ಗ್ರಾಮ ಪಂಚಾಯತಿಯ ಸದಸ್ಯರ ಅಪಹರಣ: ಪತ್ತೆಯಾದವರು ಹೇಳಿದ್ದೇನು?
ಕಾರವಾರ, ಫೆಬ್ರವರಿ 11: ಹೊನ್ನಾವರ ತಾಲೂಕಿನ ಖರ್ವಾ ಪಂಚಾಯತಿಯ ಅಧ್ಯಕ್ಷ- ಉಪಾಧ್ಯಕ್ಷ ಗಾದಿಗೇರಲು ಅಪಹರಣದಂಥ ಪ್ರಹಸನ ನಡೆದಿದ್ದು, ಬುಧವಾರ ನಡೆಯಬೇಕಿದ್ದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಈ ಪ್ರಕರಣದಿಂದಾಗಿ ಮುಂದೂಡಿಕೆಯಾಗಿ ಗುರುವಾರ ಆಯ್ಕೆ ನಡೆದಿದೆ.
ಆದರೆ, ಅಪಹರಣಕ್ಕೊಳಗಾವದರಲ್ಲಿ ಓರ್ವರಾದ ಕಾಂಗ್ರೆಸ್ ಬೆಂಬಲಿತ ಸದಸ್ಯ ಇಬ್ರಾಹಿಂ ಇಸೂಬ್ ಸಾಬ್ ತಮ್ಮನ್ನು ಹೇಗೆ, ಯಾರು ಅಪಹರಣ ಮಾಡಿದ್ದರೆಂಬುದನ್ನು ಮಾಧ್ಯಮದವರೆದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರ: ಸದಸ್ಯರ ಮೇಲೆ ಹಲ್ಲೆ, ಪ್ರತಿಭಟನೆ
ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ಬಳಿ ಕಾರನ್ನು ನಿಲ್ಲಿಸಿ ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲಾಗಿದೆ ಎಂದಿರುವ ಇಬ್ರಾಹಿಂ, ಆರಂಭದಿಂದಲೂ ನನಗೆ 2 ಲಕ್ಷ ರೂ. ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು.
ಮೂವರು ಸದಸ್ಯರನ್ನು ಅಪಹರಣ ಮಾಡುವ ಉದ್ದೇಶ ಅವರಿಗಿತ್ತು. ಆದರೆ, ಈರ್ವರನ್ನು ಅಪಹರಣ ಮಾಡಿದ್ದಾರೆ. ಮತ್ತೋರ್ವ ಅವಿವಾಹಿತ ದಲಿತ ಮಹಿಳೆಯು ನಾಪತ್ತೆಯಾಗಿದ್ದು, ಈವರೆಗೆ ಆಕೆಯ ಪತ್ತೆ ಇಲ್ಲದೇ ಅವರ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ತಡರಾತ್ರಿ 11 ಗಂಟೆಯವರೆಗೆ ಸಿದ್ದಾಪುರದ ಬಳಿ ಇಟ್ಟುಕೊಂಡು, ನಂತರ ಅಘನಾಶಿನಿ ರೆಸಾರ್ಟ್ ಗೆ ನನ್ನನ್ನು ಕರೆತಂದರು. ಈರ್ವರನ್ನು ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಿದ್ದರಿಂದ ಮತ್ತೋರ್ವರ ಮಾಹಿತಿ ಇಲ್ಲ. ನನ್ನ ಕರೆದೊಯ್ಯಲು ಅಶೋಕ ಪರಮೇಶ್ವರ ಭಟ್ಟ, ಅಜಿತ ತಿಮ್ಮಪ್ಪ ನಾಯ್ಕ, ರಮೇಶ ಮಾದೇವ ನಾಯ್ಕ, ಕಾಂತಪ್ಪ ರಾಘವೇಂದ್ರ ಶಾನಭಾಗ ಹಾಗೂ ಇತರರು ಇದ್ದರು.
Recommended Video
ಬುಧವಾರ ರಾತ್ರಿ 8 ಗಂಟೆಯವರೆಗೆ ಇದ್ದ ಅಶೋಕ ಭಟ್, ನಂತರ ಪತ್ತೆ ಇಲ್ಲ. ಗುರುವಾರ ವಾಪಸ್ಸು ಬಿಡಲು ಆತನೇ ಬಂದಿದ್ದ. ನನ್ನ ಮೊಬೈಲ್ ಕಸಿದುಕೊಂಡಿದ್ದ ಅಪಹರಣಕಾರರು, ತಾವು ಮೊಬೈಲ್ ಬಳಸುತ್ತಿದ್ದರು. ಆದರೆ ಪೊಲೀಸರು ಯಾವ ರೀತಿ ತನಿಖೆ ಮಾಡಿದರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ನಾನು ಠಾಣೆಗೆ ಹೋಗಿ ಎಲ್ಲ ವಿಷಯವನ್ನು ಹೇಳುತ್ತೇನೆ. ನನ್ನ ಮತದಾನದ ಹಕ್ಕು ಕಸಿದವರಿಗೆ, ನನ್ನ ಒಪ್ಪಿಗೆ ಇಲ್ಲದೇ ಒತ್ತೆಯಾಳುವಾಗಿ ಇಟ್ಟುಕೊಂಡಿದ್ದಕ್ಕೆ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.