ಎರಡು ಕ್ಷೇತ್ರಗಳಲ್ಲಿ ಶೀಘ್ರ ಉಪಚುನಾವಣೆ ನಡೆಸಲು ಬಿಎಸ್ವೈ ಕಾರ್ಯೋನ್ಮುಖ
ಬೆಂಗಳೂರು, ಡಿಸೆಂಬರ್ 12: ಉಪಚುನಾವಣೆ ಗೆದ್ದು ಬೀಗುತ್ತಿರುವ ಯಡಿಯೂರಪ್ಪ ಖಾಲಿ ಇರುವ ಇನ್ನೆರಡು ಕ್ಷೇತ್ರಗಳಿಗೂ ಶೀಘ್ರವಾಗಿ ಚುನಾವಣೆ ನಡೆಸಲು ತಯಾರಿ ಆರಂಭಿಸಿದ್ದಾರೆ.
ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿದ್ದರೂ ಸಹ ಆ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿಗಳು ದೂರು ದಾಖಲಿಸಿದ್ದ ಕಾರಣ ಈ ಕ್ಷೇತ್ರಗಲ್ಲಿ ಉಪಚನಾವಣೆ ನಡೆದಿರಲಿಲ್ಲ.
ಸದ್ಯಕ್ಕೆ ಯಾಕಿಲ್ಲ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ?
ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹನ್ನೆರಡಲ್ಲಿ ಗೆದ್ದಿರುವ ಬಿಜೆಪಿ ಪಕ್ಷದ ಪರ ವಾತಾವರಣ ಇರುವ ಇದೇ ಸಮಯದಲ್ಲಿ ಉಳಿದೆರಡು ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯುವಂತೆ ಮಾಡಲು ನಿರ್ಧಿಸಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.
ಯಡಿಯೂರಪ್ಪ ಸೂಚನೆ ಮೇರೆಗೆ ದೂರು ವಾಪಸ್
ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿದ್ದು, ಯಡಿಯೂರಪ್ಪ ಸೂಚನೆಯಂತೆ ಅನರ್ಹ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ್ ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ.
213 ಮತಗಳ ಅಂತರದಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್
ಪ್ರತಾಪ್ ಗೌಡ ಪಾಟೀಲ್ ಅವರು ಎದುರಾಳಿ ಬಸನಗೌಡ ತುರ್ವಿಹಾಳ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಫಲಿತಾಂಶದ ನಂತರ ಬಸನಗೌಡ ತುರ್ವಿನಾಳ್ ಅವರು, 'ಪ್ರತಾಪ್ ಗೌಡ ಪಾಟೀಲ್ ಅವರು ಚುನಾವಣೆ ಗೆಲ್ಲಲು ಅಕ್ರಮ ಮತದಾನ ಮಾಡಿಸಿದ್ದಾರೆ' ಎಂದು ದೂರು ನೀಡಿದ್ದರು. ಇದರ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿತ್ತು. ಆದರೀಗ ಬಸನಗೌಡ ಅವರು ದೂರು ಹಿಂಪಡೆದಿದ್ದಾರೆ.
ಮುನಿರತ್ನ ವಿರುದ್ಧ ಮುನಿರಾಜು ಗೌಡ ದೂರು
ಮತ್ತೊಂದು ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದ ಮುನಿರತ್ನ ವಿರುದ್ಧ ಸೋತ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರು ದೂರು ನೀಡಿದ್ದಾರೆ. ಅಕ್ರಮ ಮತದಾನ ನೆಡೆಸಿದ್ದಾರೆ ಎಂಬ ದೂರು ನೀಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಮುನಿರತ್ನಗೆ ಸಂಕಷ್ಟ: ಕೇಸ್ ವಾಪಸ್ ಪಡೆಯಲು ಒಪ್ಪದ ಮುನಿರಾಜು
ಮುನಿರಾಜು ಗೌಡ ಬಿ.ಎಲ್.ಸಂತೋಶ್ ಬೆಂಬಲಿಗ
ಆದರೆ ಇಲ್ಲಿ ಯಡಿಯೂರಪ್ಪ ಅವರಿಗೆ ಸಮಸ್ಯೆ ಬಗೆಹರಿಸುವುದು ಸುಲಭವಿಲ್ಲ ಎನ್ನಲಾಗುತ್ತಿದೆ. ಮುನಿರಾಜು ಗೌಡ ಅವರು ಬಿ.ಎಲ್.ಸಂತೋಶ್ ಬೆಂಬಲಿತ ಅಭ್ಯರ್ಥಿಯಾಗಿದ್ದು, ಮುನಿರತ್ನ ಅವರು ಬಿಜೆಪಿ ಸೇರಿದಾಗಿನಿಂದಲೂ ಕ್ಷೇತ್ರದಲ್ಲಿ ಅವರಿಗೆ ಅಸಹಕಾರ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರಿಗೆ ಮುನಿರತ್ನ ಮೇಲಿನ ಕೇಸು ಹಿಂತೆಗಿಸುವುದು ಕಷ್ಟಕರ ಎನ್ನಲಾಗುತ್ತಿದೆ.