ನಾಳೆ 'ಸ್ವರಾಜ್ ಇಂಡಿಯಾ' ಪಕ್ಷದಲ್ಲಿ 'ಸರ್ವೋದಯ ಕರ್ನಾಟಕ' ವಿಲೀನ
ನಾಳೆ ದೇವನೂರು ಮಹಾದೇವ ನೇತೃತ್ವದ ಸರ್ವೋದಯಾ ಕರ್ನಾಟಕ ಪಕ್ಷವು ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಸ್ಥಾಪಿಸಿರುವ ಸ್ವರಾಜ್ ಇಂಡಿಯಾದಲ್ಲಿ ವಿಲೀನವಾಗಲಿದೆ.
ಬೆಂಗಳೂರು, ಮಾರ್ಚ್ 24: ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 'ಸರ್ವೋದಯ ಕರ್ನಾಟಕ ಪಕ್ಷ' 'ಸ್ವರಾಜ್ ಇಂಡಿಯಾ' ಪಕ್ಷದಲ್ಲಿ ಲೀನವಾಗಲಿದೆ.
ದೇವನೂರು ಮಹಾದೇವ ನೇತೃತ್ವದ ಸರ್ವೋದಯಾ ಕರ್ನಾಟಕ ಪಕ್ಷವು ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಸ್ಥಾಪಿಸಿರುವ ಸ್ವರಾಜ್ ಇಂಡಿಯಾದಲ್ಲಿ ವಿಲೀನವಾಗಲಿದ್ದು 'ಸಮ್ಮಿಲನ' ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.[ಉತ್ತರ ಪ್ರದೇಶದ ಗೆಲುವು ಬಿಜೆಪಿಗೇ ತಿರುಗು ಬಾಣವಾಗಲಿದೆ-ದೇವನೂರು]
ಈ ಹಿಂದೆ ಮಾತನಾಡಿದ್ದ ಸಾಹಿತಿ ದೇವನೂರು ಮಹಾದೇವ, "ಇವತ್ತಿನ ವಿಧ್ವಂಸಕ ರಾಜಕಾರಣದ ಅಟ್ಟಹಾಸದ ನಡುವೆಯೇ ರಚನಾತ್ಮಕ ರಾಜಕಾರಣವನ್ನು ಕಟ್ಟುವ ನಿಟ್ಟಿನಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಮುಂದಾಗಿದೆ. ಇದು ಸರ್ವೋದಯ ಕರ್ನಾಟಕ ಪಕ್ಷದ ಆಶಯಗಳಿಗೂ ರೆಕ್ಕೆ ಮೂಡಿಸಿದೆ. ಹಾಗಾಗಿ ನಮ್ಮ ಪಕ್ಷವನ್ನು ಸ್ವರಾಜ್ನಲ್ಲಿ ವಿಲೀನಗೊಳಿಸಲು ನಿರ್ಧ ರಿಸಲಾಗಿದೆ," ಎಂದು ಹೇಳಿದ್ದರು.
ಸಮ್ಮಿಲನ
ಮಾರ್ಚ್ 25ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳ್ಳಲಿದೆ. ಸುಮಾರು 10 ವರ್ಷಗಳಿಂದ ರಾಜಕೀಯದಲ್ಲಿ ವಿಶೇಷ ರೀತಿಯಲ್ಲಿ ತೊಡಗಿಸಿಕೊಳ್ಳಲು, ವಿಸ್ತರಿಸಿಕೊಳ್ಳಲು ಕಾತರಿಸುತ್ತಿದ್ದ ನಮಗೆ ಸ್ವರಾಜ್ ಪಕ್ಷದ ರೂಪದಲ್ಲಿ ಕಾಲ ಕೂಡಿ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ರಚನಾತ್ಮಕ ರಾಜಕಾರಣ ಕಟ್ಟುವುದು ತುಂಬಾ ಕಷ್ಟದ ಕೆಲಸ. ಅದರ ನಡುವೆಯೇ ನಾವು ಕಾರ್ಯಶೀಲರಾಗಲೇಬೇಕಿದೆ ಎಂದು ಈಗಾಗಲೇ ದೇವನೂರು ಹೇಳಿದ್ದಾರೆ.[ಕಂಬಳ ಇರಲಿ, ಪನಿಕುಲ್ಲನೆ ಬೇಡ: ದೇವನೂರು ಮಹಾದೇವ]
ದಿಢೀರ್ ನಿರ್ಧಾರವಲ್ಲ
