ಭಟ್ಕಳಿಗರ ನಿದ್ದೆಗೆಡಿಸಿದ ಆರೋಗ್ಯ ಸೇತು; ಕಿಲೋ ಮೀಟರ್ ಗೊಬ್ಬ ಸೋಂಕಿತ!
ಭಟ್ಕಳ, ಮೇ 06: ಕೊರೊನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ಎಲ್ಲೆಲ್ಲಿ ಕೊರೊನಾ ವೈರಸ್ ಪ್ರಕರಣಗಳು ಇವೆ ಹೀಗೆ ಕೊರೊನಾ ವೈರಸ್ ಕುರಿತು ಹಲವು ಮಹತ್ವದ ಮಾಹಿತಿಯನ್ನು ಒದಗಿಸುವ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಲು ಪ್ರಧಾನಿ ಮೋದಿಯವರು ಮನವಿ ಮಾಡಿದ್ದಾರೆ. ಆದರೆ ಇದೇ ಆಪ್ ಇದೀಗ ಪಟ್ಟಣದ ಜನತೆಯ ನಿದ್ದೆಗೆಡಿಸಿದೆ.
ಪಟ್ಟಣದಲ್ಲಿ ಸೋಮವಾರ ಒಂದು ಹಾಗೂ ಮಂಗಳವಾರ ಮತ್ತೆ ಮೂರು, ಒಟ್ಟು ನಾಲ್ಕು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸೇತು ಆಪ್ ನಲ್ಲಿ ಮಾಹಿತಿ ಅಪ್ ಲೋಡ್ ಆಗಿದ್ದು, ಇದು ಆಪ್ ಬಳಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ.
ಯಾಕಿದು ಹೀಗೆ?
ಆರೋಗ್ಯ ಸೇತು ಆಪ್ ಬ್ಲ್ಯೂಟೂತ್ ಹಾಗೂ ಜಿಪಿಎಸ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಮೊದಲ ಬಾರಿಗೆ ಆಪ್ ಡೌನ್ ಲೋಡ್ ಮಾಡುವ ಬಳಕೆದಾರ, ಅಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಈ ವೇಳೆ ಕೆಲವು ವೈಯಕ್ತಿಕ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕಿದೆ. ಆಪ್ ನ ಮೇಲ್ಭಾಗದಲ್ಲಿ ‘ಡೇಂಜರ್' (ಕೆಂಪು ಬಣ್ಣದಲ್ಲಿ ‘ಐ' ಎಂದಿರುವುದು) ಚಿಹ್ನೆಯೊಂದನ್ನು ನೀಡಲಾಗಿದ್ದು, ಇದನ್ನು ಕ್ಲಿಕ್ ಮಾಡಿದಲ್ಲಿ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ ಹಾಗೂ ಕೋವಿಡ್- 19 ಸೋಂಕು ದೃಢಪಟ್ಟಿದೆ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದನ್ನು ಕ್ಲಿಕ್ ಮಾಡಿದಲ್ಲಿ ಆ ವ್ಯಕ್ತಿಗೆ ಸೋಂಕು ಇದೆಯೆಂದು ಆಪ್ ಅರಿತುಕೊಳ್ಳುತ್ತದೆ.
ಆರೋಗ್ಯ ಸೇತು app ಗೊಂದಲ; ಉಡುಪಿಯಲ್ಲಿ ಪಾಸಿಟಿವ್ ವದಂತಿ!
ಆತಂಕಕ್ಕೆ ಕಾರಣವಾಗುತ್ತಿರುವ ಆಪ್ ಮಾಹಿತಿ
ಜತೆಗೆ, ಆ ವ್ಯಕ್ತಿ ಆಪ್ ಇರುವ ಮೊಬೈಲ್ ಅನ್ನು ಇಟ್ಟುಕೊಂಡು ಎಲ್ಲೇ ಹೋದರೂ ಅದು ಆತನ ಸಮೀಪದಲ್ಲಿ ಆಪ್ ಬಳಸುತ್ತಿರುವವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಹೀಗೆ ಪಟ್ಟಣದಲ್ಲಿ ಆಪ್ ಬಳಸಲು ಬಾರದ ಅಥವಾ ಉದ್ದೇಶಿತಪೂರ್ವಕವಾಗಿ, ಸುರಕ್ಷಿತವಾಗಿದ್ದರೂ ಈ ‘ಡೇಂಜರ್' ಆಯ್ಕೆಯಲ್ಲಿ ನೀಡಲಾದ ‘ಕೋವಿಡ್- 19 ಸೋಂಕು ದೃಢಪಟ್ಟಿದೆ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ದಾರೆ.
