ದೇವೇಗೌಡರ ಇಬ್ಬರು ಅತೃಪ್ತ ಮಾನಸಪುತ್ರರ ಮುಂದಿನ ನಡೆ ಏನು?
Recommended Video
ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಗೆ ಬುಧವಾರ ಮಧ್ಯಾಹ್ನ 2.12ರ ಸಮಯ (ಕನ್ಯಾ ಲಗ್ನ) ನಿಗದಿಯಾಗಿದೆ. ಜ್ಯೋತಿಷಿಗಳಿಂದ ಅಳೆದುತೂಗಿ, ಅಮೃತಗಳಿಗೆಗಾಗಿ ಕೂಡಿಸಿ, ಭಾಗಿಸಿ, ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮವನ್ನು ಹನ್ನೆರಡು ನಿಮಿಷ ಮುಂದೂಡುವಲ್ಲಿ ಭಾವೀ ಸಚಿವ ಎಚ್ ಡಿ ರೇವಣ್ಣ ಯಶಸ್ವಿಯಾಗಿದ್ದಾರೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ಜೆಡಿಎಸ್ ಶಾಸಕರ ಪಟ್ಟಿಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮಾನಸಪುತ್ರರೆಂದೇ ಕರೆಯಲ್ಪಡುತ್ತಿದ್ದ ಇಬ್ಬರ ಹೆಸರು ಇಲ್ಲ. ಬಿಎಸ್ಪಿಯ ಮಹೇಶ್ ಹೊರತು ಪಡಿಸಿ, ಬಹುತೇಕ ಫೈನಲ್ ಆಗಿರುವ ಎಂಟು ಶಾಸಕರು ರಾಜಕೀಯ ಜೀವನದಲ್ಲಿ ಹೊಸಹೆಜ್ಜೆಯಿಡಲು ಸಜ್ಜಾಗುತ್ತಿದ್ದಾರೆ.
ಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನ
ಪ್ರಮಾಣವಚನ ಸ್ವೀಕರಿಸುತ್ತಿರುವ ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳುತ್ತಾ, ದೇವೇಗೌಡರ ಅತ್ಯಂತ ಪರಮಾಪ್ತ ವೈಎಸ್ವಿ ದತ್ತ ಮತ್ತು ಗೌಡ್ರಿಗೆ ಊರುಗೋಲಿನಂತಿದ್ದ ಟಿ ಎ ಶರವಣ, ಈ ಇಬ್ಬರ ಹೆಸರೂ ಸಚಿವರಾಗುವ ಪಟ್ಟಿಯಲ್ಲಿಲ್ಲ. ತಮ್ಮನ್ನು ನಂಬಿದ್ದ ಇವರಿಬ್ಬರಿಗೂ ಸಚಿವ ಸ್ಥಾನ ಕೊಡಿಸುವುದು ಗೌಡರಿಗೆ ದೊಡ್ಡ ವಿಚಾರವೇನೂ ಆಗಿರಲಿಲ್ಲ, ಆದರೆ ಆ ರೀತಿ ಆಗಲಿಲ್ಲ.
ಹಾಗಾಗಿ, ಸ್ವಾಭಾವಿಕವಾಗಿ ಇವರಿಬ್ಬರು ಬೇಸರಿಸಿಕೊಳ್ಳದೇ ಇರುತ್ತಾರಾ, ಬೇಸರಿಸಿಕೊಂಡಿದ್ದಾರೆ. ಇಬ್ಬರೂ ಗೌಡರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಗೌಡರ ಸಮಜಾಯಿಷಿ ಇಬ್ಬರನ್ನೂ ಸಮಾಧಾನ ಪಡಿಸಲು ಆಗಲಿಲ್ಲ. ಆದುದರಿಂದ ದತ್ತ ಮತ್ತು ಶರವಣ ಇಬ್ಬರೂ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ
ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದಲ್ಲಿ ವೈಎಸ್ವಿ ದತ್ತ ಪರಾಭವಗೊಂಡ ನಂತರ ಪಕ್ಷಾತೀತವಾಗಿ ಅವರ ಸೋಲಿಗೆ ಬೇಸರಿಸಿಕೊಂಡವರು ಬಹಳಷ್ಟು ಮಂದಿ. ಯಾಕೆಂದರೆ ಅವರ ಸರಳತೆ ಮತ್ತು ಕ್ಲೀನ್ ಇಮೇಜ್. ಹಾಗಿದ್ದಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬಹುದ್ದಿತ್ತಲ್ಲಾ ಎನ್ನುವ ಪ್ರಶ್ನೆಗೆ, ನಮ್ಮ ರಾಜಕೀಯ ವ್ಯವಸ್ಥೆಯೇ ಇದಕ್ಕೆ ಉತ್ತರ ಕೊಡಬೇಕು. ಇವರಿಬ್ಬರ ಮುಂದಿನ ನಡೆ ಏನಿರಬಹುದು, ಮುಂದೆ ಓದಿ..
