ಫೆ.7ರಂದು ಎತ್ತಿನಹೊಳೆ ಯೋಜನೆ ಕುರಿತ ಮಹತ್ವದ ತೀರ್ಪು ಪ್ರಕಟ
ಎತ್ತಿನಹೊಳೆ ಯೋಜನೆ ಕುರಿತ ಮಹತ್ವದ ತೀರ್ಪು ಮಂಗಳವಾರ(ಫೆಬ್ರವರಿ 07)ದಂದು ಪ್ರಕಟವಾಗಲಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತೀರ್ಪು ಪ್ರಕಟಿಸಲಿದೆ. ನ್ಯಾಯಾಧೀಕರಣದ ದಕ್ಷಿಣ ಪೀಠಕ್ಕೆ ತೆರಳುವಂತೆ ಸೂಚಿಸುವ ಸಾಧ್ಯತೆ
ನವದೆಹಲಿ, ಫೆಬ್ರವರಿ 07: ಎತ್ತಿನಹೊಳೆ ಯೋಜನೆ ಕುರಿತ ಮಹತ್ವದ ತೀರ್ಪು ಮಂಗಳವಾರ(ಫೆಬ್ರವರಿ 07)ದಂದು ಪ್ರಕಟವಾಗಲಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತೀರ್ಪು ಪ್ರಕಟಿಸಲಿದೆ.
ನ್ಯಾಯಾಧೀಕರಣದ ದಕ್ಷಿಣ ಪೀಠಕ್ಕೆ ತೆರಳುವಂತೆ ಸೂಚಿಸುವ ಸಾಧ್ಯತೆಯಿದ್ದು, ಪರಿಸರ ಹೋರಾಟಗಾರರಿಗೆ ಇದರಿಂದ ಹಿನ್ನಡೆಯಾಗಲಿದೆ.['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ಎತ್ತಿನ ಹೊಳೆ ಯೋಜನೆ ಕುರಿತು ವಿಚಾರಣೆಯನ್ನು ದಕ್ಷಿಣ ವಿಭಾಗದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ (ಎನ್ಜಿಟಿ) ಮುಂದುವರಿಸುವ ಕುರಿತಂತೆ ಹೊರಡಿಸುವುದಾಗಿ ದೆಹಲಿಯ ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ್ಯ ಕುಮಾರ್ ಹೇಳಿದ್ದಾರೆ.
ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತ ವರದಿಯ ಅಗತ್ಯವಿಲ್ಲ. ಕೆಲವು ಷರತ್ತುಗಳೊಂದಿಗೆ ಅನುಮತಿ ಲಭಿಸಿದೆ. ಹೀಗಾಗಿ ಈ ಯೋಜನೆಗೆ ವರದಿಯ ಅಗತ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಪರವಾಗಿ ವಕೀಲರು ವಾದ ಮಂಡಿಸಿದರು.
ಯೋಜನೆ ವಿವರ : ಚಿಕ್ಕಮಗಳೂರಿನ ಸಂಸೆಯಲ್ಲಿ ಉಗಮವಾಗುವ ನೇತ್ರಾವತಿ ತನ್ನೊಳಗೆ ಹಲವು ಉಪನದಿಗಳನ್ನು ಸೇರ್ಪಡೆ ಮಾಡಿಕೊಂಡು ಉಪ್ಪಿನಂಗಡಿ ಸಮೀಪ ಕುಮಾರಧಾರ ನದಿಯೊಂದಿಗೆ ಸೇರಿ ಸಮುದ್ರದ ಕಡೆ ಹರಿಯುತ್ತದೆ. ಇದರಿಂದ ಸುಮಾರು 200 ಟಿಎಂಸಿಯಷ್ಟು ನೀರು ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತದೆ.
ನೀರಾವರಿ ತಜ್ಞ ದಿ.ಡಾ.ಜಿ.ಎಸ್.ಪರಮಶಿವಯ್ಯ ಅವರ ವರದಿಯಲ್ಲಿರುವುದು ಇದೇ. ಈ ವರದಿಯನ್ನಾಧರಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ರೈತರು ಹೋರಾಟ ಮಾಡುತ್ತಿದ್ದರು. ಹೋರಾಟಕ್ಕೆ ಅಂದಿನ ಸಿಎಂ ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ ಸ್ಪಂದಿಸಿ ಸಮೀಕ್ಷೆ ನಡೆಸಲು ಮುಂದಾಯಿತು.
ಯೋಜನೆ ಬೇಡ: ಈ ಕುರಿತಂತೆ ಜಪಾನ್ನ ಸಂಸ್ಥೆ ಸಮೀಕ್ಷೆ ನಡೆಸಿತು. ಮತ್ತೊಂದೆಡೆ ಹೈದರಾಬಾದ್ ಮೂಲದ ಸಂಸ್ಥೆಯೊಂದೂ ಕೂಡ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತು. ಈ ಎರಡೂ ವರದಿಯಲ್ಲಿ ಪಶ್ಚಿಮವಾಹಿನಿ ಯೋಜನೆ(ಮೂಲ ಎತ್ತಿನ ಹೊಳೆ ಯೋಜನೆ) ಅನುಷ್ಠಾನ ಅಷ್ಟೊಂದು ಸುಲಭವಲ್ಲ. ಇದಕ್ಕೆ ಅಪಾರ ಹಣ ಬೇಕಾಗುತ್ತದೆ.
ಬಯಲು ಸೀಮೆ ಮತ್ತು ಪಶ್ಚಿಮಘಟ್ಟದ ಹಲವೆಡೆ ಮುಳುಗಡೆಯಾಗಲಿದೆ. ಇದಕ್ಕೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತೊಡಕಾಗಲಿದೆ. ಇದರ ಬದಲಿಗೆ ಭದ್ರಾ ಮೇಲ್ದಂಡೆ ಸೇರಿದಂತೆ ಬಿಡಿ ಬಿಡಿಯಾಗಿ ಕೆಲವು ಯೋಜನೆ ರೂಪಿಸಿ, ಬಯಲು ಸೀಮೆಯ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದೆಂಬ ಶಿಫಾರಸುಗಳನ್ನು ಮಾಡಿತು. ಜತೆಗೆ ಪರಿಸರವಾದಿಗಳು ಕೂಡಾ ಯೋಜನೆ ವಿರುದ್ಧ ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದರು.