ಪೊಲೀಸರಿಗೆ 'ಯುವ ಬ್ರಿಗೇಡ್' ಉಪನ್ಯಾಸ, ತನಿಖೆಗೆ ಸೂಚಿಸಿದ ಎಡಿಜಿಪಿ
ಬೆಂಗಳೂರು, ನವೆಂಬರ್ 13: ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ 'ಯುವ ಬ್ರಿಗೇಡ್' ಸಂಚಾಲಕರು ಉಪನ್ಯಾಸ ನೀಡಿದ ಸಂಬಂಧ ತನಿಖೆಗೆ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಎಡಿಜಿಪಿ ಸೌಮೇಂದು ಮುಖರ್ಜಿ ಸೂಚಿಸಿದ್ದಾರೆ.
ಹೊಸಪೇಟೆಯ ಗೃಹರಕ್ಷಕ ದಳದ ಕಚೇರಿಯಲ್ಲಿ ಸಿಬ್ಬಂದಿಗಳನ್ನುದ್ದೇಶಿಸಿ ಯುವ ಬ್ರಿಗೇಡ್ನ ತಾಲೂಕು ಸಂಚಾಲಕ ಚಂದ್ರಶೇಖರ್ ಉಪನ್ಯಾಸ ನೀಡಿದ್ದರು. ನೀರಿನ ಬಳಕೆ ಮತ್ತು ರಾಷ್ಟ್ರೀಯತೆ ಬಗ್ಗೆ ನೀಡಿದ ಈ ಉಪನ್ಯಾಸ ವಿವಾದ ಹುಟ್ಟುಹಾಕಿತ್ತು.
ಇದೀಗ 'ಈ ಸಂಬಂಧ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಎಡಿಜಿಪಿ ಸೌಮೇಂದು ಮುಖರ್ಜಿ ಪ್ರಮುಖ ದಿನಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ಅಪರಾಧ ಹಿನ್ನೆಲೆಯುಳ್ಳವರಿಂದ ಉಪನ್ಯಾಸ ಕೊಡಿಸಿರುವುದುಸೂಕ್ಷ್ಮ ವಿಷಯ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ," ಎಂದು ಅವರು ಹೇಳಿದ್ದು "ಈ ಬಗ್ಗೆ ಉನ್ನತ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಅವರ ಸೂಚನೆ ಪಡೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ," ಎಂದು ಹೇಳಿದ್ದಾರೆ.
ಯುವ ಬ್ರಿಗೇಡ್
ಚಕ್ರವರ್ತಿ ಸೂಲಿಬೆಲೆ ಈ ಯುವ ಬ್ರಿಗೇಡ್ ಮಾರ್ಗದರ್ಶಕರಾಗಿದ್ದಾರೆ. ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಇದೇ ಯುವ ಬ್ರಿಗೇಡ್ ಸಂಸ್ಥಾಪಕರಾಗಿದ್ದಾರೆ.