ಟಿವಿಗಳ ಸುಳ್ಳು ಸುದ್ದಿಗೆ ಟ್ವೀಟ್ ಬಾಣ ಬಿಟ್ಟ ದತ್ತಾ!
ಬೆಂಗಳೂರು, ಡಿಸೆಂಬರ್ 01 : "ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ?, ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ" ಎಂದು ಜೆಡಿಎಸ್ ನಾಯಕ ವೈ. ಎಸ್. ವಿ. ದತ್ತಾ ಟಿವಿಗಳ ಸುಳ್ಳುಸುದ್ದಿಗೆ ಟ್ವೀಟ್ ಬಾಣ ಬಿಟ್ಟಿದ್ದಾರೆ.
ಕಡೂರು ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ವೈ. ಎಸ್. ವಿ. ದತ್ತಾ ಮಂಗಳವಾರ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ದತ್ತಾ ಅವರು ಜೆಡಿಎಸ್ ಪಕ್ಷ ತೊರೆಯಲಿದ್ದಾರೆ ಎಂಬ ಕೆಲವು ಟಿವಿ ವಾಹಿನಿಗಳ ಸುದ್ದಿಗಳಿಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಅನುದಾನ ಬಳಕೆಯಲ್ಲಿ ದತ್ತಾ ಮುಂದೆ, ಸಿ.ಟಿ. ರವಿ ಹಿಂದೆ
ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ವೈ. ಎಸ್. ವಿ. ದತ್ತಾ, "ಮೊನ್ನೆ ಪಕ್ಷ ಸಂಘಟನೆ ಬಗ್ಗೆ, ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ" ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ; ಜೆಡಿಎಸ್ ಮಹತ್ವದ ನಡೆ
"ನಿನ್ನೆ ರಾತ್ರಿ ತಾನೇ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ" ಎಂದು ಟ್ವೀಟ್ನಲ್ಲಿ ವೈ. ಎಸ್. ವಿ. ದತ್ತಾ ಸ್ಪಷ್ಟನೆಯನ್ನು ನೀಡಿದ್ದಾರೆ.
ಜೆಡಿಎಸ್ ಪಕ್ಷ ಬಿಡುವ ಕುರಿತು ದೇವೇಗೌಡರ ಸ್ಪಷ್ಟನೆ
"ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಒಂದು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ" ಎಂದು ಟ್ವೀಟ್ನಲ್ಲಿ ದತ್ತಾ ಹೇಳಿದ್ದಾರೆ.
ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ?? ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. @JanataDal_S ಪಕ್ಷ ಸಂಘಟನೆ ಕಡೆ ಗಮನ ಕೊಡೋಣ.ಮೊನ್ನೆ ಪಕ್ಷ ಸಂಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ. 2/2
— YSV Datta (@YSV_Datta) December 1, 2020
Recommended Video
2018ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ವೈ. ಎಸ್. ವಿ. ದತ್ತಾ 46,860 ಮತಗಳನ್ನು ಪಡೆದು ಬಿಜೆಪಿಯ ಕೆ. ಎಸ್. ಪ್ರಕಾಶ್ ವಿರುದ್ಧ ಸೋಲು ಕಂಡಿದ್ದಾರೆ. ಅಂದಿನಿಂದಲೂ ಅವರು ಜೆಡಿಎಸ್ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ಬಾರಿಯೂ ದತ್ತಾ ಈ ಸುದ್ದಿಗಳಿಗೆ ಸ್ಪಷ್ಟನೆಯನ್ನು ಕೊಡುತ್ತಾರೆ.