ಹಜ್ ಭವನಕ್ಕೆ ಟಿಪ್ಪು ಹೆಸರು : ಸ್ಪಷ್ಟನೆ ನೀಡಿದ ಜಮೀರ್ ಅಹಮದ್
ಬೆಂಗಳೂರು, ಜೂನ್ 25 : 'ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ನಾನು ಸಲಹೆ ನೀಡಿಲ್ಲ. ಬಿಜೆಪಿಯವರು ಸಲಹೆ ನೀಡಿದ ಹೆಸರನ್ನು ಸರ್ಕಾರ ಪರಿಗಣಿಸಲಿದೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದರು.
ಸೋಮವಾರ ರಾತ್ರಿ ಮುಸ್ಲಿಂ ಶಾಸಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್, 'ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕು ಎಂದು ಸಲಹೆ ನೀಡಿಲ್ಲ' ಎಂದರು.
ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಿ
'ನಮ್ಮ ಸಮುದಾಯದ ನಾಯಕರ ಅಭಿಪ್ರಾಯವನ್ನು ನಾನು ಸರ್ಕಾರಕ್ಕೆ ತಿಳಿಸಿದ್ದೆ. ಟಿಪ್ಪು ಸುಲ್ತಾನ್ ಹೆಸರು ಇಡಬೇಕು ಎಂದು ಸಲಹೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು.
'ಬಿಜೆಪಿಯವರು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹೆಸರಿಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಸರ್ಕಾರ ಪರಿಗಣಿಸಲಿದೆ. ಈ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ' ಎಂದು ಹೇಳಿದರು.
ಹಜ್ ಘರ್ಗೆ ಟಿಪ್ಪು ಸುಲ್ತಾನ್ ಹೆಸರು: ವಿವಾದಕ್ಕೆ ಮುನ್ನುಡಿ?
ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವುದಕ್ಕೆ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ನಾನು ಒಂದು ವಿಷಯ ಹೇಳುತ್ತೇನೆ. ಅವರು ಅದಕ್ಕೆ ಅಬ್ದುಲ್ ಕಲಾಂ ಅವರ ಹೆಸರನ್ನಿಡಲಿ" ಎಂದು ಹೇಳಿದ್ದರು.