ನಮ್ಮಲ್ಲಿರುವ ಏಕೈಕ ಬ್ರಾಹ್ಮಣ ಮುಖಂಡ. ಅವರನ್ನು ಬಿಟ್ಟು ನಾನೆಲ್ಲಿಗೆ ಹೋಗಲಿ
ವರ್ಷಗಳ ಹಿಂದೆ ಮಾಧ್ಯಮದವರು, ದತ್ತ ಅವರಿಗೆ ಟಿಕೆಟ್ ನೀಡುವುದಿಲ್ಲವಂತೇ ಹೌದಾ ಎನ್ನುವ ಪ್ರಶ್ನೆಗೆ ಗೌಡ್ರು, 'ನಮ್ಮಲ್ಲಿರುವ ಏಕೈಕ ಬ್ರಾಹ್ಮಣ ಮುಖಂಡ. ಅವರನ್ನು ಬಿಟ್ಟು ನಾನೆಲ್ಲಿಗೆ ಹೋಗಲಿ' ಎನ್ನುವ ಹೇಳಿಕೆಯನ್ನು ನೀಡಿದ್ದರು. ಅದರಂತೇ, ಜೆಡಿಎಸ್ ಟಿಕೆಟ್ ಅನ್ನು ದತ್ತ ಅವರಿಗೆ ನೀಡಲಾಗಿತ್ತು. ಈಗೇನು ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತೋ, ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚುಕಮ್ಮಿ ದತ್ತಾ ಪಡೆದಷ್ಟೇ ಮತವನ್ನು ಪಡೆದು, ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಗೆ ಗೆಲುವನ್ನು ಅನಾಯಾಸ ಮಾಡಿಕೊಟ್ಟಿದ್ದರು.
ಆರ್ಯವೈಶ್ಯ ಸಮುದಾಯದ ಟಿ ಎ ಶರವಣ
ಚಿನ್ನದ ವ್ಯಾಪಾರಿಯಾಗಿರುವ ಮತ್ತು ಆರ್ಯವೈಶ್ಯ ಸಮುದಾಯದ ಟಿ ಎ ಶರವಣ, ಗೌಡರ ಕುಟುಂಬದ ಸದಸ್ಯರಂತೆ ಅವರಿಗೆ ಹತ್ತಿರವಾಗಿದ್ದವರು. ಗೌಡರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಕ್ಷರಸಃ ಊರುಗೋಲಿನಂತೆ ಶರವಣ ಇದ್ದರು. ಅವರೇ ಹೇಳುವಂತೆ, ಇಂದಿರಾ ಕ್ಯಾಂಟೀನ್ ನಾಚಿಸುವಂತೆ ಕಡಿಮೆ ದರದಲ್ಲಿ ಅಪ್ಪಾಜಿ ಕ್ಯಾಂಟೀನ್ ಸ್ಥಾಪಿಸಿದರು. ಅವರ ತಂದೆಯ ಹೆಸರು ಇಡದೇ ಗೌಡ್ರಗೆ ಗೌರವ ಸೂಚಿಸುವ ಹೆಸರನ್ನಿಟ್ಟರು. ಈಗ ತನ್ನ ಹೆಸರು ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿಯಲ್ಲಿ ಇಲ್ಲದೇ ಇರುವುದರಿಂದ ಶರವಣ ತೀವ್ರ ಬೇಸರಗೊಂಡಿದ್ದಾರೆ.
