ತಾಯಿಗೆ ಹೆದರಿ ಕಾಡಿನಲ್ಲಿದ್ದು, ಅಪಹರಣದ ನಾಟಕವಾಡಿದ ಹೈಸ್ಕೂಲ್ ಹುಡ್ಗಿ!
ಕಾರವಾರ, ಫೆಬ್ರವರಿ 27: ಹೋಮ್ ವರ್ಕ್ ನಿಂದ ಹಾಗೂ ತಾಯಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ತನ್ನನ್ನು ಯಾರೋ ಅಪಹರಿಸಿದ್ದರು ಎಂದು 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಾಟಕವಾಡಿರುವ ಘಟನೆ ಇದೀಗ ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ.
ಯಲ್ಲಾಪುರ ತಾಲೂಕಿನ ನಂದೊಳ್ಳಿಯ ವಿದ್ಯಾರ್ಥಿನಿಯೊಬ್ಬಳು ಬುಧವಾರ ಸಂಜೆ ನಾಪತ್ತೆಯಾಗಿ, ರಾತ್ರಿ ಮನೆ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿದ್ದಳು. ಯಲ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ, ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್ನಲ್ಲಿ ಮನೆಗೆ ಹೊರಟಿದ್ದು, ನಂದೊಳ್ಳಿಯಲ್ಲಿ ಇಳಿದಿದ್ದಳು. ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯಾರೋ ಅಪಹರಿಸಿರಬಹುದೆಂದು ಯಲ್ಲಾಪುರ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು.
ಹೈಸ್ಕೂಲ್ ಹುಡ್ಗಿ ನಾಪತ್ತೆ; ಕಾಡಿನಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆ!
ಸಂಜೆಯಿಂದ ರಾತ್ರಿಯವರೆಗೆ ಗ್ರಾಮಸ್ಥರೆಲ್ಲ ಸೇರಿ ಹುಡುಕಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ. ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಯಾವುದೇ ಸಮಸ್ಯೆಗಳಿಲ್ಲದೇ ಸುರಕ್ಷಿತವಾಗಿದ್ದಳು.
ಈ ವೇಳೆ, ಬೈಕ್ ಮೇಲೆ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು. ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿದ್ದಳು.
ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿದ್ದ ಸ್ಥಳವನ್ನು ಡಿವೈಎಸ್ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಪೊಲೀಸರು ವಿದ್ಯಾರ್ಥಿನಿಯ ಮನೆಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿದ್ದರು. ಬಳಿಕ ವಿದ್ಯಾರ್ಥಿನಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
"ಶಾಲಾ ಚಟುವಟಿಕೆಗಳನ್ನು ಸರಿಯಾಗಿ ಮಾಡದ ಕಾರಣ ತಾಯಿಯು ಶಾಲಾ ಶಿಕ್ಷಕರಲ್ಲಿ ವಿಚಾರಿಸಿದ್ದರು. ಈ ವೇಳೆ ಶಾಲಾ ಚಟುವಟಿಕೆಗಳನ್ನು ಸಮರ್ಪಕವಾಗಿ ಮಾಡಿಲ್ಲವೆಂದು ಶಿಕ್ಷಕರು ತಾಯಿಗೆ ತಿಳಿಸಿದ್ದರು. ಹೀಗಾಗಿ ಮನೆಗೆ ಹೋದಮೇಲೆ ತಾಯಿ ಬೈಯ್ಯಬಹುದು ಅಥವಾ ಹೊಡೆಯಬಹುದೆಂದು ಊಹಿಸಿಕೊಂಡು ಶಾಲೆಯಿಂದ ವಾಪಸ್ಸಾಗಿ ಮನೆಗೆ ತೆರಳದೆ ಹತ್ತಿರದ ಕಾಡು ಪ್ರದೇಶದಲ್ಲಿ ಕುಳಿತಿದ್ದೆ.''
Recommended Video
"ರಾತ್ರಿ ಮನೆಯ ನೆನಪಾಗಿ ಅಪಹರಣಗೊಂಡ ರೀತಿಯಲ್ಲಿ ಸನ್ನಿವೇಶ ಸೃಷ್ಟಿ ಮಾಡಲು ನನ್ನಷ್ಟಕ್ಕೆ ನಾನೇ ನಾನು ಧರಿಸಿದ್ದ ಲೆಗ್ಗಿಂಗ್ಸ್ ಪ್ಯಾಂಟ್ ತುದಿಗಳನ್ನು ಒಂದಕ್ಕೊಂದು ಸೇರಿಸಿಕೊಂಡು ಕಾಲು ಕಟ್ಟಿಕೊಂಡಿದ್ದೆ. ನಂತರ ಬಾಯಿಗೆ ಮತ್ತು ಕೈ ಕಟ್ಟಿಕೊಂಡಿದ್ದೆ. ನಾನು ಮನೆಗೆ ಹೊರಡುವ ಸಮಯದಲ್ಲಿ ಯಾವುದೋ ಬೈಕ್ ನನ್ನ ಮನೆಗೆ ತೆರಳುವ ಸಪ್ಪಳ ಕೇಳಿ 'ಮಮ್ಮಿ ಮಮ್ಮಿ' ಎಂದು ಕಿರುಚಿದೆ. ಆನಂತರ ಕಿರುಚಿದ ಶಬ್ಧ ಕೇಳಿ ಮನೆಯಿಂದ ಅಜ್ಜಿ ಹಾಗೂ ಸಂಬಂಧಿಕರು ಬಂದು ನಾನು ಕಟ್ಟಿಕೊಂಡಿದ್ದ ವೇಲನ್ನು ಬಿಚ್ಚಿ ನನ್ನನ್ನು ಮನೆಗೆ ಕರೆದುಕೊಂಡು ಹೋದರು'' ಎಂದಿದ್ದಾಳೆ.