ಮಳೆಯಿಂದ ಕಾರವಾರದಲ್ಲಿ 418.26 ಕೋಟಿ ಹಾನಿ; ಶೀಘ್ರ ಕ್ರಮಕ್ಕೆ ಸೂಚನೆ
ಕಾರವಾರ, ಆಗಸ್ಟ್ 13: "ಪ್ರಾಥಮಿಕ ವರದಿ ಪ್ರಕಾರ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಅಂದಾಜು 418.26 ಕೋಟಿ ರೂಪಾಯಿ ಹಾನಿ ಸಂಭವಿಸಿದ್ದು, ಪರಿಹಾರ ಕಾರ್ಯವನ್ನು ಅತೀ ಶೀಘ್ರವೇ ಕೈಗೊಳ್ಳಲಾಗುವುದು" ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ತಿಳಿಸಿದ್ದಾರೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, "ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಇದುವರೆಗೆ 3257 ಮನೆಗಳು ಬಿದ್ದ ಬಗ್ಗೆ ವರದಿಯಾಗಿದೆ. ಸದರಿ ಮನೆಗಳ ಮಾಲೀಕರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೇ ಮನೆ ಹಾನಿಯಾದ ಸಂತ್ರಸ್ತ ಕುಟುಂಬಗಳಿಗೆ 3800 ರೂಪಾಯಿ ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಮಂಗಳವಾರದೊಳಗೆ ಈ ಕಾರ್ಯವನ್ನು ಮುಕ್ತಾಯಗೊಳಿಸಲಾಗುವುದು" ಎಂದು ಅವರು ಹೇಳಿದರು.
ಪ್ರವಾಹದಿಂದ 10,000 ಕೋಟಿ ಹಾನಿ, ಅಮಿತ್ ಶಾ ಗೆ ರಾಜ್ಯ ವರದಿ
ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಮಾತನಾಡಿ, "ಮುಂದಿನ 48 ಗಂಟೆಗಳಲ್ಲಿ ವಿದ್ಯುತ್, ರಸ್ತೆ, ದೂರವಾಣಿ ನೆಟ್ ವರ್ಕ್ ಹೀಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಚಿಗಳ್ಳಿ ಡ್ಯಾಮ್ ಬಿರುಕು ಬಿಟ್ಟಿದ್ದರಿಂದಾಗಿ ಕೃಷಿ ಭೂಮಿ ಹೆಚ್ಚು ಹಾನಿಗೊಳಗಾಗಿದೆ. ರಸ್ತೆ ಸಂಪರ್ಕಕ್ಕೆ ಆದ್ಯತೆ ಕೊಟ್ಟು ಸರಿಪಡಿಸಿ ಆಗಸ್ಟ್ 16ರ ನಂತರ ಬೆಳೆ ಸಮೀಕ್ಷೆ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛತೆ, ಆರೋಗ್ಯ, ಕುಡಿಯುವ ನೀರಿನ ಕಡೆ ಹೆಚ್ಚು ಗಮನಹರಿಸಲಾಗುವುದು" ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಮಾತನಾಡಿ, "14ನೇ ಹಣಕಾಸು ಯೋಜನೆಯಡಿ ಇರುವ ಹಣವನ್ನು, ಗ್ರಾಮಪಂಚಾಯತ್ ಮಟ್ಟದ ರಸ್ತೆ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಹೀಗೆ ಮುಂತಾದ ಕಾರ್ಯಗಳಿಗಾಗಿ ವಿನಿಯೋಗಿಸಲಾಗುವುದು. ಈ ಕುರಿತಾಗಿ ಗ್ರಾಮ ಪಂಚಾಯತ್ ಗಳಲ್ಲಿ ತುರ್ತು ಸಭೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ನೆರೆಪೀಡಿತ 29,216 ಜನರಿಗೆ ಔಷಧಿಗಳನ್ನು ಒದಗಿಸಿದ್ದೇವೆ. ಕುಡಿಯುವ ನೀರಿನ ಸೌಲಭ್ಯ ತಲೆದೋರುತ್ತಿದ್ದು, ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದರು.
ಪ್ರವಾಹ ಸಂತ್ರಸ್ತರಿಗೆ ಭಾರಿ ಮೊತ್ತದ ನೆರವು ನೀಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀ ಮಾತನಾಡಿ,"ಮುಳುಗಡೆಯಾದ 113 ಗ್ರಾಮಗಳ 6200 ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ" ಎಂದು ಮಾಹಿತಿ ನೀಡಿದರು.