ಉತ್ತರ ಕನ್ನಡ; 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ಕಾರವಾರ, ಮಾರ್ಚ್ 17; ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿದೆ. ಗ್ರಾಮಸ್ಥರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಣ್ಣೆಮಡಿ ಗ್ರಾಮದ 12 ಮನೆಗಳಿಗೆ ಸಂಪೂರ್ಣ ಬಹಿಷ್ಕಾರ ಹಾಕಲಾಗಿದೆ. ಎಣ್ಣೆಮಡಿಯ ಹಳ್ಳೇರ ಜಾತಿಯ ಯಜಮಾನ, ಹಕ್ಕುದಾರ ಹಾಗೂ ಮುಖಂಡರ ಅಣತಿಯಂತೆ ಕೆಲವರು ಕಾಡು ಪ್ರಾಣಿ ಬೇಟೆಯಾಡಿ ಕೊಂದು ಹಾಕಿದ್ದರು.
ಗ್ರಾ.ಪಂಚಾಯಿತಿ ಸದಸ್ಯನ ಕುಟುಂಬಕ್ಕೆ ಮಸೀದಿಗೆ ಪ್ರವೇಶಕ್ಕೆ ಬಹಿಷ್ಕಾರ
ಈ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಾಗಲು ಗ್ರಾಮದ ಸೀತೆ ಹಳ್ಳೇರ ಹಾಗೂ ಅವರ ಮನೆಯ ಜನರೇ ಕಾರಣ ಎಂದು ಅವರ ಮನೆಗೆ ನುಗ್ಗಿ, ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಸೀತೆಯ ಕುಟುಂಬಸ್ಥರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪರಿಶಿಷ್ಟರಿಗೆ ಕ್ಷೌರ ಮಾಡಿದ್ದಕ್ಕೆ ಕ್ಷೌರಿಕನಿಗೇ ಸಾಮಾಜಿಕ ಬಹಿಷ್ಕಾರ
ಈ ಘಟನೆ ವಿಕೋಪಕ್ಕೆ ತಿರುಗಿದ ನಂತರ ಸ್ಥಳಕ್ಕೆ ಭಟ್ಕಳ ಡಿವೈಎಸ್ಪಿ, ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಭೆ ನಡೆಸಿದರು. ಸ್ಥಳೀಯ ವ್ಯಕ್ತಿಗಳು ಇದ್ಯಾವುದಕ್ಕೂ ಬಗ್ಗಲಿಲ್ಲ. ಯಜಮಾನ ಮತ್ತು ಇತರರು ಸೀತೆ ಹಳ್ಳೇರ ಅವರಿಗೆ ದೂರು ವಾಪಸ್ ಪಡೆಯಲು ಒತ್ತಡ ಹೇರಿದ್ದರು.
ಶೌಚಾಲಯ ತೆರವುಗೊಳಿಸಲು ಒತ್ತಾಯಿಸಿ ಕುಟುಂಬಕ್ಕೆ ಬಹಿಷ್ಕಾರ
ದೂರು ವಾಪಸ್ ಪಡೆಯದ ಕಾರಣ ಸೀತೆ ಹಳ್ಳೇರ ಹಾಗೂ ಅವರ ಕುಟುಂಬದ ಸಂಬಂಧಿಗಳ ಒಟ್ಟು 12 ಮನೆಗಳಿಗೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ಈ ಕುಟುಂಬಗಳ ಜೊತೆ ಯಾರೂ ಸಂಪರ್ಕ ಬೆಳೆಸುತ್ತಿಲ್ಲ, ಅಂಗಡಿಗೆ ಹೋದರೆ ದಿನಸಿ ಪದಾರ್ಥ ಕೊಡುತ್ತಿಲ್ಲ, ಶಾಲಾ- ಕಾಲೇಜಿಗೆ ತೆರಳಿದರೂ ಮಕ್ಕಳನ್ನು ಮಾತನಾಡಿಸುತ್ತಿಲ್ಲ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವನ್ನು ಊರಿನಿಂದ ಹೊರ ಇಡಲಾಗಿದೆ.
Recommended Video
ಮುಖ್ಯಮಂತ್ರಿಗಳಿಗೆ ಪತ್ರ; ಎಣ್ಣೆಮಡಿಯ ಹಳ್ಳೇರ ಸಮುದಾಯದ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಕುರಿತು ಶಿವಾನಂದ ಹಳ್ಳೇರ ಎಂಬುವವರು ಬಹಿಷ್ಕಾರ ಹಾಕಲು ಕಾರಣರಾದ ಹಳ್ಳೇರ ಸಮುದಾಯದ ಯಜಮಾನ ನಾರಾಯಣ ಹಳ್ಳೇರ, ಹಕ್ಕುದಾರ ಪಾಂಡುರಂಗ ಹಳ್ಳೇರ, ಮುಖಂಡರಾದ ಗೋವಿಂದ ಹಳ್ಳೇರ, ನಾರಾಯಣ ಜೋಗಿ ಹಳ್ಳೇರ, ರಾಜು ಹಳ್ಳೇರ, ಕಮಲಾಕ್ಷ ಹಳ್ಳೇರ, ಈರಪ್ಪ ಹಳ್ಳೇರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರು, ಮುಖ್ಯಮಂತ್ರಿ, ಗೃಹಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾ, ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.