ದೇವೇಗೌಡ್ರ ತುಂಬಿದ ಕುಟುಂಬಕ್ಕೆ ಹುಳಿ ಹಿಂಡಿದ ಜಮೀರ್ ಅಹ್ಮದ್ ಖಾನ್!
ಬೆಂಗಳೂರು, ಅ 19: ಉಪ ಚುನಾವಣೆಯ ಹೊಸ್ತಿಲಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಮುಂದಾಗಿರುವ ಪಕ್ಷ ಯಾವುದು? ಕಾಂಗ್ರೆಸ್ಸೋ ಅಥವಾ ಜೆಡಿಎಸ್ಸೋ? ಈ ಪ್ರಶ್ನೆ ಆ ಸಮುದಾಯಕ್ಕೆ ಕಾಡುವಂತೆ ಮಾಡಿದ್ದು ಎರಡು ಪಕ್ಷದ ನಾಯಕರ ಆರೋಪ/ಪ್ರತ್ಯಾರೋಪದಿಂದಾಗಿ..
ಸಾರ್ವಜನಿಕ ಜೀವನದಲ್ಲಿ ಇರುವವರು ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯ ಮಾತಿನಂತೆ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾತಿನ ಭರದಲ್ಲಿ ಅನಾವಶ್ಯಕವಾಗಿ ಮಾಜಿ ಪ್ರಧಾನಿ ದೇವೇಗೌಡ್ರ ಕುಟುಂಬದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಉಪ ಚುನಾವಣೆ: ಕಾಂಗ್ರೆಸ್ 'ಮೈಂಡ್ ರೀಡಿಂಗ್' ಸರಿಯಾಗಿ ಅರಿತ ಬಿಜೆಪಿ
ಮುಸ್ಲಿಂ ಸಮುದಾಯದ ಮತವನ್ನು ಚುನಾವಣೆಯ ಸಂದರ್ಭದಲ್ಲಿ ವೋಟ್ ಬ್ಯಾಂಕ್ ಆಗಿ ಪರಿಗಣಿಸುವ ವಿಚಾರ ಬಂದಾಗ, ಸ್ವಾಭಾವಿಕವಾಗಿ ಬಿಜೆಪಿ ಈ ಪಟ್ಟಿಯಲ್ಲಿ ಬರುವುದಿಲ್ಲ. ಹಾಗಾಗಿ, ಚುನಾವಣೆಯ ವೇಳೆ ಪ್ರಾಮುಖ್ಯತೆಯನ್ನು ಪಡೆಯುವ ಈ ಜಾತಿಯ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ.
ಮುಸ್ಲಿಮರಿಗೆ ಸಿಗಬೇಕಾಗಿರುವ ಪ್ರಾತಿನಿಧ್ಯತೆ ಕಾಂಗ್ರೆಸ್ ಪಕ್ಷದಲ್ಲಿ ಸಿಗಲಿಲ್ಲ ಎಂದು ಮೊದಲು ಆರೋಪಿಸಲು ಆರಂಭಿಸಿದವರು, ಈಗ, ಅದೇ ಪಕ್ಷದಲ್ಲಿದ್ದರೂ ಒಂದು ಹೆಜ್ಜೆ ಹೊರಗಿಟ್ಟಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು. ಮುಸ್ಲಿಮರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ನೋಡುತ್ತಿದೆ ಎಂದು ಎಚ್ದಿಕೆ ಆರಂಭಿಸಿದ ಮಾತಿನ ಸಮರಕ್ಕೆ ಉತ್ತರ ನೀಡುವ ವೇಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಬಗ್ಗೆ ಮಾತನಾಡಿದ್ದಾರೆ.
ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ವಿಚಾರ: ಎಚ್ಡಿಕೆ ಬದ್ಧತೆ ಪ್ರಶ್ನಿಸಿದ ಸ್ವಪಕ್ಷೀಯ ಶಾಸಕ
ಇಬ್ರಾಹಿಂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತು
'ದೇವೇಗೌಡ್ರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಸಿಕ್ಕಿತ್ತು, ಆ ವೇಳೆ ಇಬ್ರಾಹಿಂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತು. ಪದ್ಮನಾಭನಗರದಲ್ಲಿ ಇರುವವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಲ್ಪಸಂಖ್ಯಾತರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಕುಮಾರಸ್ವಾಮಿಯವರು ಚುನಾವಣೆಗೆ ಸ್ಪರ್ಧಿಸಿದರು. ಒಂದರಲ್ಲಿ ಸ್ಪರ್ಧಿಸಿ, ಇನ್ನೊಂದರಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬಹುದಿತ್ತಲ್ಲವೇ" ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.
