ಕಾಂಗ್ರೆಸ್ ನಾಯಕರಿಗೆ ಮುಜುಗರ: ರಾಹುಲ್ ರ್ಯಾಲಿಯಲ್ಲಿ ಮೋದಿಗೆ ಜೈಕಾರ!
ವಿಜಯಪುರ, ಫೆ 25: ಮುಂಬೈ ಕರ್ನಾಟಕ ಭಾಗದಲ್ಲಿ ಆರಂಭವಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣಕ್ಕೆ ದೊಡ್ಡ ಪ್ರಮಾಣದಲ್ಲಿ ಜನರನ್ನು ಕರೆತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದರೂ, ಸಾರ್ವಜನಿಕ ಸಭೆಯಲ್ಲಿ ಯುವಕರು ಮೋದಿ ಮಂತ್ರ ಜಪಿಸಿದ್ದು ಪಕ್ಷವನ್ನು ಮುಜುಗರಕ್ಕೀಡುಮಾಡಿತು.
ಬಸವಣ್ಣನವರ ವಚನವನ್ನು ಅಸ್ಪಷ್ಟ ಕನ್ನಡದಿಂದ ಉಲ್ಲೇಖಿಸಿ ನೆರೆದಿದ್ದ ಕೆಲವರಿಂದ ನಗೆಪಾಟಲಿಗೆ ಗುರಿಯಾದ ರಾಹುಲ್, ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿಯನ್ನು ತೆಗಳುವುದು, ಸಿಎಂ ಸಿದ್ದರಾಮಯ್ಯನವರನ್ನು ಹೊಗಳಲು ಮೀಸಲಿಟ್ಟರು.
ಚಿಕ್ಕಪಡಸಲಗಿ ಬ್ಯಾರೇಜ್ಗೆ ಬಾಗಿನ ಅರ್ಪಿಸಿದ ರಾಹುಲ್ ಗಾಂಧಿ
ಶನಿವಾರದ (ಫೆ 24) ವಿಜಯಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಮೋದೀಜಿ ಎಂದು ಹೇಳುತ್ತಿದ್ದಂತೇ ಯುವಕರಿಂದ ಭಾರೀ ಕರತಾಡನ ವ್ಯಕ್ತವಾಯಿತು. ಆಗ ರಾಹುಲ್ ಭಾಷಣ ಮಾಡುತ್ತಿದ್ದ ಪೋಡಿಯಂ ಪಕ್ಕನೇ ನಿಂತಿದ್ದ ಸಿದ್ದರಾಮಯ್ಯ ತಮ್ಮ ಎರಡೂ ಹೆಬ್ಬೆರಳನ್ನು ಕೆಳಗೆ ಮಾಡಿ (ಡೌನ್ ಡೌನ್ ಕೈಸನ್ನೆ) ಸಭಿಕರತ್ತ ತೋರಿದರು.
ಆಗ, ಯುವಕರು ಮೋದಿ..ಮೋದಿ.. ಎಂದು ಘೋಷಣೆಯನ್ನು ಇನ್ನೂ ಜೋರಾಗಿ ಕೂಗಲಾರಂಭಿಸಿದರು. ರಾಹುಲ್ ಕೆಲಕ್ಷಣ ಭಾಷಣ ನಿಲ್ಲಿಸಿ, ಅಸಾಹಯಕತೆಯಿಂದ ಘೋಷಣೆ ಕೂಗುತ್ತಿದ್ದ ಯುವಕರನ್ನು ದಿಟ್ಟಿಸಿ ನೋಡಿದರು. ಪಕ್ಕದಲ್ಲೇ ನಿಂತಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜನರನ್ನು ಸಮಾಧಾನವಾಗಿ ಇರುವಂತೆ ಸಭಿಕರಲ್ಲಿ ಮನವಿ ಮಾಡಿದರು.
ಚಿತ್ರಗಳು : ವಿಜಯಪುರದಲ್ಲಿ ರಾಹುಲ್ ಪ್ರವಾಸ
ನಗರದ ಗಾಂಧೀ ಚೌಕದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಾ, ಕರ್ನಾಟಕದಲ್ಲಿ ಯಡಿಯೂರಪ್ಪಜೀ ಜೈಲಿಗೆ ಹೋಗಿ ದಾಖಲೆ ನಿರ್ಮಿಸಿದ್ದಾರೆ. ಮೋದಿಜೀ ನುಡಿದಂತೆ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು. ಆಗ ಅಲ್ಲಿದ್ದ ಯುವಕರು ಮೋದಿ ಪರವಾಗಿ ಜೈಕಾರ ಹಾಕಲು ಶುರುಮಾಡಿದರು.
ಯುವಕರ ಮೋದಿ ಜೈಕಾರ, ಅಲ್ಲಿದ್ದ ಪರಮೇಶ್ವರ್, ಸಿದ್ದರಾಮಯ್ಯ, ಎಂ ಬಿ ಪಾಟೀಲ್, ಕೆ ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರನ್ನು ಮುಜುಗರಕ್ಕೀಡು ಮಾಡಿದಂತೂ ಹೌದು.