ಘಟನೆ ನಡೆದು 3 ವರ್ಷ: ಅಂತ್ಯ ಕಾಣದ ಪ್ರಕರಣಗಳಂತಾಯಿತೇ ಪರೇಶ್ ಮೇಸ್ತಾ ಸಾವು?
ಕಾರವಾರ, ಡಿಸೆಂಬರ್ 10: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಪರೇಶ್ ಮೇಸ್ತಾ ಎಂಬ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟು ಮೂರು ವರ್ಷಗಳೇ ಕಳೆದಿದ್ದು, ಸಿಬಿಐ ಸಹ ತನಿಖೆ ನಡೆಸಿದೆ. ಆದರೆ ಸಾವಿನ ಪ್ರಕರಣದ ಹಿಂದಿನ ಸತ್ಯ ಮಾತ್ರ ಈವರೆಗೆ ಹೊರಬಂದಿಲ್ಲ. ಈ ಪ್ರಕರಣ ಕೂಡ ಅಂತ್ಯ ಕಾಣದ ಪ್ರಕರಣಗಳಂತಾಯಿತೇ ಎಂದು ಇದೀಗ ಜಿಲ್ಲೆಯ ಜನರು ಮಾತನಾಡಿಕೊಳ್ಳುವಂತಾಗಿದೆ.
2017ರ ಡಿಸೆಂಬರ್ 6ರಂದು ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಕೋಮು ಗಲಭೆ ವೇಳೆ ಪಟ್ಟಣದ ಉದ್ಯಮ ನಗರ ನಿವಾಸಿ 19 ವರ್ಷದ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಡಿಸೆಂಬರ್ 8 ರಂದು ಪರೇಶ್ ಮೇಸ್ತಾ ಮೃತದೇಹ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೋಮು ಗಲಭೆ ವೇಳೆಯೇ ಅನ್ಯಕೋಮಿನ ಜನರು ಕೊಲೆ ಮಾಡಿರಬಹದೆಂದು ಆರೋಪಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದು, ಹಲವೆಡೆ ಗಲಭೆಗೆ ಸಹ ಕಾರಣವಾಗಿತ್ತು.
ಪರೇಶ್ ಮೇಸ್ತ ಹತ್ಯೆ, ಕುಮಟಾದಲ್ಲಿ ಬೀಡು ಬಿಟ್ಟ ಸಿಬಿಐ ತಂಡ
ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿತ್ತು
ಘಟನೆ ನಡೆದ ವೇಳೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ನಾಯಕರುಗಳು ಬೀದಿಗಿಳಿದು, ‘ರಾಜ್ಯ ಸರ್ಕಾರದ ಮೇಲೆ ತಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ವಹಿಸಬೇಕು' ಎಂದು ಒತ್ತಾಯ ಮಾಡಿದರ ಪರಿಣಾಮ 2017ರ ಡಿಸೆಂಬರ್ 13 ರಂದು ಸಿಬಿಐ ತನಿಖೆಗೆ ಅಂದಿನ ಸರ್ಕಾರ ಪ್ರಕರಣವನ್ನು ವಹಿಸಿತ್ತು.
ಆದರೆ, ಸಿಬಿಐ ತನಿಖೆಗೆ ವಹಿಸಿ ಮೂರು ವರ್ಷವಾಗುತ್ತಾ ಬಂದರೂ, ಇಂದಿಗೂ ಪರೇಶ್ ಮೇಸ್ತಾ ಸಾವಿಗೆ ಕಾರಣವೇನೆಂಬ ಸತ್ಯ ಮಾತ್ರ ತನಿಖೆಯಿಂದ ಹೊರ ಬಂದಿಲ್ಲ. ಸಿಬಿಐ ಅಧಿಕಾರಿಗಳು ಹಲವು ಬಾರಿ ಹೊನ್ನಾವರ, ಕುಮಟಾಕ್ಕೆ ಭೇಟಿ ನೀಡಿ, ಹಲವರನ್ನು ವಿಚಾರಣೆ ನಡೆಸಿದ್ದರು. ಅಲ್ಲದೇ, ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿ ಮನೆಯವರನ್ನು ಕೂಡ ವಿಚಾರಣೆಗೊಳಪಡಿಸಿದ್ದರು. ತನಿಖೆ ಕೈಗೆತ್ತುಕೊಂಡು ಸಾಕಷ್ಟು ಸಮಯವಾದರೂ ಸಿಬಿಐ ಅಧಿಕಾರಿಗಳು ಸತ್ಯ ಹೊರಹಾಕುವಲ್ಲಿ ವಿಳಂಬ ಮಾಡಿದ್ದಾರೆ.
