ಭಟ್ಕಳದ 20 ಮಂದಿ ಕೊರೊನಾ ಗುಣಮುಖರಿಗೆ ಆಸ್ಪತ್ರೆಯಿಂದ ಬಿಡುಗಡೆ
ಕಾರವಾರ, ಮೇ 23: ಕೊರೊನಾ ಸೋಂಕು ತಗುಲಿದ್ದ 20 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಅವರೆಲ್ಲರನ್ನೂ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮೇ 5, 8 ಹಾಗೂ 9ರಂದು ಸೋಂಕು ದೃಢಪಟ್ಟಿದ್ದ ಭಟ್ಕಳ ಮೂಲದ ಈ 20 ಮಂದಿಗೆ ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು.
Recommended Video
ಸೋಂಕಿತರು ದಾಖಲಾಗಿ ಹದಿನಾಲ್ಕಕ್ಕೂ ಹೆಚ್ಚು ದಿನ ಪೂರೈಸಿದ್ದು, ಸದ್ಯ ಇವರೆಲ್ಲರ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದವರಲ್ಲಿ 80 ವರ್ಷದ ವೃದ್ಧ ಹಾಗೂ ಐದು ತಿಂಗಳ ಮಗುವೂ ಸೇರಿದೆ.
ಬಳ್ಳಾರಿ; ಕೊರೊನಾದಿಂದ ಹೊರಬಂದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ: ಸೋಂಕಿತರು ಗುಣಮುಖರಾಗಲು ಸೇವೆ ಸಲ್ಲಿಸಿದ ವೈದ್ಯಕೀಯ ಸಿಬ್ಬಂದಿಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, "ಜನರ ಆತಂಕ ದೂರಮಾಡಲು ಬೀಳ್ಕೊಡುಗೆ ಕಾರ್ಯಕ್ರಮ ಮಾಡಿದ್ದೇವೆ. ಸೋಂಕಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದ್ದಕ್ಕೆ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆಗಳು" ಎಂದು ಹೇಳಿದರು.
ಗುಣಮುಖರಾದವರಿಗೆ ಔಷಧಿ, ಮಾಸ್ಕ್ ಹಾಗೂ ಪ್ರಮಾಣಪತ್ರದ ಜೊತೆಗೆ ಸಿಹಿ ನೀಡಿ ಬೀಳ್ಕೊಡಲಾಯಿತು. ಗುಣಮುಖರಾದ 20 ಮಂದಿಯನ್ನು ಮೂರು ಆಂಬುಲೆನ್ಸ್ ಗಳಲ್ಲಿ ಭಟ್ಕಳಕ್ಕೆ ಕಳುಹಿಸಿಕೊಡಲಾಯಿತು.