ಉತ್ತರ ಕನ್ನಡದಲ್ಲಿ 459 ಧಾರ್ಮಿಕ ಕೇಂದ್ರಗಳು ಅನಧಿಕೃತ!
ಕಾರವಾರ, ಸೆಪ್ಟೆಂಬರ್ 16; ಸದ್ಯ ರಾಜ್ಯದಲ್ಲಿ ದೇವಾಲಯಗಳ ತೆರವು ವಿಚಾರ ಚಾಲ್ತಿಯಲ್ಲಿದ್ದು, ಮೈಸೂರಿನಲ್ಲಿ ನಡೆದ ದೇವಾಲಯ ತೆರವು ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಉತ್ತರ ಕನ್ನಡದಲ್ಲೂ ಸುಮಾರು 459 ಧಾರ್ಮಿಕ ಕೇಂದ್ರಗಳು ಅನಧಿಕೃತವೆಂದು ಜಿಲ್ಲಾಡಳಿತ ಪಟ್ಟಿ ಮಾಡಿದ್ದು, ಸುಪ್ರೀಂಕೋರ್ಟ್ ಆದೇಶದನ್ವಯ ನೋಡುವುದಾದರೆ ಇವೆಲ್ಲವಕ್ಕೂ ತೆರವು ಭೀತಿ ಎದುರಾಗಿದೆ.
ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳು ಇದ್ದರೆ ಅವುಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ 2013ರಲ್ಲಿಯೇ ತೀರ್ಪು ನೀಡಿತ್ತು. ಅದರ ಹಿನ್ನಲೆ, ಹೈಕೋರ್ಟ್ ಕೂಡಾ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ ನೀಡಿತ್ತು.
ಮೈಸೂರಿನ 93 ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್
ಮೈಸೂರಿನ ನಂಜನಗೂಡಿನಲ್ಲಿ ಅಲ್ಲಿನ ಆಡಳಿತ ಸುಪ್ರೀಂ ಆದೇಶವನ್ನು ಅನುಷ್ಠಾನಕ್ಕೆ ತರಲು ಮುಂದಾಗಿ ದೇವಾಲಯವೊಂದನ್ನು ತೆರವು ಮಾಡಿತ್ತು. ಈ ಪ್ರಕರಣ ಸಾಕಷ್ಟು ಆರೋಪ- ಪ್ರತ್ಯಾರೋಪಕ್ಕೂ ಕಾರಣವಾಗಿ, ರಾಜಕೀಯ ಹಾಗೂ ಧಾರ್ಮಿಕ ಗುದ್ದಾಟಕ್ಕೆ ಇದೀಗ ಕಾರಣವಾಗಿದೆ. ಮೈಸೂರಿನಂತೆ ಇತರ ಜಿಲ್ಲೆಗಳೂ, ಅದರಲ್ಲೂ ಉತ್ತರ ಕನ್ನಡ ಜಿಲ್ಲಾಡಳಿತ ಆದೇಶ ಪಾಲನೆಗೆ ಹೊರಟರೆ 459 ಧಾರ್ಮಿಕ ಕೇಂದ್ರಗಳು ಇಲ್ಲವಾಗಲಿದೆ.
ದೇವಾಲಯ ಧ್ವಂಸ ಪ್ರಕರಣ: ಮೈಸೂರು ಜಿಲ್ಲಾಡಳಿತಕ್ಕೆ ಚಾಟಿ ಬೀಸಿದ ಪ್ರತಾಪ್ ಸಿಂಹ
ಜಿಲ್ಲೆಯಲ್ಲಿ ಒಟ್ಟು 1,973 ಧಾರ್ಮಿಕ ಕೇಂದ್ರಗಳನ್ನು ಮುಜರಾಯಿ ಇಲಾಖೆ ಗುರುತಿಸಿದ್ದು, ಇವುಗಳಲ್ಲಿ 1,514 ಧಾರ್ಮಿಕ ಕೇಂದ್ರಗಳು ಅಧಿಕೃತ ಎಂದಾಗಿದೆ. ಉಳಿದ 459ನ್ನು ಅನಧಿಕೃತ ಎಂದು ಗುರುತಿಸಲಾಗಿದೆ. ಈ ಪೈಕಿ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ 5 ಧಾರ್ಮಿಕ ಕೇಂದ್ರಗಳು ಸರ್ಕಾರಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದು, ಭಟ್ಕಳದಲ್ಲಿ 1, ಶಿರಸಿಯಲ್ಲಿ 68, ಸಿದ್ದಾಪುರದಲ್ಲಿ 11, ಯಲ್ಲಾಪುರದಲ್ಲಿ 115, ಹೊನ್ನಾವರದಲ್ಲಿ 6 ಹಾಗೂ ಕುಮಟಾದಲ್ಲಿ 3 ಧಾರ್ಮಿಕ ಕೇಂದ್ರಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗಿದೆ.
