊದಿಂದ ಹೊರ ತೆಗೆದ ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ತಾಲೂಕು ಆಸ್ಪತ್ರೆಗೆ ಸಾಗಿಸಿದರಾದರೂ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಗೆ ಸದ್ಯ ಚಿಕಿತ್ಸೆ ಮುಂದುವರಿದಿದೆ.
Recommended Video
ಅಪಘಾತದಿಂದ ಘಟ್ಟದಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಸ್ಥಳಕ್ಕೆ ಸಿಪಿಐ ಸುರೇಶ್ ಯಳ್ಳೂರ್ ಹಾಗೂ ಪಿಎಸ್ಐ ಮಂಜುನಾಥ್ ಗೌಡರ ತೆರಳಿ ಪರಿಶೀಲನೆ ನಡೆಸಿ, ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.