ತುಂಬಿದ ಕದ್ರಾ ಜಲಾಶಯ; ಕಾಳಿ ನದಿಗೆ 58,000 ಕ್ಯೂಸೆಕ್ ನೀರು
ಕಾರವಾರ, ಆಗಸ್ಟ್ 06: ತಾಲ್ಲೂಕಿನ ಕದ್ರಾ ಜಲಾಶಯವು ಭರ್ತಿಯಾಗುತ್ತಿರುವ ಕಾರಣ ಬುಧವಾರ ಹಾಗೂ ಗುರುವಾರ ಜಲಾಶಯದ ಕ್ರೆಸ್ಟ್ ಗೇಟ್ಗಳನ್ನು ತೆರೆದು ಕಾಳಿ ನದಿಗೆ ನೀರು ಹರಿಸಲಾಯಿತು.
Recommended Video
ಕಾಳಿ ನದಿ ಪಾತ್ರದಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯವು ಬುಧವಾರ ಗರಿಷ್ಠ ಮಟ್ಟ ತಲುಪಿತು. ಹೀಗಾಗಿ ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಬುಧವಾರ ಜಲಾಶಯದ ಆರು ಕ್ರೆಸ್ಟ್ಗೇಟ್ಗಳನ್ನು ತೆರೆದು 40 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿತ್ತು. ಆದರೆ, ಗುರುವಾರ ಕೂಡ ಹೆಚ್ಚಿನ ಒಳಹರಿವು ಇದ್ದ ಕಾರಣ ಬೆಳಿಗ್ಗೆ ಸುಮಾರು 58 ಸಾವಿರ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಮತ್ತೆ ಹರಿಸಲಾಗಿದೆ. ಇದರಿಂದಾಗಿ ಕಾಳಿ ನದಿ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ; ಆ.8ರವರೆಗೂ ರೆಡ್ ಅಲರ್ಟ್
34.50 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈ ವರ್ಷ 32.50 ಮೀಟರ್ ನೀರು ಸಂಗ್ರಹಿಸಲು ಜಿಲ್ಲಾಡಳಿತ ಮತ್ತು ಕರ್ನಾಟಕ ವಿದ್ಯುತ್ ನಿಗಮದ ಜಂಟಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಜಲಾಶಯವು ಭರ್ತಿಯಾಗುತ್ತಿದ್ದಂತೆ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕದ್ರಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಈ ಭಾಗದ ಕದ್ರಾ, ಕೈಗಾ, ಮಲ್ಲಾಪುರ, ಹೋಟೆಗಾಳಿಯಂಥ ಗ್ರಾಮಗಳಲ್ಲಿ ನೆರೆಯ ಆತಂಕ ಎದುರಾಗಿದೆ. ಕಳೆದ ವರ್ಷದ ಕೂಡ ಇದೇ ಸಮಯದಲ್ಲಿ ಭಾರೀ ನೆರೆ ಹಾವಳಿ ಉಂಟಾಗಿ ಜನ ತತ್ತರಿಸಿದ್ದರು. ಈ ಬಾರಿ ಮತ್ತೆ ನೆರೆಯ ಭೀತಿ ಉಂಟಾಗಿತ್ತು. ಜಿಲ್ಲಾಡಳಿತ ತೀರ ಪ್ರದೇಶದ ಜನರನ್ನು ಶೀಘ್ರವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕಿದೆ.