ಅನ್ನಭಾಗ್ಯದಡಿ 7 ಅಥವ 5 ಕೆಜಿ ಅಕ್ಕಿ?, ಇನ್ನೂ ಗೊಂದಲ
ಬೆಂಗಳೂರು, ಜುಲೈ 25 : 'ಅನ್ನಭಾಗ್ಯ' ಯೋಜನೆಯಡಿ ಎಷ್ಟು ಅಕ್ಕಿ ಹಂಚಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಜಮೀರ್ ಅಹಮದ್ ಖಾನ್ ನಡುವೆ ಜಟಾಪಟಿ ನಡೆಯುತ್ತಿದೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಎಷ್ಟು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ? ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕಿದೆ' ಎಂದರು.
ಅನ್ನಭಾಗ್ಯ ಯೋಜನೆ : ಮುಖ್ಯಮಂತ್ರಿಗಳಿಗೆ ಜಮೀರ್ ಪತ್ರ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ, 'ಅಕ್ಕಿ ಕಡಿತ ಮಾಡುವ ಬಗ್ಗೆ ನನ್ನ ಅಥವ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿಲ್ಲ. ಪ್ರತಿ ಫಲಾನುಭವಿಗೆ 7 ಕೆ.ಜಿ. ಅಕ್ಕಿ ವಿತರಿಸುವುದನ್ನು ಮುಂದುವರೆಸುತ್ತೇವೆ' ಎಂದು ಹೇಳಿದ್ದರು.
ಗೊಂದಲಕ್ಕೆ ಕಾರಣವೇನು? : ಮಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 2017-18ನೇ ಬಜೆಟ್ ಮಂಡನೆ ಮಾಡಿದಾಗ ಅನ್ನಭಾಗ್ಯ ಯೋಜನೆಯ ಮೌಲ್ಯವರ್ಧನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
ಪ್ರತಿ ಫಲಾನುಭವಿಗೆ 5 ಕೆ.ಜಿ ಉಚಿತ ಅಕ್ಕಿ ನೀಡಲಾಗುತ್ತದೆ. ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ. ತೊಗರಿಬೇಳೆ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆ.ಜಿ. ಪಾಮ್ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ ಉಪ್ಪು ಹಾಗೂ 1 ಕೆ.ಜಿ. ಸಕ್ಕರೆ ವಿತರಣೆ ಮಾಡುವುದಾಗಿ ಹೇಳಿದ್ದರು.
ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಫಲಾನುಭವಿಗೆ ನೀಡುವ ಅಕ್ಕಿಯನ್ನು 5 ಕೆಜಿಗೆ ಕಡಿತ ಮಾಡಬಾರದು ಎಂದು ಒತ್ತಾಯಿಸಿದ್ದರು.