ಗಲಭೆಯಲ್ಲಿ ಭಾಗಿಯಾಗಿದ್ದವರ ಮೇಲಿನ ಕೇಸ್ ವಾಪಸ್ಸು
ಸದ್ಯ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಪರೇಶ್ ಮೇಸ್ತಾ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹೋರಾಟ ಮಾಡಿದ ಬಿಜೆಪಿ ಎರಡೂ ಕಡೆ ಅಧಿಕಾರದಲ್ಲಿರುವುದರಿಂದ ಇನ್ನಾದರೂ ಶೀಘ್ರದಲ್ಲಿ ಸಾವಿನ ಹಿಂದಿನ ರಹಸ್ಯ ಹೊರಹಾಕಲಿ ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ. ಪರೇಶ್ ಮೇಸ್ತಾ ಸಾವಿನ ಪ್ರಕರಣವಾದ ನಂತರ ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ, ಶಿರಸಿಯಲ್ಲಿ ಗಲಭೆಗಳಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ನೂರಾರು ಯುವಕರ ಮೇಲೆ ಪ್ರಕರಣ ದಾಖಲಾಗಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಈ ಗಲಭೆ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಚುನಾವಣೆಯ ವೇಳೆ ಬಿಜೆಪಿ ನಾಯಕರು ಪ್ರಚಾರದಲ್ಲಿ ಆಶ್ವಾಸನೆ ನೀಡಿದ್ದರು.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಎಲ್ಲಾ ಪ್ರಕರಣವನ್ನು ಹಿಂಪಡೆದಿದ್ದಾರೆ
ಅದರಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಜಿಲ್ಲೆಯ ಶಾಸಕರಾದ ರೂಪಾಲಿ ನಾಯ್ಕ, ಸುನಿಲ್ ನಾಯ್ಕ, ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ್ ಗಲಭೆ ಪ್ರಕರಣವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದರು. ಈ ಬಗ್ಗೆ ಗಮನ ಹರಿಸಿದ್ದ ಸಿಎಂ, ಪರೇಶ್ ಮೇಸ್ತಾ ಸಾವಿನ ನಂತರ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದವರ ಮೇಲೆ ದಾಖಲಾಗಿದ್ದ ಎಲ್ಲಾ ಪ್ರಕರಣವನ್ನು ಹಿಂಪಡೆದಿದ್ದಾರೆ.
ಹನಿ ಹನಿ ರಕ್ತಕ್ಕೂ ನ್ಯಾಯ ಎಲ್ಲಿ?
ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿ ನ್ಯಾಯಾಲಯಕ್ಕೆ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿ ಹಲವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು. ಇದೀಗ ಎಲ್ಲಾ ಪ್ರಕರಣವನ್ನು ಸರ್ಕಾರ ಹಿಂಪಡೆಯುವ ಮೂಲಕ ನೆಮ್ಮದಿ ನಿಟ್ಟುಸಿರನ್ನ ಬಿಟ್ಟಿದ್ದಾರೆ. ಅದರಂತೆ ಸಾವಿನ ಹಿಂದಿನ ಸತ್ಯವನ್ನು ಸಹ ಸರ್ಕಾರ ಸಿಬಿಐ ಮೂಲಕ ಹೊರ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಪರೇಶ್ ಮೇಸ್ತಾ ಮೃತದೇಹ ಸಿಕ್ಕ ದಿನ ಹೊನ್ನಾವರಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸಂಸದ ಹೆಗಡೆ ನೀಡಿದ್ದ ಹೇಳಿಕೆ ಅಂದು ಸಾಕಷ್ಟು ಸದ್ದು ಮಾಡಿತ್ತು. ಮೇಸ್ತಾ ಕುಟುಂಬಕ್ಕೆ ಶೀಘ್ರದಲ್ಲೇ ನ್ಯಾಯ ಸಿಗುವ ವಿಶ್ವಾಸ ಸಹ ವ್ಯಕ್ತವಾಗಿತ್ತು.
Recommended Video
ಸಂಸದ ಹೆಗಡೆ ಹೇಳಿಕೆ ಭಾರೀ ಟ್ರೋಲ್
ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೂ ಇನ್ನು ಕೂಡ ಸಾವಿನ ಹಿಂದಿನ ಸತ್ಯ ಘಟನೆಯೇ ಹೊರ ಬಂದಿಲ್ಲ. ಘಟನೆ ನಡೆದು ಮೂರು ವರ್ಷವಾದರೂ ನಾಯಕರುಗಳು ಮೌನ ವಹಿಸಿರುವ ಹಿನ್ನೆಲೆಯಲ್ಲಿ ಸಂಸದ ಹೆಗಡೆ ಹೇಳಿಕೆಯನ್ನು ಇತ್ತೀಚಿಗೆ ಭಾರೀ ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಹನಿ ಹನಿ ರಕ್ತ...'ದ ಹೇಳಿಕೆಯ ಟ್ರೋಲ್ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಹಲವರು ಮೇಸ್ತಾ ಪ್ರಕರಣಕ್ಕೆ ಇನ್ನೂ ನ್ಯಾಯ ಸಿಗದಿರುವುದಕ್ಕೆ ಬಿಜೆಪಿ ಹಾಗೂ ಸಂಸದ ಹೆಗಡೆಯನ್ನು ಟ್ರೋಲಿಗರು ಟೀಕಿಸಿದ್ದಾರೆ.