ವಿವೇಕದಿಂದ ಮತ್ತು ಪ್ರಾಯೋಗಿಕವಾಗಿ ರಾಜಕೀಯ ಕ್ಷೇತ್ರದಲ್ಲಿ 'ಸ್ವರಾಜ್ ಇಂಡಿಯಾ' ಸ್ಥಾಪನೆಯಾಗಿದೆ. ನಮ್ಮ ಪಕ್ಷದ ವಿಲೀನದ ವಿಚಾರ ದಿಢೀರ್ ನಿರ್ಧಾರವಲ್ಲ. ಆಮ್ ಆದ್ಮಿ ಪಕ್ಷ(ಎಎಪಿ)ವು ಹೊಸದಿಲ್ಲಿಯಲ್ಲಿ ಸರ್ಕಾರ ರಚಿಸುವ ಮೂಲಕ ಭಾರತದ ರಾಜಕಾರಣಕ್ಕೆ ದಿಕ್ಕಾಗುತ್ತದೆ ಎಂಬ ಆಸೆಯನ್ನು ಮೂಡಿಸಿತ್ತು. ಹಾಗಾಗಿ ಅದರ ಜತೆ ವಿಲೀನ ಮಾಡುವ ಚಿಂತನೆ ಇತ್ತು. ಅಷ್ಟರಲ್ಲಿ ಅದು ವಿಘಟನೆಯಾಗಿ ರಾಜಕಾರಣವನ್ನು ದಿಕ್ಕೆಡಿಸಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಯಾರಿದ್ದು ಸ್ವರಾಜ್ ಇಂಡಿಯಾ?
ಎಎಪಿಯಿಂದ ಹೊರಬಿದ್ದ ಯೋಗೇಂದ್ರ ಯಾದವ್, ಖ್ಯಾತ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಪ್ರೊ.ಆನಂದ್ ಕುಮಾರ್ ಮತ್ತಿತರರು ತಳಮಟ್ಟದಿಂದ ರಾಜಕಾರಣ ಕಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಸ್ವರಾಜ್ ಅಭಿಯಾನ ಆರಂಭಿಸಿದ್ದರು. ಇದರಲ್ಲಿ ಜೈ ಕಿಸಾನ್ ಆಂದೋಲನ್, ಯೂತ್ ಫಾರ್ ಸ್ವರಾಜ್, ಶಿಕ್ಷಣ್ ಸ್ವರಾಜ್, ಭ್ರಷ್ಟಾಚಾರ ವಿರೋಧಿ ಆಂದೋಲನ್, ಅಮ್ಮ ಸೌಹಾರ್ದ ಸಮಿತಿ ಅಸ್ತಿತ್ವ ಇತ್ಯಾದಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅಂತಿಮವಾಗಿ ಅಭಿಯಾನವನ್ನು ಸ್ವರಾಜ್ ಇಂಡಿಯಾ ಪಕ್ಷವಾಗಿ ಸ್ಥಾಪಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧೆ
ಮಾ.25ರಂದು ಸ್ವರಾಜ್ ಇಂಡಿಯಾ ಪಕ್ಷದಲ್ಲಿ ಹೊಸ ಸಮಿತಿಯನ್ನು ರಚಿಸಲಾಗುತ್ತದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಸ್ಪರ್ಧಿಸುವ ಬಗ್ಗೆ ಈ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. ಈ ಸಮಿತಿ ನಿರ್ಣಯಕ್ಕೆ ನಾನೂ ಬದ್ಧನಾಗಿರುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಬೇಕು ಎಂಬುದು ನನ್ನ ವೈಯಕ್ತಿಕ ಆಶಯ ಎಂದು ದೇವನೂರು ಹೇಳಿದ್ದಾರೆ.
ಗಣ್ಯರ ಉಪಸ್ಥಿತಿ
ಸ್ವರಾಜ್ ಇಂಡಿಯಾಕ್ಕೆ ವಾಸ್ತವದ ಅರಿವಿದೆ. ಆ ಪಕ್ಷದಲ್ಲಿ ಅಧ್ಯಕ್ಷರ ಕೈ ನಲ್ಲಿ ಅಧಿಕಾರ ಕೇಂದ್ರೀಕರಣವಾಗಿ ಇರುವುದಿಲ್ಲ ಎಂದು ದೇವನೂರು ಪ್ರತಿಪಾದಿಸಿದ್ದಾರೆ. ಸಮ್ಮಿಲನ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ, ದಲಿತ ಸಂಘರ್ಷ ಸಮಿತಿಯ ವಿ ನಾಗರಾಜ್, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ರೈತ ಸಂಘದ ಪುಟ್ಟಣ್ಣಯ್ಯ ಭಾಗವಹಿಸಲಿದ್ದಾರೆ.