ಇದರಿಂದಾಗಿ ಸೋಮವಾರದಿಂದ ಪಟ್ಟಣದ ಕೇಂದ್ರ ಭಾಗದಿಂದ 2 ಕಿ.ಮೀ. ಹಾಗೂ 5 ಕಿ.ಮೀ. ದೂರದಲ್ಲಿ ತಲಾ ಒಬ್ಬ ಹಾಗೂ 10 ಕಿ.ಮೀ. ದೂರದಲ್ಲಿ ಇಬ್ಬರು ಸೋಂಕಿತರು ಇರುವುದಾಗಿ ಆಪ್ ಸೂಚನೆ ನೀಡುತ್ತಿದೆ. ಜತೆಗೆ, 14 ಮಂದಿ ಅನಾರೋಗ್ಯಕ್ಕೆ ತುತ್ತಾಗಿರುವುದಾಗಿಯೂ ಮಾಹಿತಿ ನೀಡುತ್ತಿದೆ. ಅಲ್ಲದೇ, ಒಬ್ಬರ ಮೊಬೈಲ್ ನಲ್ಲಿ ಒಂದು, ಇನ್ನೊಬ್ಬರ ಮೊಬೈಲ್ ನಲ್ಲಿ ಇನ್ನೊಂದು ತೆರನಾದ ಮಾಹಿತಿಯನ್ನೇ ಆಪ್ ತೋರಿಸುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಕೇಂದ್ರದ ತಂಡದಿಂದ ಆಪ್ ನಿರ್ವಹಣೆ
ಕೇಂದ್ರದ ತಂಡದಿಂದಲೇ ಈ ಆಪ್ ನ ನಿರ್ವಹಣೆ ನಡೆಯುತ್ತಿದೆ. ಜಿಲ್ಲಾಡಳಿತದ ಯಾವುದೇ ನಿಯಂತ್ರಣ ಇದರ ಮೇಲಿಲ್ಲ. ಆದರೆ, ಆಪ್ ನಲ್ಲಿ ಉಂಟಾಗುತ್ತಿರುವ ದೋಷಗಳ ಬಗ್ಗೆ ನಿರ್ವಹಣಾ ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು. ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯತಿ ಸಿಇಒ ಆಪ್ ನ ದೋಷದ ಬಗ್ಗೆ ಉಪವಿಭಾಗಾಧಿಕಾರಿಯೊಂದಿಗೆ ಚರ್ಚೆ ನಡೆಸಲಾಗಿದೆ. ನಿಷ್ಕಾಳಜಿಯಿಂದ ಯಾರೋ ಮಾಹಿತಿಯನ್ನು ಅಪ್ ಲೋಡ್ ಮಾಡಿದಂತಿದ್ದು, ಅವರ ಮೊಬೈಲ್ ಸಂಖ್ಯೆ ಪತ್ತೆಯಾದಲ್ಲಿ ಅದನ್ನಾಧರಿಸಿ ಅವರ ಆರೋಗ್ಯ ಪರಿಸ್ಥಿತಿಯನ್ನು ತಪಾಸಣೆ ಮಾಡಲು ಸಾಧ್ಯವಿದೆ ಎಂದು ತಹಶೀಲ್ದಾರ್ ಎಸ್.ರವಿಚಂದ್ರ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕು ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ?
ಗುಣಮುಖರಾದವರಿಂದ ಸಿಟಿ ರೌಂಡ್ಸ್
ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು, ಸರ್ಕಾರಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ನಲ್ಲಿದ್ದ ಇಬ್ಬರು ಪಟ್ಟಣದ ವಿವಿಧೆಡೆ ಸಂಚರಿಸಿದ್ದಾರೆ ಎನ್ನಲಾಗಿದೆ. ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾದವರ ಮೊಬೈಲ್ ಮೂಲಕ ಜಿಪಿಎಸ್ ಟ್ರ್ಯಾಕಿಂಗ್ ಮಾಡಲಾಗುತ್ತದೆ. ಹೀಗಾಗಿ ಆತ ಎಲ್ಲೇ ಸಂಚರಿಸಿದರೂ ತಕ್ಷಣ ಮಾಹಿತಿ ಅಧಿಕಾರಿಗಳಿಗೆ ತಲುಪುತ್ತದೆ. ಹೀಗಿರುವಾಗ ಇಬ್ಬರು ಗುಣಮುಖರಾದವರು ವಿವಿಧೆಡೆ ಸಂಚರಿಸಿದ್ದು, ಈ ಮಾಹಿತಿ ಅಧಿಕಾರಿಗಳಿಗೆ ಹೋಗಿದೆ ಎನ್ನಲಾಗಿದೆ. ‘ಗುಣಮುಖರಾದ ರೋಗಿಗಳು ಕ್ವಾರಂಟೈನ್ ಉಲ್ಲಂಘಿಸಿ ಹೊರಗೆ ಹೋಗಿರುವ ಬಗ್ಗೆ ಮಾಹಿತಿ ಬಂದಿದೆ. ಕ್ವಾರಂಟೈನ್ ಉಲ್ಲಂಘಿಸದಂತೆ ಅವರಿಗೆ ಎಚ್ಚರಿಕೆ ನೀಡಲಾಗಿದೆ' ಎಂದು ತಹಶೀಲ್ದಾರ್ ತಿಳಿಸಿದರು.