ದೇವಾಲಯ ತೆರವು; ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ
ಶಿರಸಿಯ 1 ಗಾಯಿಠಾಣ ಭೂಮಿಯಲ್ಲಿ, ಕುಮಟಾ 1. ಸಿದ್ದಾಪುರ 13, ಯಲ್ಲಾಪುರದಲ್ಲಿ 39 ಧಾರ್ಮಿಕ ಕೇಂದ್ರಗಳು ಗಾಂವಠಾಣ ಭೂಮಿಯಲ್ಲಿ ನಿರ್ಮಾಣಗೊಂಡಿದ್ದವಾಗಿದೆ. ದಾಂಡೇಲಿಯಲ್ಲಿ 137, ಭಟ್ಕಳ ಹಾಗೂ ಶಿರಸಿಯಲ್ಲಿ ತಲಾ ಒಂದು ಧಾರ್ಮಿಕ ಕೇಂದ್ರವು ಸ್ಥಳೀಯ ಸಂಸ್ಥೆಗಳ ಜಾಗದಲ್ಲಿ ನಿರ್ಮಾಣಗೊಂಡಿದೆ. ಕುಮಟಾದ ಒಂದು ಕೇಂದ್ರವು ಹೊರೆದು ಬಂದ ಜಾಗದಲ್ಲಿ ನಿರ್ಮಾಣಗೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ 2009ಕ್ಕಿಂತ ಮುಂಚೆ ನಿರ್ಮಾಣವಾದ ಧಾರ್ಮಿಕ ಕೇಂದ್ರಗಳ ತೆರವು ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯೊಂದರಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದ್ದು, 2009ರ ನಂತರ ನಿರ್ಮಾಣವಾದ ಧಾರ್ಮಿಕ ಕೇಂದ್ರಗಳನ್ನು ತಕ್ಷಣ ತೆರವು ಮಾಡುವಂತೆ ಸೂಚಿಸಲಾಗಿತ್ತು. ಅನಧಿಕೃತವೆಂದು ಗುರುತಿಸಲಾಗಿರುವ 459 ಧಾರ್ಮಿಕ ಕೇಂದ್ರಗಳು 2009ಕ್ಕಿಂತ ಮೊದಲು ನಿರ್ಮಾಣವಾಗಿರುವುದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಅರ್ಜಿ ಮಂಜೂರು; 2009ರ ಪೂರ್ವದಲ್ಲಿ ನಿರ್ಮಾಣವಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಸಭೆ ನಡೆಸಿ, ಅವುಗಳ ಅರ್ಜಿಯನ್ನು ಮಂಜೂರು ಮಾಡುವ ಅಥವಾ ವಿಲೇವಾರಿ ಮಾಡುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅನಧಿಕೃತವೆಂದು ಗುರುತು ಮಾಡಿರುವ ಧಾರ್ಮಿಕ ಕೇಂದ್ರಗಳೆಲ್ಲವೂ 2009ರ ಮುಂಚೆಯೇ ನಿರ್ಮಾಣವಾದವು. ಎಲ್ಲಾ 459 ಧಾರ್ಮಿಕ ಕೇಂದ್ರಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಯ ಅಧಿಕಾರಿಗಳು ಇರುವ ಸಮಿತಿಯ ಎರಡು ಬಾರಿ ಸಭೆ ನಡೆಸಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ತಾಲೂಕಾವಾರು ಕೇಂದ್ರಗಳು; ದಾಂಡೇಲಿ 137, ಕುಮಟಾ 6, ಹೊನ್ನಾವರ 6, ಭಟ್ಕಳ 1, ಶಿರಸಿ 75, ಸಿದ್ದಾಪುರ 29, ಯಲ್ಲಾಪುರ 205.
Recommended Video