ಕಾರವಾರ; ಅಲೆಗಳ ಅಬ್ಬರಕ್ಕೆ 30 ದೋಣಿಗಳಿಗೆ ಹಾನಿ; ಅಂಕೋಲದಲ್ಲಿ 9 ಮಂದಿ ರಕ್ಷಣೆ
ಕಾರವಾರ, ಅಕ್ಟೋಬರ್ 25: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಚಂಡಮಾರುತ ಉಂಟಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭಾರಿ ಅಲೆಗಳು ಅಪ್ಪಳಿಸಿ ಜಿಲ್ಲೆಯಾದ್ಯಂತ ಸುಮಾರು 30 ಸಾಂಪ್ರದಾಯಿಕ ದೋಣಿಗಳಿಗೆ ಹಾನಿಯಾಗಿದೆ.
ಕಾರವಾರ ತಾಲ್ಲೂಕಿನ ದೇವಭಾಗದ ಕಡಲತೀರದ ಬಳಿ ಲಂಗರು ಹಾಕಿಟ್ಟಿದ್ದ ಮೂರು ಸಾಂಪ್ರದಾಯಿಕ ದೋಣಿಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿ ಹಾನಿಯಾಗಿವೆ. ಜತೆಗೆ, ಮೂರು ಮೀನುಗಾರಿಕಾ ಬಲೆಗಳು ಭಾರಿ ಅಲೆಗಳಿಗೆ ಕೊಚ್ಚಿಕೊಂಡು ಹೋಗಿವೆ. ಸ್ಥಳಕ್ಕೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಯ ಅಂದಾಜನ್ನೂ ಮಾಡಲಾಗಿದೆ.
ಕ್ಯಾರ್ ಚಂಡಮಾರುತ; ಅಸ್ತವ್ಯಸ್ತಗೊಂಡ ಮಂಗಳೂರು, ಉಡುಪಿ
ಅಂಕೋಲಾ, ಭಟ್ಕಳ, ಹೊನ್ನಾವರದ ಕಡಲತೀರಗಳಲ್ಲಿ ನಿಲ್ಲಿಸಿಟ್ಟಿದ್ದ ದೋಣಿಗಳಿಗೂ ಹಾನಿಯಾಗಿದೆ. ಸುಮಾರು 10 ಬಲೆಗಳು ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಿವೆ. ಅದಾಗಲೇ ನಷ್ಟದಲ್ಲಿದ್ದ ಮೀನುಗಾರರಿಗೆ ಈ ಘಟನೆಗಳು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಂಗಡಿಗಳಿಗೆ ನುಗ್ಗಿದ ನೀರು: ಭಟ್ಕಳ ಸಮೀಪದ ಮುರ್ಡೇಶ್ವರದಲ್ಲಿ ಕಡಲ ಅಲೆಗಳ ಹೊಡೆತಕ್ಕೆ ತೀರದ ಅಂಗಡಿಗಳಿಗೆ ಗುರುವಾರ ನೀರು ನುಗ್ಗಿತು. ಕಡಲತೀರದಲ್ಲಿ ಸ್ಥಳೀಯರು ಹೂಡಿದ್ದ ತಾತ್ಕಾಲಿಕ ಮಳಿಗೆಗಳು ಹಾಗೂ ಗೂಡಂಗಡಿಗಳಿಗೆ ಅಲೆ ಅಪ್ಪಳಿಸಿದ್ದು, ಬೆಳಿಗ್ಗೆ ಅಂಗಡಿ ತೆರೆಯಲು ಬಂದಿದ್ದ ವ್ಯಾಪಾರಸ್ಥರು ಕಂಗಾಲಾದರು. ಬಳಿಕ ಮಳೆಯಲ್ಲೇ ಅಂಗಡಿಗೆ ನುಗ್ಗಿದ್ದ ನೀರನ್ನು ಹೊರ ಹಾಕಿ, ವ್ಯಾಪಾರ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿಕೊಂಡರು.
ರಾಜ್ಯದಲ್ಲಿ ಅಬ್ಬರಿಸಲಿದೆ 'ಕ್ಯಾರ್' ಚಂಡಮಾರುತ
9 ಜನರ ರಕ್ಷಣೆ: ಅಂಕೋಲಾದ ಹಾರವಾಡ ಸಮೀಪ ಸಮುದ್ರದಲ್ಲಿ ಅಪಾಯದಲ್ಲಿದ್ದ ಸಾಯಿ ಕಲಾಶ್ ಎಂಬ ಹೆಸರಿನ ಬಾರ್ಜ್ ಮತ್ತು ಬಾರ್ಜ್ ನಲ್ಲಿದ್ದ 9 ಜನರನ್ನು ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ 9 ಜನರಿದ್ದ ಸಾಯಿ ಕಲಾಶ್ ಎಂಬ ಹೆಸರಿನ ಬಾರ್ಜ್ ಹವಾಮಾನ ವೈಪರೀತ್ಯದ ಪರಿಣಾಮ ಸಮುದ್ರದ ರೌದ್ರಾವತಾರದಿಂದ ಅಂಕೋಲಾದ ಬೇಲೇಕೇರಿ ಸಮೀಪ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು. ಬೇಲಿಕೇರಿ ಕರಾವಳಿ ಕಾವಲು ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಬಾರ್ಜನ್ನು ಬೇಲಿಕೇರಿ ಬಂದರು ಸಮೀಪ ಸುರಕ್ಷಿತವಾಗಿ ಕರೆತಂದು ರಕ್ಷಣೆ ನೀಡಿದ್ದಾರೆ.