ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ

|
Google Oneindia Kannada News

ಚಿಕ್ಕಬಳ್ಳಾಪುರ, ಮಾ.3 :ತೀವ್ರ ಪ್ರತಿಭಟನೆ, ಬಂದ್, ಧಿಕ್ಕಾರ, ಬಂಧನ ಮುಂತಾದವುಗಳ ನಡುವೆಯೇ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಹೊರವಲಯದ ವೀರಾಂಜನೇಯ ದೇವಾಲಯದ ಹಿಂಭಾಗದ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ 12,912 ಕೋಟಿ ರೂ. ಮೊತ್ತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಶಂಕುಸ್ಥಾಪನೆಗೆ ಅಡ್ಡಿಯುಂಟುಮಾಡಬೇಕೆಂದು ವೇದಿಕೆ ಬಳಿ ನುಗ್ಗಿದ ಮಾಜಿ ಸಚಿವ ಬಚ್ಚೇಗೌಡ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ದಿ, ಕೆ.ಬಿ.ನಾಗರಾಜ್, ಸೇರಿದಂತೆ 500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು.

laid foundation stone for Yettinahole

ಆದಿಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಟಿಬಿ ಜಯಚಂದ್ರ, ರಾಮಲಿಂಗಾ ರೆಡ್ಡಿ ಮುಂತಾದವರು ಸಿದ್ದರಾಮಯ್ಯ ಅವರ ಜೊತೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಎಲ್ಲಾ ನಾಯಕರು ಜನರಿಗೆ ಭರವಸೆ ನೀಡಿ, ಬಂದ್ ಕೈ ಬಿಡುವಂತೆ ಮನವಿ ಮಾಡಿದರು.

ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎತ್ತಿನಹೊಳೆ ಯೋಜನೆ ಕುಡಿಯುವ ನೀರು ಒದಗಿಸಲು, ಇದು ವ್ಯವಸಾಯದ ಉದ್ದೇಶಕ್ಕಲ್ಲ ಎಂದು ಸ್ಪಷ್ಟಪಡಿಸಿದರು. ಕೋಲಾರ. ಚಿಕ್ಕಬಳ್ಳಾಪುರ ಭಾಗದಲ್ಲಿ ನದಿಗಳಿಲ್ಲ. ಎಲ್ಲರಿಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ ಆದ್ದರಿಂದ ಯೋಜನೆಯನ್ನು ಆರಂಭಿಸಿದ್ದೇವೆ ಎಂದರು.

ಯೋಜನೆ ಜಾರಿಗೊಂಡರೆ, ದಕ್ಷಿಣ ಕನ್ನಡ ಜಿಲ್ಲೆಗೆ ನೀರಿನ ಕೊರತೆ ಉಂಟಾಗುತ್ತದೆ ಎಂದು ಕೆಲವು ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯೋಜನೆಯಿಂದ ಆ ಭಾಗದ ಜನರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಕುಡಿಯುವ ನೀರು ಮತ್ತು ಕೆರೆಗಳನ್ನು ತುಂಬಿಸಲು ಮಾತ್ರ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ, ಯೋಜನೆಯ ನೀರನ್ನು ವ್ಯವಸಾಯದ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಯೋಜನೆಯಿಂದ 24 ಟಿಎಂಸಿ ನೀರು ದೊರೆಯುತ್ತದೆ ಇದರಲ್ಲಿ 15 ಟಿಎಂಸಿ ಕುಡಿಯುವ ನೀರಿಗೆ ಮತ್ತು 9 ಟಿಎಂಸಿ ನೀರು ಕೆರೆಗಳನ್ನು ತುಂಬಿಸಲು ಉಪಯೋಗಿಸಲಾಗುತ್ತದೆ. ಜಿಲ್ಲೆಯ ಕೆರೆಗಳನ್ನು ಶೇ 50 ರಷ್ಟು ಮಾತ್ರ ತುಂಬಿಸಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 12,912 ಕೋಟಿ ರೂ. ಮೊತ್ತದಲ್ಲಿ ಯೋಜನೆ ಕೈಗೊಂಡಿದ್ದೇವೆ. ಇದರಿಂದ ಈ ಭಾಗದ ಜನರ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಯೋಜನೆಯನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಜನರಿಗೆ ಭರವಸೆ ನೀಡಿದರು. [ಶಂಕುಸ್ಥಾಪನೆ ಚುನಾವಣಾ ಗಿಮಿಕ್ : ದೇವೇಗೌಡ]

ಮೊಯ್ಲಿ ಹೇಳಿದ್ದೇನು : ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಯೋಜನೆಗೆ ಇದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಒಂದು ತಿಂಗಳವೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ಯೋಜನೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದೆ. ಯೋಜನೆ ಮೂಲಕ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮುಂತಾದ ಜಿಲ್ಲೆಗಳಿಗೆ 24.1 ಟಿಎಂಸಿ ನೀರು ಲಭ್ಯವಾಗಲಿದೆ ಎಂದರು.

ನೇತ್ರಾವತಿ ತಿರುವು ಯೋಜನೆಯಲ್ಲ : ಎತ್ತಿನಹೊಳೆ ಯೋಜನೆ ನೇತ್ರಾವತಿ ನದಿ ತಿರುವು ಯೋಜನೆ. ಇದರಿಂದ ಪಶ್ಚಿಮ ಘಟ್ಟ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹಾನಿಯಾಗುತ್ತದೆ ಎಂದು ಜನರು ತಿಳಿದುಕೊಂಡಿದ್ದಾರೆ. ಆದರೆ, ಇದು ನೇತ್ರಾವತಿ ನದಿ ತಿರುವು ಯೋಜನಯಲ್ಲ. ಯೋಜನೆಗಾಗಿ ನಾವು ನೇತ್ರಾವತಿ ನದಿಯಿಂದ ಒಂದು ಹನಿ ನೀರನ್ನು ಬಳಸಿಕೊಳ್ಳುವುದಿಲ್ಲ, ನೇತ್ರಾವತಿ ನದಿಯ 8 ಉಪನದಿಗಳ ನೀರನ್ನು ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಮೋಯ್ಲಿ ಸ್ಪಷ್ಟಪಡಿಸಿದರು.

ಇತ್ತ ವಿರೋಧ : ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಯೋಜನೆಯ ಶಂಕುಸ್ಥಾಪನೆ ಖಂಡಿಸಿ ಸೋಮವಾರ ಕರೆ ನಿಡಿದ್ದ ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗೆಯಿಂದಲೇ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬಸ್ ಸಂಚಾರ ಸ್ಥಗಿತಗೊಂಡಿತ್ತು.[ದಕ್ಷಿಣ ಕನ್ನಡ ಬಂದ್ ಯಶಸ್ವಿ]

ಸಂಪುಟ ಸಭೆಯ ಒಪ್ಪಿಗೆ : ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಮೊತ್ತ 12,912.36 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಯೋಜನೆ ಅನ್ವಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ನೀರು ಒದಗಿಸಬಹುದಾಗಿದೆ. [ಎತ್ತಿನ ಹೊಳೆ ಯೋಜನೆ ಕುರಿತು ಓದಿ]

English summary
CM Siddaramaiah laid foundation stone for Yettinahole project in Chikkaballapur on Monday, March 3. In his speech he said, Yettinahole project is only for drinking water propose, it is not for irrigation project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X