ಕರ್ನಾಟಕ-ಕೇರಳ ಗಡಿ ಬಂದ್: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಮಾರ್ಚ್ 5: ನೆರೆಯ ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಕರ್ನಾಟಕ-ಕೇರಳ ಗಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಸ್ತೆಗಳನ್ನು ಮುಚ್ಚುವಂತಿಲ್ಲ. ಅದರ ಬದಲು ಜನರನ್ನು ತಪಾಸಣೆ ನಡೆಸಲು ಮೂಲಸೌಕರ್ಯವನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿತು.
ಕೇರಳ ಗಡಿ ಬಂದ್; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
'ನೀವು ರಸ್ತೆಗಳನ್ನು ಮುಚ್ಚಿಸಿರುವಂತಿಲ್ಲ. ಅದರ ಬದಲಾಗಿ ಗಡಿಗಳಲ್ಲಿ ವ್ಯಕ್ತಿಗಳನ್ನು ಪರಿಶೀಲಿಸಲು ಮೂಲಸೌಕರ್ಯವನ್ನು ಸೃಷ್ಟಿಸಿ' ಎಂದು ನ್ಯಾಯಪೀಠ ಹೇಳಿತು. ಇದಕ್ಕೂ ಮುನ್ನ ಕರ್ನಾಟಕ ಸರ್ಕಾರದ ಕ್ರಮ ವಿರೋಧಿಸಿ ಕೇರಳ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಮುಂದೆ ಓದಿ.
ಗೃಹ ಸಚಿವಾಲಯದ ನಿಯಮಕ್ಕೆ ವಿರುದ್ಧ
ರಾಜ್ಯ ಸರ್ಕಾರದ ಕ್ರಮವು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್ಎ) 2021ರ ಜನವರಿ 27ರಂದು ಹೊರಡಿಸಿದ್ದ ಆದೇಶದ 8ನೇ ನಿಯಮಕ್ಕೆ ವಿರುದ್ಧವಾಗಿದೆ. ರಾಜ್ಯಗಳ ನಡುವೆ ಅಥವಾ ರಾಜ್ಯಗಳ ಒಳಗೆ ಜನರು ಹಾಗೂ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ಈ ನಿಯಮ ನಿರ್ದಿಷ್ಟವಾಗಿ ಉಲ್ಲೇಖಿಸಿದೆ ಎಂಬುದನ್ನು ಪೀಠ ಎತ್ತಿಹಿಡಿಯಿತು.
ಜನಸಾಮಾನ್ಯರಿಗೆ ಸಂಕಷ್ಟ
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಕರ್ನಾಟಕ ಸರ್ಕಾರ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಗಡಿಯಲ್ಲಿನ ಪ್ರಯಾಣ ನಿರ್ಬಂಧಗಳು ಎರಡೂ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ, ತಮ್ಮ ಜೀವನೋಪಾಯ, ಶಿಕ್ಷಣ, ವಾಣಿಜ್ಯ ಚಟುವಟಿಕೆ ಹಾಗೂ ಆರೋಗ್ಯಕ್ಕಾಗಿ ರಾಜ್ಯಗಳ ನಡುವೆ ರಸ್ತೆ ಮೂಲಕ ಪ್ರಯಾಣಿಸುವುದನ್ನು ಅವಲಂಬಿಸಿರುವ ಜನರಿಗೆ ತೊಂದರೆಯುಂಟುಮಾಡಿದೆ ಎಂದು ಅದರಲ್ಲಿ ಆರೋಪಿಸಲಾಗಿತ್ತು.
ಕರ್ನಾಟಕ ವಿರುದ್ಧದ ಕೇರಳದ ಆರೋಪಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯೆ
4 ಗಡಿ ಮಾತ್ರ ತೆರೆದಿವೆ
ಕರ್ನಾಟಕ ಮತ್ತು ಕೇರಳ ನಡುವೆ 25 ಗಡಿ ಪ್ರವೇಶಗಳಿವೆ. ಆದರೆ ಅವುಗಳಲ್ಲಿ ಕೇವಲ ನಾಲ್ಕು ಗಡಿಗಳು ಪ್ರಸ್ತುತ ತೆರೆದಿವೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಯಾವುದೇ ರಸ್ತೆಗಳನ್ನು ಬಂದ್ ಮಾಡಲು ತಾನು ಅನುಮತಿ ನೀಡಿಲ್ಲ. ಅವರು ಅದನ್ನು ಮುಕ್ತವಾಗಿ ತೆರೆದಿಡಬೇಕು ಎಂದು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ
ದಕ್ಷಿಣ ಕನ್ನಡ ಭಾಗದಲ್ಲಿ ಕೇರಳ ಗಡಿಯಿಂದ ಜನರ ಓಡಾಟಕ್ಕೆ ವಿಧಿಸಿ, ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ತಿಳಿಸಿತು. ಬಳಿಕ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿತು.