ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ ಕೇಳಿ ಬಂದ ಮತ್ತೊಂದು ಆರೋಪ!
ಬೆಂಗಳೂರು, ಅ. 12: ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅತ್ಯಾಪ್ತರಾಗಿದ್ದ ಜಮೀರ್ ಅಹ್ಮದ್ ನಂತರ ಬೇರೆಯಾಗಿದ್ದು ಬೇರೆ ವಿಚಾರ. ಆದರೆ ಸದಾಶಿವನಗರದಲ್ಲಿ ಜಮೀರ್ ಅವರಿಗೆ ಸೇರಿದ್ದ ಗೆಸ್ಟ್ಹೌಸ್ ವಿಚಾರವಾಗಿ ಬಹಿರಂಗ ರಾದ್ದಾಂತವಾಗಿತ್ತು. ಇದೀಗ ಮತ್ತದೆ ಸದಾಶಿವನಗರದ ಗೆಸ್ಟ್ಹೌಸ್ ಚರ್ಚೆಗೆ ಬಂದಿದೆ. ಬೆಂಗಳೂರಿನ ಸದಾಶಿವನಗರದ ಗೆಸ್ಟ್ಹೌಸ್ಗೆ ಸಂಬಂಧಿಸಿದಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮೇಲೆ ಗಂಭೀರ ಆರೋಪ ಬಂದಿದೆ.
ಶಾಸಕ ಜಮೀರ್ ಅಹ್ಮದ್ಗೆ ಸೇರಿರುವ ಬೆಂಗಳೂರಿನ ಸದಾಶಿವನಗರದ ರಂಕಾ ಎನ್ಕ್ಲೇವ್ ಅಪಾರ್ಟಮೆಂಟ್ನ ಫ್ಲ್ಯಾಟ್ಗೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಿನಲ್ಲಿ ಜಮೀರ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ಜಟಾಪಟಿಯಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಫ್ಲ್ಯಾಟ್ನ್ನು ಗೆಸ್ಟ್ಹೌಸ್ನಂತೆ ಉಪಯೋಗಿಸುತ್ತಿದ್ದರು. ಅದಾದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಗೆಸ್ಟ್ಹೌಸ್ನಂತೆ ಉಪಯೋಗಿಸುತ್ತಿದ್ದ ಫ್ಲ್ಯಾಟ್ನ್ನು ಖಾಲಿ ಮಾಡಿದ್ದರು. ಫ್ಲ್ಯಾಟ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಆರೋಪ ಶಾಸಕ ಜಮೀರ್ಗೆ ಎದುರಾಗಿದೆ.
ನಿಖಿಲ್ ಹಾಗೂ ಜಮೀರ್ ಬೆಂಬಲಿಗರ ಮಧ್ಯೆ ನಡೆದಿತ್ತು ಜಟಾಪಟಿ!
ಸದಾಶಿವನಗರದ ಅಪಾರ್ಟಮೆಂಟ್ನ ಫ್ಲ್ಯಾಟ್ ಮಾಜಿ ಸಿಎಂ ಎಚ್ಡಿಕೆ ಸುಪರ್ದಿಯಲ್ಲಿದ್ದಾಗ, ಕಳೆದ ಜೂನ್ ತಿಂಗಳಿನಲ್ಲಿ ಅಲ್ಲಿ ಹೈಡ್ರಾಮಾ ನಡೆದಿತ್ತು. ಗೆಸ್ಟ್ಹೌಸ್ ಖಾಲಿ ಮಾಡುವ ವಿಚಾರದಲ್ಲಿ ಜಮೀರ್ ಅಹ್ಮದ್ ಹಾಗೂ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ನಡುವೆ ಜಟಾಪಟಿ ಆಗಿತ್ತು. ಅದಾದ ಬಳಿಕ ಜಮೀರ್ ಅಹ್ಮದ್ ಗೆಸ್ಟ್ಹೌಸ್ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಬಳಿಕ ವಿವಾದ ತಣ್ಣಗಾಗಿತ್ತು. ಆದರೆ ಸದಾಶಿವನಗರದ ಗೆಸ್ಟ್ಹೌಸ್ಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಶಾಸಕ ಜಮೀರ್ ಅಹ್ಮದ್ ಅವರ ವಿರುದ್ಧ ಕೇಳಿ ಬಂದಿದೆ.
ನಿರ್ವಹಣಾ ವೆಚ್ಚವನ್ನೇ ಕೊಡದ ಶಾಸಕ ಜಮೀರ್?
