ಹೆಂಗಿದ್ರಿ ನೀವು..ನಿಮ್ಮಲ್ಲಿ ಮೊದಲ ಯಡಿಯೂರಪ್ಪ ಕಾಣಿಸ್ತಾ ಇಲ್ಲ: ಸಿದ್ದರಾಮಯ್ಯ
ಬೆಂಗಳೂರು, ಅ 12: "ಹೆಂಗಿದ್ರಿ ನೀವು.. ನನಗೇನೋ ಮೊದಲ ಯಡಿಯೂರಪ್ಪ ನಿಮ್ಮಲ್ಲಿ ಕಾಣಿಸುತ್ತಾ ಇಲ್ಲ. ಆ ಹಿಂದಿನ ಜಬರ್ದಸ್ತಿ ನಿಮ್ಮಲ್ಲಿ ಇಲ್ಲ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ಬಗ್ಗೆ ಸದನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಸದನದಲ್ಲಿ ಬರ ಪರಿಹಾರದ ವಿಚಾರದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನಾವು ಬಿಜೆಪಿ ಸೋಲಬೇಕೆಂದು ಬಯಸಿದ್ದೆವು. ಆದರೆ, ಜನ ನಿಮಗೆ ಆಶೀರ್ವಾದ ಮಾಡಿದ್ದಾರೆ. 25 ಸಂಸರಿದ್ದೀರಾ, ಹಣಕಾಸು ಸಚಿವರು ಮತ್ತು ಪ್ರಧಾನಿಗಳ ಹತ್ತಿರ ನೀವು ಮಾತನಾಡಬೇಕು" ಎಂದು ಬಿಎಸ್ವೈಗೆ, ಸಿದ್ದು ಸಲಹೆಯನ್ನು ನೀಡಿದರು.
ಸಿದ್ದರಾಮಯ್ಯ-ಮಾಧುಸ್ವಾಮಿ: ರಾಮ-ರಾವಣ ವೇಷ ಅದಲು-ಬದಲು
"ನನಗೂ ನೆನಪಿದೆ. ಯಡಿಯೂರಪ್ಪ ಸದನದಲ್ಲಿ ಗುಡುಗುತ್ತಾರೆ ಎನ್ನುವ ಮಾತನ್ನು ನಾನೂ ಹಿಂದೆಯಿಂದಲೂ ಕೇಳಿದ್ದೆ. ಆದರೆ, ಈಗ ಯಡಿಯೂರಪ್ಪ ಗುಡುಗುವುದೂ ಇಲ್ಲ, ಮಿಂಚುವುದೂ ಇಲ್ಲ" ಎಂದು ಸಿದ್ದರಾಮಯ್ಯ, ಸದನದಲ್ಲಿ ತಮಾಷೆಯ ಮಾತನ್ನಾಡಿದ್ದಾರೆ.
"ಮೊದಲನೇ ಯಡಿಯೂರಪ್ಪ ಆಗೋಕೆ ನೀವೆಲ್ಲೆ ಬಿಡುತ್ತೀರಿ" ಎನ್ನುವ ಸಚಿವ ಮಾಧುಸ್ವಾಮಿ ಮಾತಿಗೆ ತಿರುಗೇಟು ನೀಡಿದ ಸಿದ್ದರಾಯಮ್ಮ, "ನಾನು ಸಾಫ್ಟ್ ಆಗ್ಬಿಟ್ಟಿದ್ದೀನಿ. ಆದರೆ, ಯಡಿಯೂರಪ್ಪನವರು ಸಾಫ್ಟ್ ಆಗಬಾರದು" ಎಂದು ಹೇಳಿದರು.
"ರೀ ವಿಶ್ವನಾಥ್, ಸತೀಶ್ ರೆಡ್ಡಿ ನಿಮ್ಮಿಂದಲೇ ಅವರು ಸಾಫ್ಟ್ ಆಗಿದ್ದು. ನೀವು ಲಾ ಮಿನಿಸ್ಟರ್ ಆದಮೇಲೆ ಯಡಿಯೂರಪ್ಪ ಅವರು ಹೀಗಾಗಿದ್ದು" ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
"ಜನ ಈಗ ನಿಮಗೆ ಇನ್ನೂ ಶಕ್ತಿಯನ್ನು ನೀಡಿದ್ದಾರೆ. ಜಬರ್ದಸ್ತ್ ಆಗಿ ಕೇಂದ್ರದಿಂದ ಪರಿಹಾರವನ್ನು ನೀವು ತೆಗೆದುಕೊಂಡು ಬರಬೇಕು. ಆದರೆ, ಹಿಂದಿನ ಆ ಜಬರ್ದಸ್ತ್ ನಿಮ್ಮಲ್ಲಿ ಕಾಣಿಸ್ತಾ ಇಲ್ಲಾ" ಎಂದು ಸಿದ್ದರಾಮಯ್ಯ ಹೇಳಿದರು.