ಹೊನ್ನಾವರದ 108 ಸಿಬ್ಬಂದಿ ಸಮಯ ಪ್ರಜ್ಞೆ; ಉಳಿಯಿತು ತಾಯಿ ಮಗು ಜೀವ
ಕಾರವಾರ, ಜುಲೈ 15: ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣ ನಿವಾಸಿಯಾದ 28 ವರ್ಷದ ನಾಗರತ್ನ ಜಿ ಮೊಗೇರ ಅವರಿಗೆ ತಮ್ಮ ಸಮಯ ಪ್ರಜ್ಞೆಯಿಂದ ಮನೆಯಲ್ಲೇ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ 108 ಸಿಬ್ಬಂದಿ ನೆರವಾಗಿದ್ದಾರೆ.
ನಾಗರತ್ನ ಎನ್ನುವವರಿಗೆ ಇಂದು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಹೊನ್ನಾವರ 108 ಆಂಬುಲೆನ್ಸ್ ಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ 108 ಆಂಬುಲೆನ್ಸ್ ಸಿಬ್ಬಂದಿಗಳಾದ ಚಾಲಕ ಯಶೋಧರ ನಾಯ್ಕ ಹಾಗೂ ಶುಶ್ರೂಶಕಿ ಸಂಗೀತಾ ಗೌಡ ಮನೆಗೆ ಬಂದಿದ್ದಾರೆ.
ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ; ತಾಯಿ, ಮಗು ಸುರಕ್ಷಿತ
ಅದಾಗಲೇ ಹೆರಿಗೆ ನೋವಿನಿಂದ ಕೊನೆಯ ಹಂತಕ್ಕೆ ತಲುಪಿದ್ದ ನಾಗರತ್ನ ಅವರನ್ನು ಆಸ್ಪತ್ರೆಗೆ ಕರೆತರುವುದು ಕಷ್ಟಸಾಧ್ಯ ಎನ್ನುವ ವಿಷಯ ಅರಿತು ಮನೆಯಲ್ಲಿಯೇ ಶುಶ್ರೂಷಕಿ ಸಂಗೀತಾ ಅವರು ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಇದೀಗ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು ಹೆಚ್ಚಿನ ಆರೈಕೆಗೆ ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಿರುವ ಕೋವಿಡ್ ಪರಿಸ್ಥಿತಿಯಲ್ಲಿ ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಯೂ ಸೇವೆ ನೀಡುತ್ತಿರುವ 108 ಆಂಬುಲೆನ್ಸ್ ಸಿಬ್ಬಂದಿಯ ಈ ಕಾರ್ಯಕ್ಕೆ ತಾಲೂಕಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.