ಕಳೆದ 9 ವರ್ಷಗಳಿಂದ ಸದಾಶಿನಗರದ ರಂಕಾ ಅಪಾರ್ಟಮೆಂಟ್ ಉಪಯೋಗಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಫ್ಲ್ಯಾಟ್ ನಿರ್ವಹಣಾ ವೆಚ್ಚವನ್ನೇ ಭರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಂಕಾ ಎನ್ಕ್ಲೇವ್ ಅಪಾರ್ಟಮೆಂಟ್ ಓನರ್ ಅಸೋಸಿಯೇಷನ್ ಗಂಭೀರ ಆರೋಪ ಮಾಡಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕಳೆದ 2012ರಿಂದ ಫ್ಲ್ಯಾಟ್ ನಿರ್ವಹಣಾ ಹೆಚ್ಚವನ್ನು ಕೊಟ್ಟಿಲ್ಲ ಎಂದಿದ್ದಾರೆ. ಈ ಕುರಿತು ಫ್ಲ್ಯಾಟ್ ಮಾಲೀಕರ ಸಂಘವು ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಪತ್ರ ಬರೆದಿದೆ.
|
ಎಷ್ಟು ವೆಚ್ಚ ಭರಿಸಬೇಕಿದೆ ಶಾಸಕ ಜಮೀರ್?
2012ರಿಂದ ಇಲ್ಲಿಯವರೆಗೆ ಫ್ಲ್ಯಾಟ್ ನಿರ್ವಹಣಾ ವೆಚ್ಚ 6,79,500 ರೂಪಾಯಿಗಳನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಭರಿಸಬೇಕಾಗಿತ್ತು. ಆದರೆ ಹಲವು ಬಾರಿ ಈ ಬಗ್ಗೆ ತಿಳಿಸಿದ್ದರೂ ವೆಚ್ಚ ಭರಿಸಿಲ್ಲ ಎಂದು ಅಪಾರ್ಟಮೆಂಟ್ ಓನರ್ ಅಸೋಸಿಯೇಷನ್ ಆರೋಪಿಸಿದೆ. ಈ ಹಿಂದೆ ಫ್ಲ್ಯಾಟ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸುಪರ್ದಿಯಲ್ಲಿ ಇದ್ದುದ್ದರಿಂದ ವೆಚ್ಚ ಭರಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಜಟಾಪಟಿ ಬಳಿಕ ಫ್ಲ್ಯಾಟ್ ಖಾಲಿ ಮಾಡಿದ್ದ ಎಚ್ಡಿಕೆ!
ಎಚ್.ಡಿ. ಕುಮಾರಸ್ವಾಮಿ ಅವರು 2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಆಗ ಅವರ ಆಪ್ತ ವಲಯದಲ್ಲಿದ್ದ ಜಮೀರ್ ಅಹ್ಮದ್ ಖಾನ್ ಅವರು ಸದಾಶಿವ ನಗರದ ತಮ್ಮ ಅತಿಥಿ ಗೃಹವನ್ನು ಬಿಟ್ಟು ಕೊಟ್ಟಿದ್ದರು. ಇಬ್ಬರೂ ನಾಯಕರ ಬಾಂಧವ್ಯದಲ್ಲಿ ಬಿರುಕು ಉಂಟಾದಾಗ ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಗೆಸ್ಟ್ಹೌಸ್ನಿಂದ ಕುಮಾರಸ್ವಾಮಿ ದೂರವಿದ್ದರು. ಆದರೆ ಗೆಸ್ಟ್ಹೌಸ್ ಮಾಜಿ ಸಿಎಂ ಕುಮಾರಸ್ವಾಮಿ ಅವರ ಸುಪರ್ದಿಯಲ್ಲಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಅತಿಥಿಗೃಹ ಖಾಲಿ ಮಾಡಲು ಎರಡು ದಿನಗಳ ಕಾಲಾವಕಾಶವನ್ನು ಕೇಳಿದ್ದರು.
ಆಗ ಸದಾಶಿವ ನಗರದ ಗೆಸ್ಟ್ಹೌಸ್ಗೆ ನಿಖಿಲ್ ಕುಮಾರಸ್ವಾಮಿ ಗನ್ಮ್ಯಾನ್ಗಳು ಪ್ರವೇಶ ಮಾಡಿದ್ದರು. ಗನ್ಮ್ಯಾನ್ಗಳು ಕೀಲಿ ಮುರಿದು ಒಳನುಗ್ಗಿದ್ದರು, ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ದೂರು ಕೇಳಿ ಬಂದಿತ್ತು.
Recommended Video