ಜಾಫರ್ ಷರೀಫ್ ಕುಟುಂಬಕ್ಕೆ ರಾಜಕೀಯವಾಗಿ ಹಿನ್ನಡೆ ತಂದವರು ಯಾರು
"ಜಾಫರ್ ಷರೀಫ್ ಕುಟುಂಬಕ್ಕೆ ರಾಜಕೀಯವಾಗಿ ಹಿನ್ನಡೆ ತಂದವರು ಯಾರು. ಎರಡು ಬಾರಿ ಕುಮಾರಸ್ವಾಮಿಯವರು ಸಿಎಂ ಆದರು, ಎಷ್ಟು ಜನರನ್ನು ಸಚಿವರನ್ನಾಗಿ ಅಥವಾ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರು. ನನ್ನನ್ನು ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಜೆಡಿಎಸ್ ಪಕ್ಷವಲ್ಲ. ನನ್ನನ್ನು ಬಿಡಿ, ಕಾರ್ಯಕರ್ತರನ್ನು ಮೇಲೆ ತಂದಿಲ್ಲ, ಒಕ್ಕಲಿಗ ಸಮುದಾಯದವರನ್ನೂ ಅವರು ಬೆಳೆಯಲು ಬಿಡುವುದಿಲ್ಲ" ಎಂದು ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ.
ಎಚ್.ಡಿ.ರೇವಣ್ಣ ಅವರು ಉಪ ಮುಖ್ಯಮಂತ್ರಿ ಆಗಿ ಬಿಡುತ್ತಾರೋ ಎನ್ನುವ ಭಯ ಎಚ್ಡಿಕೆಗೆ
"ಕುಮಾರಸ್ವಾಮಿಯವರನ್ನು ನಾನು ಹತ್ತಿರದಿಂದ ನೋಡಿದವನು, ಅವರು ಲಾಭ ಇಲ್ಲದಿದ್ದರೆ ಏನನ್ನೂ ಮಾಡುವುದಿಲ್ಲ. ಇಷ್ಟೇ ಏಕೆ, ಎಚ್.ಡಿ.ರೇವಣ್ಣ ಅವರು ಉಪ ಮುಖ್ಯಮಂತ್ರಿ ಆಗಿ ಬಿಡುತ್ತಾರೋ ಎನ್ನುವ ಭಯ ಅವರಲ್ಲಿತ್ತು. ಸ್ವಂತ ಅಣ್ಣನೇ ಮೇಲೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಟ್ವೆಂಟಿ ಟ್ವೆಂಟಿ ಸರಕಾರವಿದ್ದಾಗ, ರೇವಣ್ಣ ಅವರನ್ನು ಡಿಸಿಎಂ ಮಾಡಬೇಕೆಂದು, ಬಿಜೆಪಿಗೆ ಅಧಿಕಾರವನ್ನು ಕುಮಾರಸ್ವಾಮಿ ಬಿಟ್ಟುಕೊಟ್ಟಿರಲಿಲ್ಲ" ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಜಮೀರ್ ಆರೋಪಕ್ಕೆ ಎಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರಿಗೆ ತಿರುಗೇಟು ನೀಡಿದ ರೇವಣ್ಣ
"ನನ್ನ ಸುದ್ದಿಗೆ ಬರುವುದು ಬೇಡ, ಉಪ ಮುಖ್ಯಮಂತ್ರಿ ಆಗಬೇಕೋ, ಬೇಡವೋ ಎನ್ನುವುದು ಅವರಿಗೆ ಬಿಟ್ಟ ವಿಚಾರವಲ್ಲ. ಸಿಎಂ ಆಗಬೇಕೋ ಅಥವಾ ಡಿಸಿಎಂ ಆಗಬೇಕೋ ಎನ್ನುವುದನ್ನು ನಾವಿಬ್ಬರು ಮಾತನಾಡಿ ನಿರ್ಧರಿಸುತ್ತೇವೆ. ಕುಮಾರಣ್ಣ ಏನೆಂದು ನನಗೆ ಗೊತ್ತಿದೆ, ನಾನು ಏನೆಂದು ಕುಮಾರಣ್ಣನಿಗೆ ಗೊತ್ತಿದೆ. ಕಾಲ ಬಂದಾಗ ನನ್ನನ್ನು ಸಿಎಂ ಮಾಡುತ್ತಾನೆ, ಅದರ ಚಿಂತೆ ಅವರಿಗೆ ಬೇಡ" ಎಂದು ಎಚ್.ಡಿ.ರೇವಣ್ಣ ಹೇಳುವ ಮೂಲಕ, ನಮ್ಮಿಬ್ಬರ ನಡುವೆ ತಂದಿಡುವ ಕೆಲಸವನ್ನು ಮಾಡಬೇಡಿ ಎಂದು ಜಮೀರ್ ಅಹ್ಮದ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.
Recommended Video