ಹೌದು ಹಿಂದೂ ಭಯೋತ್ಪಾದನೆ ಇದೆ; ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲ
ಬೆಂಗಳೂರು, ನವೆಂಬರ್ 3: ಹೌದು ಹಿಂದೂ ಭಯೋತ್ಪಾದನೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಮೂಲಕ ನಟ ಕಮಲ್ ಹಸನ್ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಬೆಂಬಲಿಸಿದ್ದಾರೆ.
'ಉತ್ತರ ಕೊಡಿ ಶಾ' ಬಿಜೆಪಿ ವಿರುದ್ದ ಮುಗಿಬಿದ್ದ ದಿನೇಶ್ ಗುಂಡೂರಾವ್
ಮೂಲಭೂತವಾದ ದೇಶದಲ್ಲಿ ಇದೆ. ನಾವು ಇದನ್ನು ಕಂಡು ಓಡಿ ಹೋಗುವುದಲ್ಲ. ಇದನ್ನು ಎದುರಿಸಬೇಕು ಎಂದು ಅವರು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ. ಇಲ್ಲ ಎಂದು ಬಲಪಂಥೀಯರು ಸವಾಲು ಹಾಕುವಂತಿಲ್ಲ. ಕಾರಣ, ಹಿಂದೂಗಳ ಕ್ಯಾಂಪಿನಲ್ಲೂ ಭಯೋತ್ಪಾದನೆ ಹರಡಿದೆ ಎಂದು ಕಮಲ್ ಹಸನ್ ತಮ್ಮ ಅಂಕಣದಲ್ಲಿ ಹೇಳಿದ್ದರು.
ಇದೀಗ ಈ ಸಂಬಂಧ ಅವರ ಮೇಲೆ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 500, 511, 298, 295 (a) ಮತ್ತು 505 (c) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಾಳೆ ಅಂದರೆ ಶನಿವಾರ ನಡೆಯಲಿದೆ.
ತಮಿಳು ನಿಯತಕಾಲಿಕೆಗೆ ಬರೆದ ತಮ್ಮ ವಾರದ ಅಂಕಣದಲ್ಲಿ ಕಮಲ್ ಹಾಸನ್, ಹಿಂದೂ ಸಂಘಟನೆಗಳು ವಿರೋಧಿಗಳ ಧ್ವನಿ ಅಡಗಿಸಲು ಭುಜ ಬಲ ಬಳಸುತ್ತಿದ್ದಾರೆ ಎಂದು ಹೇಳಿದ್ದರು. ಅವರ ಈ ಲೇಖನದ ವಿರುದ್ಧ ಕಿಡಿಕಾರಿದ್ದ ಆರ್.ಎಸ್.ಎಸ್ ಮತ್ತು ಬಿಜೆಪಿ ತಕ್ಷಣ ಈ ಲೇಖನವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು.
ಜತೆ ಜತೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ನರಸಿಂಹ ರಾವ್ ಕಮಲ್ ಹಾಸನ್ ರನ್ನು ಲಷ್ಕರ್ ಇ ತಯ್ಯಬಾ ಸಂಸ್ಥಾಪಕ ಹಫೀಜ್ ಸಯೀದ್ ಗೆ ಹೋಲಿಸಿದ್ದರು.