ಕಾರವಾರ; ಒಂದು ತಿಂಗಳಿನಿಂದ ಮಗ ನಾಪತ್ತೆ, ತಾಯಿ ಕಣ್ಣೀರು
ಕಾರವಾರ, ಜೂನ್ 19: ಆತ ಮನೆಗೆ ಆಧಾರ ಸ್ತಂಭವಾಗಿದ್ದ, ತಾಯಿಗೂ ಒಬ್ಬನೇ ಮಗ. ಎಲ್ಲರೊಂದಿಗೂ ಪ್ರೀತಿ, ಸಹಬಾಳ್ವೆಯಿಂದ ಇರುತ್ತಿದ್ದ. ಆದರೆ ಬಹಿರ್ದೆಸೆಗೆಂದು ಹೋದವನು ತಿಂಗಳಿಂದ ನಾಪತ್ತೆಯಾಗಿದ್ದು, ಪೊಲೀಸರಿಗೆ ಕೊಟ್ಟ ದೂರು ಕೂಡ ಈವರೆಗೂ ಪ್ರಯೋಜನಕ್ಕೆ ಬಾರದಂತಾಗಿದೆ.
ಮಗನ ನಾಪತ್ತೆ ಬಳಿಕ ನೊಂದ ತಾಯಿ ಮಗನಿಗಾಗಿ ಗೋಳಾಡುತ್ತಿದ್ದು ನಿತ್ಯವೂ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕಾರವಾರ ನಗರದ ಬೈತಖೋಲದ ನಿವಾಸಿ 36 ವರ್ಷದ ಸಂಜಯ ಹೆದ್ದು ಗೌಡ ನಾಪತ್ತೆಯಾದ ವ್ಯಕ್ತಿ.
ಕಾರವಾರ: ಅಂಗನವಾಡಿ ಕೇಂದ್ರ ಕಟ್ಟಡದ ಸಿಮೆಂಟ್ ಕುಸಿತ; ಅಧೃಷ್ಟಕ್ಕೆ ತಪ್ಪಿದ ಪ್ರಾಣಾಪಾಯ
ನಗರದ ಐಎಂಪಿ ಕಂಪನಿಯಲ್ಲಿ ಲೇಬರ್ ಕೆಲಸ ಮಾಡಿಕೊಂಡಿದ್ದ ಈತ ಪ್ರತಿನಿತ್ಯ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದ. ಆದರೆ ಮೇ.14 ರಂದು ಕೆಲಸ ಮುಗಿಸಿ ಮನೆಗೆ ಬಂದವನು ಹತ್ತಿರದ ಪರಿಚಯಸ್ಥರ ಮನೆಗೆ ಮದುವೆ ಚಪ್ಪರ ಹಾಕಲೆಂದು ತೆರಳಿದ್ದಾನೆ.
ರಾತ್ರಿ 8 ಘಂಟೆ ವೇಳೆಗೆ ಗಾಬರಿಯಿಂದ ಮನೆಗೆ ವಾಪಾಸ್ ಬಂದು ನೀರಿನ ಬಾಟಲ್ ಹಿಡಿದು ಮನೆಯ ಹಿಂಬದಿಯಲ್ಲಿನ ಗುಡ್ಡದ ಕಡೆಗೆ ಶೌಚಕ್ಕೆ ತೆರಳಿದವನು ಬಳಿಕ ವಾಪಾಸಾಗಿಲ್ಲ. ಬಳಿಕ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ ತಾಯಿ ಹುಡುಕಾಟ ನಡೆಸಿದರೂ ಸಿಗದಿದ್ದಾಗ ಕೊನೆಗೆ ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಮಗನನ್ನು ಹುಡುಕಿ ಕೊಡಿ; ಮಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಒಂದು ತಿಂಗಳಾದರೂ ಪತ್ತೆಯಾಗದೇ ಇರುವುದು ತಾಯಿ ಆತಂಕ ಹೆಚ್ಚಿಸಿದೆ ಜೊತೆಗೆ ದೂರು ನೀಡಿ ತಿಂಗಳಾಗಿದ್ದು ಪೊಲೀಸರು ಮಗನನ್ನು ಹುಡುಕಿ ಕೊಡದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನಾ ಪೆನ್ನೇಕರ್ ಭೇಟಿಯಾದ ವೃದ್ಧ ತಾಯಿ ಮಗನನ್ನು ಹುಡುಕಿ ಕೊಡುವಂತೆ ಅಂಗಲಾಚಿದ್ದಾಳೆ.
ಇನ್ನು ವೃದ್ಧೆ ಇಂದುವಿನ ಪತಿ ಸಹ ಮೃತಪಟ್ಟಿದ್ದು ಸಂಜಯ್ ಒಬ್ಬನೇ ಮಗನಾಗಿದ್ದ. ಕುಟುಂಬಕ್ಕೆ ಆಧಾರವಾಗಿದ್ದ ಮಗನೇ ಇದೀಗ ನಾಪತ್ತೆಯಾಗಿದ್ದು ಇದೀಗ ತಾಯಿಗೆ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ. ಆತ ಎಲ್ಲಿ ಹೋಗಿದ್ದಾನೆ, ಆತನಿಗೆ ಏನಾಗಿದೆ? ಎನ್ನುವುದೇ ತಿಳಿಯುತ್ತಿಲ್ಲ. ಮಗನನ್ನು ಹೇಗಾದರು ಮಾಡಿ ಹುಡುಕಿಕೊಡಿ ಎಂದು ವೃದ್ಧೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಬಳಿಯೂ ಕಣ್ಣೀರು ಹಾಕಿದ್ದಾರೆ.
ಆಸರೆಯಾಗಬೇಕಾದ ಮಗ ಕಣ್ಮರೆ; ನಾಪತ್ತೆಯಾದ ಯುವಕನ ತಾಯಿಗೆ 72 ವರ್ಷ ವಯಸ್ಸಾಗಿದ್ದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾಳೆ. ನಾಪತ್ತೆ ಬಗ್ಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವೃದ್ಧೆಯ ಮಗನನ್ನು ಹುಡುಕಿಕೊಡುವ ಕಾರ್ಯ ಮಾಡಬೇಕು ಎಂದು ಸ್ಥಳೀಯರಾದ ಗಣಪತಿ ಮಾಂಗ್ರೆ ಆಗ್ರಹಿಸಿದ್ದಾರೆ.
ಒಟ್ಟಾರೇ ಇಳಿ ವಯಸ್ಸಿನಲ್ಲಿ ತಾಯಿಗೆ ಆಸರೆಯಾಗಬೇಕಾದ ಮಗ ಕಣ್ಮರೆಯಾಗಿ ತಿಂಗಳು ಕಳೆದರೂ ಪತ್ತೆಯಾಗದಿರೋದು ಹಿರಿಯ ಜೀವಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಂತೂ ಸತ್ಯ. ಆದಷ್ಟು ಬೇಗ ಪೊಲೀಸರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಾಪತ್ತೆಯಾದ ಯುವಕನನ್ನು ಪತ್ತೆ ಹಚ್ಚಬೇಕಿದೆ.