ಎರಡನೇ ಬಾರಿ ಎಸಿಬಿ ಬಲೆಗೆ ಬಿದ್ದ ಕಡವಾಡ ಪಿಡಿಒ
ಕಾರವಾರ, ಮಾರ್ಚ್ 18: ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಕಡವಾಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಜಿ ಹೆಗಡೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗ್ರಾಮದ ಸೌಮ್ಯ ಕಲ್ಗುಟಕರ್ ಎನ್ನುವ ಮಹಿಳೆಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಹಣ ಮಂಜೂರಾಗಿತ್ತು. ಇನ್ನು ಮಂಜೂರಾದ ಹಣವನ್ನು ಬಿಡುಗೊಡೆ ಮಾಡಿಕೊಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೆ ನಿರ್ಮಾಣ ಮಾಡುವ ಸ್ಥಳದಲ್ಲಿ ತೆರಳಿ ಫೋಟೊ ಹೊಡೆದು ಇಲಾಖೆಗೆ ಅಪ್ ಲೋಡ್ ಮಾಡಬೇಕಾಗಿತ್ತು.
ರೈತನಿಂದ ಲಂಚಕ್ಕೆ ಬೇಡಿಕೆ: ಮಾಗಡಿ ತಹಶೀಲ್ದಾರ್ ಎಸಿಬಿ ಬಲೆಗೆ
ಮಹಿಳೆಯ ಮನೆ ನಿರ್ಮಾಣದ ಫೋಟೊ ಅಪ್ ಲೋಡ್ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಜಿ ಹೆಗಡೆ ಐದು ಸಾವಿರ ಹಣ ಬೇಡಿಕೆ ಇಟ್ಟಿದ್ದು ಈ ಬಗ್ಗೆ ಮಹಿಳೆ ಸೌಮ್ಯ ಕಲ್ಗುಟಕರ್ ಎಸಿಬಿಗೆ ದೂರು ನೀಡಿದ್ದರು. ಮಂಗಳವಾರ ಮೂರು ಸಾವಿರ ಹಣ ಪಡೆಯುವಾಗ ಎಸಿಬಿ ಡಿಎಸ್.ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಎರಡನೇ ಬಾರಿ ಬಲೆಗೆ: ಎಸಿಬಿ ಬಲೆಗೆ ಬಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಜಿ.ಹೆಗಡೆ ಎರಡನೇ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಹಿಂದೆ ಹೊನ್ನಾವರದಲ್ಲಿ ಕೆಲಸ ನಿರ್ವಹಿಸುವಾಗ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗೆ ಹಣ ಮಂಜೂರು ಮಾಡಲು 15 ಸಾವಿರ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ರಾಘವೇಂದ್ರ ಹೆಗಡೆಯೆ ಒಂದು ವರ್ಷ ಜೈಲು ಶಿಕ್ಷೆಯನ್ನು ಸಹ ನೀಡಿತ್ತು. ಜಾಮೀನಿನ ಮೇಲೆ ಹೊರಗೆ ಬಂದಿದ್ದ ಆರೋಪಿ ಕಡವಾಡ ಪಂಚಾಯತ್ ಅಭಿವೃದ್ಧಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಇದೀಗ ಮತ್ತೆ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.