ದತ್ತ ಮತ್ತು ಶರವಣ ಅವರ ಮುಂದಿನ ನಡೆ ಏನಿರಬಹುದು
ದತ್ತ ಮತ್ತು ಶರವಣ ಅವರ ಮುಂದಿನ ನಡೆ ಏನಿರಬಹುದು? ಕುಮಾರಸ್ವಾಮಿಯವರಿಂದ ತೆರವಾಗಿರುವ ರಾಮನಗರ ಕ್ಷೇತ್ರದಿಂದ ದತ್ತ ಅವರನ್ನು ಕಣಕ್ಕಿಳಿಸಿ ಎನ್ನುವ ಕೂಗು ಸಾಮಾಜಿಕ ತಾಣದಲ್ಲಿ ಕೇಳಿ ಬರುತ್ತಿದೆ. ಅಲ್ಲಿಂದ ಮಧು ಬಂಗಾರಪ್ಪನವರ ಹೆಸರೂ ಕೇಳಿಬರುತ್ತಿದೆ, ಜೊತೆಗೆ ಅನಿತಾ ಕುಮಾರಸ್ವಾಮಿಯವರ ಹೆಸರೂ ದಟ್ಟವಾಗಿ ಕೇಳಿಬರುತ್ತಿದೆ. ದತ್ತ ಅವರಿಗೆ ರಾಮನಗರದಿಂದ ಟಿಕೆಟ್ ಸಿಗುತ್ತಾ ಎನ್ನುವ ಪ್ರಶ್ನೆಗೆ ನೂರರಲ್ಲಿ ಹತ್ತರಷ್ಟೂ ಚಾನ್ಸ್ ಕಮ್ಮಿ ಎನ್ನಬಹುದು.
ಸಮಾಧಾನ ಪಡಿಸಲು ಇದೇ ತಂತ್ರವನ್ನು ಜೆಡಿಎಸ್ ಬಳಸಬಹುದು
ವಿಧಾನಪರಿಷತ್ ಸದಸ್ಯರಾಗಿರುವ ಶರವಣ, ಕನಿಷ್ಠ ಪಾರ್ಟಿ ಮೀಟಿಂಗುಗೂ ಕರೆದಿಲ್ಲ ಎನ್ನುವ ಬೇಸರದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಗೌಡರಿಗೆ ಇವರು ತೋರಿಸಿದ ನಿಯತ್ತಿಗಾಗಿ, ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದರೂ ಮಾಡಬಹುದು. ದತ್ತ ಅವರನ್ನು ಸಮಾಧಾನ ಪಡಿಸಲು ಇದೇ ತಂತ್ರವನ್ನು ಜೆಡಿಎಸ್ ಬಳಸಬಹುದು.
ಗೌಡರು, ಹೇಗಾದರೂ ಮಾಡಿ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು
ಇದ್ಯಾವುದೂ ಆಗಿಲ್ಲದಿದ್ದ ಪಕ್ಷದಲ್ಲಿ, ರಾಜಕೀಯದಲ್ಲಿ ತಾವೂ ನೆಲೆಕಾಣಬೇಕು ಎನ್ನುವ ಕಾರಣಕ್ಕಾಗಿ ಇಬ್ಬರೂ ಕಮಲದತ್ತ ಮುಖ ಮಾಡಿದರೂ ಮಾಡಬಹುದು. ಕಾಂಗ್ರೆಸ್ ಜೊತೆ ಹೊಂದಾಣಿಕೆ ಇರುವುದರಿಂದ, ಮೈತ್ರಿ ಸರಕಾರದ ಆಯಸ್ಸು ಇರುವತನಕ ಆ ಪಕ್ಷಕ್ಕೆ ಹೋಗುವ ಸಾಧ್ಯತೆ ಕಮ್ಮಿ. ಆದರೂ, ತಮ್ಮ ಮೇಲೆ ತೋರಿದ ಇಷ್ಟೊಂದು ಪ್ರೀತಿ, ನಿಯತ್ತಿಗಾಗಿ ಗೌಡರು, ಹೇಗಾದರೂ ಮಾಡಿ ಇವರಿಬ್ಬರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು.