ಕೊರೊನಾದಿಂದ ಹಣಕಾಸಿನ ಸಮಸ್ಯೆ: ಮೋಜಿಗಾಗಿ ಕಳ್ಳತನಕ್ಕಿಳಿದ ಯುವಕರ ಬಂಧನ
ಕಾರವಾರ, ಜೂನ್ 28: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ ಮತ್ತು ಕಾರವಾರ ತಾಲ್ಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ, ಕಳ್ಳತನ ಮಾಡುತ್ತಿದ್ದ 7 ಯುವಕರನ್ನು ಹಾಗೂ ಕಳುವಿನ ಮಾಲನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನೂ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಗೋಕರ್ಣ ಪೊಲೀಸರು, ಗೋಕರ್ಣ ಠಾಣೆಯ 5, ಅಂಕೋಲಾ ಠಾಣೆ ವ್ಯಾಪ್ತಿಯ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟೂ 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಕೊನೆಗೂ ಬಂಧಿಸಿದ್ದಾರೆ.
ಬಂಧಿತ ಆರೋಪಿತರಿಂದ 351 ಗ್ರಾಂ ಬಂಗಾರದ ಆಭರಣಗಳು, 1 ಕೆ.ಜಿ ಬೆಳ್ಳಿಯ ಆಭರಣ, 5 ಗ್ಯಾಸ್ ಸಿಲಿಂಡರ್ಗಳು, 1 ಏರ್ಗನ್, 3 ಮೋಟಾರ್ ಸೈಕಲ್ ಹಾಗೂ 8 ಮೊಬೈಲ್ ಪೋನ್ಗಳೂ ಸೇರಿದಂತೆ ಒಟ್ಟೂ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಬೊಬ್ರುವಾಡದ ಪ್ರಶಾಂತ್ ನಾಯ್ಕ, ತೆಂಕಣಕೇರಿಯ ಹರ್ಷಾ ನಾಯ್ಕ, ಶಿರಕುಳಿಯ ಗಣೇಶ ನಾಯ್ಕ, ಕೇಣಿಯ ರಾಹುಲ್ ಬಂಟ್, ಶಿರಸಿ ಕಸ್ತೂರಬಾ ನಗರದ ಶ್ರೀಕಾಂತ್ ದೇವಾಡಿಗ, ನಿಹಾಲ್ ದೇವಳಿ, ದೊಡ್ನಳ್ಳಿ ರಸ್ತೆಯ ಸಂದೀಪ ಮರಾಠೆ ಹಾಗೂ ಬನವಾಸಿಯ ಅಶೋಕ ರಾಯ್ಕರ್ ಬಂಧಿತರು.
ಐಟಿಐ ಹುಡುಗರು, ಮೋಜಿಗಾಗಿ ಕದ್ದರು
ಬಂಧಿತರ ಪೈಕಿ ನಾಲ್ವರು ಐಟಿಐ ಪೂರ್ಣಗೊಳಿಸಿದವರು. ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೊನಾದಿಂದಾಗಿ ಹಾಗೂ ಲಾಕ್ಡೌನ್ ವಿಧಿಸಿದ್ದ ಕಾರಣ ಆರ್ಥಿಕವಾಗಿ ಸಮಸ್ಯೆ ಉಂಟಾಗಿದೆ. ವೈಯಕ್ತಿಕ ಮೋಜು- ಮಸ್ತಿಗೆ ಹಣದ ಕೊರತೆಯಾದಾಗ ಎಲ್ಲರೂ ಸೇರಿಕೊಂಡು ಮೊದಲು ಶಾಲೆ, ಅಂಗನವಾಡಿಗಳ ಸಿಲಿಂಡರ್ಗಳನ್ನು ಕದ್ದು ಮಾರಲು ಶುರು ಮಾಡಿದ್ದರು.
ಹೀಗೆ ಕೆಲವು ತಿಂಗಳು ಕಳ್ಳತನ ಮುಂದುವರಿಸಿದ ಈ ತಂಡ, ಒಂದು ದಿನ ಮನೆಯೊಂದರಲ್ಲಿ ಸಿಲಿಂಡರ್ ಕಳವಿಗೆ ತೆರಳಿದಾಗ ಚಿನ್ನಾಭರಣಗಳು ಸಿಕ್ಕಿದ್ದವು. ಸಿಲಿಂಡರ್ ಕದ್ದು ಸಣ್ಣಪುಟ್ಟ ಕಳವು ಪ್ರಕರಣಗಳಲ್ಲಿ ಅದಾಗಲೇ ಪೊಲೀಸರ ಲಿಸ್ಟ್ನಲ್ಲಿ ಹೆಸರು ನಮೂದಿಸಿಕೊಂಡಿದ್ದ ಈ ತಂಡ, ಅಂದಿನಿಂದ ಚಿನ್ನಾಭರಣ, ನಗದು, ಬೈಕ್ ಕಳವಿಗೂ ಮುಂದಾಯಿತು.
ಕದ್ದ ಮಾಲುಗಳನ್ನು ಓರ್ವ ವ್ಯಕ್ತಿಗೆ ಮಾರಿ, ಬಂದ ಹಣದಿಂದ ಲಾಕ್ಡೌನ್ ಸಂದರ್ಭದಲ್ಲೂ ಪಾರ್ಟಿ ಸೇರಿದಂತೆ ಮೋಜು- ಮಸ್ತಿಯ ಜೀವನ ಕಳೆಯುತ್ತಿದ್ದರು. ಆದರೆ ಅದೃಷ್ಟ ಕೆಟ್ಟು ಇದೀಗ ಎಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.
Recommended Video
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಶಿವಪ್ರಕಾಶ ಆರ್.ನಾಯ್ಕ, ಗೋಕರ್ಣ ಪಿಎಸ್ಐ ನವೀನ್ ಎಸ್.ನಾಯ್ಕ, ಅಂಕೋಲಾ ಪಿಎಸ್ಐ ಪ್ರವೀಣಕುಮಾರ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.